Sunday, June 5, 2011

ಕವಿತೆ-ಪ್ರಸವ

ಕವಿತೆ ಹುಟ್ಟುವುದು ಅಷ್ಟು
ಸುಲಭವಲ್ಲ ಬಿಡಿ..
ಛಂದ,ಲಯ, ಗೇಯತೆ ಹೀಗೆ
ನೂರೆಂಟು ತೆವಲುಗಳಿಗೆ ಈಡಾಗಿ
ಕವಿತೆ ಹಡೆಯುವುದಿದೆಯಲ್ಲ..
ಬಲು ಪ್ರಯಾಸದ ಕೆಲಸ.
ಸೂಲಗಿತ್ತಿ, ಡಾಕ್ಟರ್ ಹೇರುವ
ಸಿಸೇರಿಯನ್ ಬಿಲ್ಲಿನ ಭಯವಿಲ್ಲ
ಹೊರಗೆ ವಾರ್ಡಿನಲ್ಲಿ ಗಂಡ ಶತಪಥ
ತಿರುಗುವುದಿಲ್ಲ..
ಸಡಗರ ಆತಂಕ ಇಲ್ಲೂ ಇದೆ
ನೋವೂ ತಿನ್ನುವುದಿದೆ..
ಹಾಗೆಯೇ ಅಲ್ಲಿ ಇಲ್ಲಿ ಹಣಿಕಿ
ಸಾಲು ಜೋಡಿಸುವ ಹಿಕಮತ್ತಿದೆ
ಅಂತೂ ಇಂತೂ ಏನಕೇನವಾಗಿ
ಮೇಜಿನ ಮೇಲಿನ ಬಿಳಿಹಾಳೆ ಮೇಲೆ
ಕವಿತೆ ಅಕ್ಷರ ರೂಪವಾಗಿ ಬಿರಿಯುತ್ತದೆ..
ಖುಷಿ ನಿರಂತರವಲ್ಲ ನಿಂತಿದ್ದಾನೆ ಅಲ್ಲಿ
ವಿಮರ್ಶಕ ಮಹಾಶಯ ಕತ್ತಿ ಹಿರಿದು
ಕವಿತೆ ಮುಲುಗುಟ್ಟುತ್ತದೆ ತೆವಳುತ್ತದೆ..
ಅವನ ಮೊಗದಲ್ಲಿನ ನಗು
ಕತ್ತಿ ಅಂಚಿಗೆ ಜಿನುಗುವ ರಕ್ತ ಅದಾಗಲೇ
ಕವಿತೆಗೆ ಚರಮಗೀತೆ ಬರೆದಾಗಿರುತ್ತದೆ.....

4 comments:

  1. ಸರಳ..
    ಸುಂದರ... ವಿಡಂಬನೆ ಚೆನ್ನಾಗಿದೆ....

    ReplyDelete
  2. ಕವನಕ್ಕೆ ಕತ್ತಿಯನ್ನು ಸೋಂಕಿಸುವ ವಿಮರ್ಶಕನ ಮೇಲೆಯೇ ನಿಮ್ಮ ಕಾವ್ಯಖಡ್ಗ ಎರಗಿದೆ! ಸುಂದರವಾದ ಕವನ.

    ReplyDelete
  3. kavite huttuva samaya
    vimarshakana hirida katti
    suttellaa bhayava bhitti-
    tevali-nusuluva kavana
    khdgakke rakta tarpana.
    Hechchina kavithaagalanna kaviyalle iro vimarshakaane khooni maadodu bhaala veeparyasada sangati nodree desayara matta.
    chendada kavana.

    ReplyDelete
  4. ಹುಟ್ಟಿದ ಕವನಗಳೆಲ್ಲಾ ಸತ್ತರೆ ವಿಮರ್ಶಕ ’ಕಂಸ’ ಪದವಿಗೇರುತ್ತಾನೆ. ಸದ್ಯ ಹಾಗಿಲ್ಲ, ಆದರೂ ಗಾಡಿ ಓಡಿಸುವಾಗ ಟ್ರಾಫಿಕ್ ರೂಲ್ಸ್ ಇರುವ ಹಾಗೇ ಸಾಹಿತ್ಯರಚನೆ ಅದರಲ್ಲೂ ಪದ್ಯರಚನೆಯಲ್ಲಿ ಕೆಲವು ಕಟ್ಟಳೆಗಳು ಇದ್ದರೇ ಚೆನ್ನ, ಇಲ್ಲದಿದ್ದರೆ ಪದ್ಯಕ್ಕೂ ಗದ್ಯಕೂ ಯಾವುದೇ ಭೇದವಿರುತ್ತಿರಲಿಲ್ಲ ಮತ್ತು ಪದ್ಯಗಳು ಗೇಯವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಹಾಡುವಾಗ ಎಲ್ಲಿ ಯಾವುದನ್ನು ಹೃಸ್ವಸ್ವರ ಮತ್ತು ಯಾವುದನ್ನು ದೀರ್ಘಸ್ವರ ಮತ್ತು ಯಾವುದು ಪ್ಲುತಸ್ವರ ಮಾಡಬೇಕೆಂಬುದನ್ನು ಲಘು-ಗುರು ಗಣಕಗಳು ನಿರ್ಧರಿಸಿದರೆ ಛಂದಸ್ಸು, ಸಂಧಿ, ಸಮಾಸಗಳು ಸರ್ಕಲ್ ಗಳಲ್ಲಿ ಸಿಗ್ನಾಲ್ ಇದ್ದಹಾಗೇ ನಿಯಂತ್ರಣ ಹೇರುತ್ತವೆ. ನವ್ಯಕಾವ್ಯ ಚೆನ್ನಾಗಿದೆ. ಕವಿತೆ ಹುಟ್ಟುವಾಗಿನ ಪ್ರಸವವೇದನೆಗೆ ಸಾಕ್ಷಿ ಕವಿಯೊಬ್ಬನೇ ಹೊರತು ನೀವೇ ಹೇಳಿದಹಾಗೇ ಇಲ್ಲಿ ಯಾರೂ ಜೊತೆಗಾರರಿಲ್ಲ; ಜೊತೆಗಾರರಿದ್ದರೆ ಕವಿತೆ ಹುಟ್ಟುವುದೇ ಇಲ್ಲ!

    ReplyDelete