Sunday, November 8, 2009

ದಾಖಲು..

ಅಲ್ಬಮ್ ತಿರುವಿದಾಗಲೆಲ್ಲ ಚಿತ್ತದಲ್ಲಿ ಹೊಳೆಯುತ್ತವೆ
ಮರೆಯದ ಅವೆ ಮುಖಗಳು..
ಕಾಲನ ಗತಿಯಲೂ ಕುಂದದ ತಮ್ಮ ವಜನು
ಉಳಿಸಿಹೋದ ಚೆಹರೆಗಳು...
ಅದಾರದೋ ಮದುವೆಯಲ್ಲಿ ಹೊಳೆಯುತ್ತಿರುವ
ಅವ್ವಳ ಮೂಗುಬಟ್ಟು..
ಅಕ್ಕಳ ಕೇದಗೆ ಜಡೆ ಹಿದಿದುಕೊಂಡ ಕನ್ನಡಿ..
ಹೀಗೆ ಪುಟ ತೆರೆದಂತೆ ಸಾರಿನಿಲ್ಲುತ್ತದೆ ಗತ.
ಆ ಡೌಲು, ನಗು ಸುಖ ಎಲ್ಲ ದಾಖಲಿಲ್ಲಿ
ಈ ಫೋಟೋಗಳ ತುಂಬ ಅವರದೇ ಪಾರುಪತ್ಯ.
ಅಲ್ಬಮ್ಮಿನ ಈ ಮಿನುಗುವ ಚೆಹರೆಗಳಿಗೆ ಇನ್ನೊಂದು ರೂಪ ಇದೆ
ಚಿತೆಯ ಮೇಲಿನ ಪ್ರಶಾಂತ ದೇಹ..
ಕೊರೆಯುವ ಚಳಿನಡುವೆ ಛಿಟಿ ಛಿಟಿ ಉರಿದು ಹೋದ ದೇಹ
ಈ ಚಿತ್ರ ಯಾವ ಅಲ್ಬಮ್ಮಿನಲೂ ಇಲ್ಲ
ಎದೆ ತುಂಬ ಮಾತ್ರ ಆ ಚಿತೆ, ಬೆಂಕಿ ಆ ಬೆಂಕಿಯ ನಡುವಿನ
ಪ್ರಶಾಂತ ಮುಖ ಅಚ್ಚೊತ್ತಿದೆ....!

Friday, October 23, 2009

ಕುಛ ತೊ ಲೋಗ್ ಕಹೆಂಗೆ....

ಹಿಂದಿ ಸಿನೇಮದ ಇತಿಹಾಸ ಗಮನಿಸಿದರೆ ಗಾಯಕರಾಗಿ ರಫಿ,ಮುಕೇಶ್ ಹಾಗೂ ಮನ್ನಾಡೆ ಛಾಪು ಒತ್ತಿದ್ದಾರೆ ಪೀಳಿಗೆಯಿಂದ ಪೀಳಿಗೆ ಇವರು ಹಾಡಿದ ಹಾಡು ಗುನುಗುತ್ತ ಬಂದಿದ್ದಾರೆ. ಒಂದರ್ಥದಲ್ಲಿ ಈ ಗಾಯಕರು ಯುಗಪ್ರವರ್ತಕರು ಈ ಮಹಾನ್ ಸಾಧಕರ ನಡುವೆ ಆಗೊಮ್ಮೆ ಈಗೊಮ್ಮೆ ಮಿನುಗುತ್ತಿದ್ದ ದನಿಯೂ ಇತ್ತು ಅದೇ ಕಿಶೋರ್
ಕುಮಾರ್ ನದು. ಶಾಸ್ತ್ರೀಯ ಸಂಗೀತದ ಅಧ್ಯಯನ ಮಾಡಿಲ್ಲ ಅನ್ನೋ ಕೊರಗು ಕಿಶೋರ್ ಗಿತ್ತು ಅದಕ್ಕಾಗಿಯೇ ಕೆಲ ಪಂಡಿತ
ಅನಿಸಿಕೊಂಡ ಸಂಗೀತ ನಿರ್ದೇಶಕರ ಬಳಿ ಕಿಶೋರ್ ಹಾಡಲು ಆಗಲೇ ಇಲ್ಲ. ಅದು ನೌಶಾದ್ ಆಗಿರಬಹುದು ,ರೋಶನ್ ಇರಬಹುದು ಅಥವಾ ಮದನ್ ಮೋಹನ್ ಆಗಿರಬಹುದು ಕಿಶೋರ್ ಬಗ್ಗೆ ಅವರಿಗೆ ಒಲವಿರಲಿಲ್ಲ.ಅಥವಾ ಅವರು ಕಂಪೋಜಿಸಿದ
ಲಾಲಿತ್ಯದ ಹಾಡುಗಳಿಗೆ ಕಿಶೋರ್ ದನಿ ಹೊಂದುತ್ತಿರಲಿಲ್ಲ.ಒಟ್ಟಿನಲ್ಲಿ ಮೇಲೆ ಉಲ್ಲೇಖಿಸಿದ ತ್ರಿಮೂರ್ತಿಗಳ ನಡುವೆ ಪೋಷಣೆ ಇಲ್ಲದೆ ಕಿಶೋರ್ ಮುರಟಿಹೋಗಬೇಕಾಗಿತ್ತು ಆದರೆ ಹಾಗಾಗಲಿಲ್ಲ.ತನ್ನಲ್ಲಿರೋ ನ್ಯೂನತೆ ಬೇರೆ ರೀತಿಯಿಂದ ಕಿಶೋರ್ ಕಮಿಮಾಡಿಕೊಂಡ.ಅವನ ನೆರವಿಗೆ ಬಂದಿದ್ದು " ಯೋಡಲ್ಯೂಯು...".
ಆಸ್ಟ್ರಿಯಾ, ಸ್ವಿಸ್ ದೇಶದ ರಾಕ್ ಬ್ಯಾಂಡ್ ನಲ್ಲಿ "ಯೋಡಲೆ.." ಪ್ರಚಲಿತವಿತ್ತು ಮೂಲತಃ ಆಲ್ಪ್ಸ ಪರ್ವತಾರೋಹಿಗಳು ಸಂವಹನಕಲೆಯಾಗಿ ಅದು ಬಳಕೆ ಮಾಡಿಕೊಳ್ಳುತ್ತಿದ್ದರು. ಕಿಶೋರ್ ಗೆ ಈ ಕಲೆ ಬಗ್ಗೆ ಹೇಳಿದವ ಅವನ
ಸೋದರ ಅನೂಪ್ ಕುಮಾರ್. ಕೇಳಿದ ಕಿಶೋರ್ ಗೆ ಅದರ ಗುಂಗು ಹಿಡಿಯಿತು. ದಿನಪ್ರತಿ ಅದರಬಗ್ಗೆ ಅಭ್ಯಸಿಸಿದ. ಗುರುವಾಗಿ
ದೊರೆತವ ಎಸ್.ಡಿ ಬರ್ಮನ್. ಕಿಶೋರನ ಗಾಡ್ ಫಾದರ್ ಈತ. ನವಕೇತನ್ ಬ್ಯಾನರಿನ ಕಾಯಂ ಸಂಗೀತಗಾರ ಬರ್ಮನ್.
ಬರ್ಮನ್ ಕಿಶೋರ್ ಪ್ರತಿಭೆಗೆ ನೀರೆರೆದು ಬೆಳೆಸಿದ. ಕಿಶೊರ್ ಹಾಡಿದ ಹಾಡು ಅಂದರೆ ಅದೊಂದು "happy go" ಹಾಡು
ಎನ್ನೋದು ಪ್ರತೀತಿ. ಸರಳವಾಗಿ,ಸುಲಲಿತ ದನಿ ಅವನದು ಬರ್ಮನ್ ಅರಿವಿಲ್ಲದೆ ಮಹಾನ್ ಗಾಯಕನ ಜನ್ಮಕ್ಕೆ ಕಾರಣಕರ್ತನಾಗಿದ್ದ. ಬರ್ಮನ್ --ಕಿಶೋರ್ ಜುಗಲ್ ಬಂದಿ ಮೋಡಿ ಮಾಡಿತು...ಜನರ ನಾಲಿಗೆಮೇಲೆ ಹಾಡು ಕುಣಿಯಲಾರಂಭಿಸಿದವು....
" ಹಮ್ ಹೈ ರಾಹಿ ಪ್ಯಾರ್ ಕೆ ಹಮ್ ಸೆ ಕುಛ್ ನ ಬೋಲಿಯೆ..."
"ಏಕ್ ಲಡಕಿ ಭೀಗಿ ಭಾಗಿಸಿ..."
" ಮಾನಾ ಜನಾಬ್ ನೆ ಪುಕಾರಾ ನಹಿಂ...."
" ಹಾಲ್ ಕೈಸಾ ಹೈ ಜನಾಬ್ ಕಾ..."
" ಗಾತಾ ರಹೆ ಮೇರಾ ದಿಲ್..."
" ಏ ದಿಲ್ ನ ಹೋತ ಆವಾರಾ...."
ಮೇಲಿನ ಬಹುತೇಕ ಹಾಡು ದೇವಾನಂದನ ಮೇಲೆ ಚಿತ್ರಿತವಾಗಿದ್ದವು.ಈ ಅವಧಿಯಲ್ಲಿ ಬರ್ಮನ್ ಬಿಟ್ಟರೆ ಕಿಶೋರ್ ಇನ್ನೂ ಕೆಲವರ ಬಳಿ ಹಾಡಿದ. ಸಲಿಲ್ ಚೌಧರಿ,ಶಂಕರ್ ಜೈಕಿಶನ್ ,ರವಿ ಹೀಗೆ. "ಸಿಎಟಿ ಕ್ಯಾಟ್ ಕ್ಯಾಟ್ ಮಾನೆ ಬಿಲ್ಲಿ....", " ಜಿವನ್ ಕೆ
ಸಫರ್ ಮೆ ರಾಹಿ ಮಿಲತೆ ಹೈ..."," ಜರೂರತ ಹೈ ಏಕ್ ಶ್ರೀಮತಿಕಿ..." ಈ ಹಾಡುಗಳು ಹಿಟ್ ಅನಿಸಿಕೊಂಡವು.ಈ ನಡುವೆ
ಕಿಶೋರ‍್ ತಾನೇ ನಿರ್ಮಿಸಿದ "ಝುಮರೂ..." ,"ದೂರ್ ಗಗನ್ ಕಿ ಛಾಂವ್ ಮೆ" ದಲ್ಲೂ ಹಾಡಿದ. ಆ ಹಾಡುಹಿಟ್ ಅನಿಸಿಕೊಂಡವು, "ಯೋಡಲೆ ವೂ " ದ ಪ್ರಯೋಗ ಝುಮರು ವಿನ ಟೈಟಲ್ ಸಾಂಗನಲ್ಲಿತ್ತು . ಈ ಹಾಡುಗಳೆಲ್ಲ ಹಿಟ್
ಆದರೂ ಫಿಲ್ಮಿಜನ ಕಿಶೋರನನ್ನು ಒಪ್ಪಿಕೊಂಡಿರಲಿಲ್ಲ. ರಫಿಯ ನಕ್ಷತ್ರ ಹೊಳೆಯುತ್ತಿದ್ದ ದಿನಗಳು. ಶಮ್ಮಿ, ರಾಜೇಂದ್ರಕುಮಾರ್
ಚಿತ್ರಗಳು ಹಿಟ್ ಆಗಲು ರಫಿಯ ದನಿಯೂ ಕಾರಣ.ಅದು ರಫಿರಾಜ್ಯ ಅಲ್ಲಿ ಬೇರೆಯವರು ಸುಳಿಯಲು ಅವಕಾಶ ಇರಲಿಲ್ಲ.
ರಾಯಲ್ಟಿ ವಿಷಯದಲ್ಲಿ ಲತಾ ಜೊತೆ ಮನಸ್ತಾಪ ಆದಾಗ ಸುಮನ್ ಕಲ್ಯಾಣಪೂರಕರ್ ಜೊತೆ ರಫಿ ಹಾಡಿದ ಆ ಹಾಡುಗಳೂ ಹಿಟ್ ಆದವು. ಹೀಗಿದ್ದ ರಫಿ ಸಾಮ್ರಾಜ್ಯ ಅಲ್ಲಾಡಿದ್ದು ಮಾತ್ರ ಸ್ಥಿತ್ಯಂತರದ ಜ್ವಲಂತ ಉದಾಹರಣೆ..!

ನಾಸಿರ್ ಹುಸೇನ್ ಹಿಟ್ ಮೇಲೆ ಹಿಟ್ ಚಿತ್ರ ತೆಗೆಯುವ ಫ್ಯಾಕ್ಟರಿ ಇಟ್ಟಿದ್ದ. ಅ ಫ್ಯಾಕ್ಟರಿಯಿಂದ ಒಂದು ಚಿತ್ರ ಬಂದಿತ್ತು ಅದು
"ಪ್ಯಾರ್ ಕಾ ಮೌಸಮ್ " . ಪಂಚಮ್ ಅದರ ಸಂಗೀತನಿರ್ದೇಶಕ ಶಶಿಕಪೂರ್ ನಾಯಕ ಭರತಭೂಷಣ್ ಅವನ ತಂದೆ ಪಾತ್ರ. ಒಂದು ಹಾಡು ಮೊದಲು ತಂದೆ ಹಾಡುತ್ತಾನೆ ಮುಂದೆ ಆ ಹಾಡು ಎರಡು ಬಾರಿ ನಾಯಕನಮೇಲೆ ಚಿತ್ರಿಕರಣ. ತಂದೆಯ ಹಾಡು ಕಿಶೋರ್ ಪಾಲಿಗೆ ಬಂತು
ಆ ಹಾಡು "ತುಮ್ ಬಿನ್ ಜಾವೂ ಕಹಾಂ..." .ಕಿಶೋರ್ ದನಿಯಲ್ಲಿ " ಆ ಹಾಹಾ ವು ವೂ..." ಹೀಗೆ ಯೋಡಲೆ ಯೂ ಮಿಳಿತವಾಗಿತ್ತು. ಹಾಡು ಹಿಟ್ ಆತು ರಫಿ ಹಾಡಿದ ಶಶಿಕಪೂರ್ ಮೇಲೆ ಚಿತ್ರಿತವಾದ ಅದೇ ಹಾಡು ಕಿಶೋರ್ ಹಾಡಿನ ಮುಂದೆ
ಸಪ್ಪೆ ಅನಿಸಿತು. ರಫಿ ಕಟ್ಟಿದ ಕೋಟೆ ಅಲ್ಲಾಡಿತು. ಮುಂದೆ ಇತಿಹಾಸ ಬದಲಿಸಿದ "ಆರಾಧನಾ" ಬಂತು ಯುವಜನರ ನಾಲಿಗೆ
ಮೇಲೆ " ಮೇರೆ ಸಪನೊಂಕಿ ರಾನಿ ..", "ರೂಪ್ ತೇರಾ ಮಸ್ತಾನಾ..." ನಲಿದಾಡಿದವು.ಕಿಶೋರ್ ಕುಮಾರ್ ದೊಡ್ಡ ರೀತಿಯಿಂದ
ದಾಖಲಾಗಿದ್ದ. ರಾಜೇಶ ಖನ್ನ. , ಪಂಚಮ್ ರ ಬೆಂಬಲ. ರಾಜೇಶ್ ಖನ್ನಾಗೆ ಸೂಪರ್ ಸ್ಟಾರ್ ಪಟ್ಟ ಕಿಶೋರ್ ಸ್ವಲ್ಪ ಕಾಲದಲ್ಲಿಯೇ ನಂಬರ್ ಒನ್ ಸ್ಥಾನ ಅಲಂಕರಿಸಿದ. ಈ ಜೋಡಿಯ ಹಾಡುಗಳು ಎಂತಹವು ಒಂದೊಂದು ಮುತ್ತು...
" ಚಿಂಗಾರಿ ಕೋಯಿ ಭಡಕೆ....."
" ಮೈ ಶಾಯರ್ ಬದನಾಮ್ ...."
" ಏ ಮೇರೆ ದಿಲ್ ಕೆ ಚೈನ್..."
" ಮೇರೆ ನಯನಾ ಸಾವನ್ ಭಾದೊ...."
" ಯೇ ಲಾಲ್ ರಂಗ್ ಕಬ್ ಮುಝೆ ಛೋಡೆಗಾ....".

ರಾಜೇಶ ಖನ್ನಾ ನಂತರ ಬಂದ ಅಮಿತಾಬ್, ರಿಷಿ ಹೀಗೆ ಆ ಕಾಲದ ನಾಯಕರಿಗೆಲ್ಲ ಕಿಶೋರ್ ಹಾಡಿದ. ಜನರು ಅವನ ಹಾಡಿಗೆ ಮರುಳಾಗಿದ್ದರು. ಜನಪ್ರಿಯತೆಯ ಉತ್ತುಂಗ ನೋಡಿದ ಕಿಶೋರ್. ಆ ವರೆಗೂ ಅವನನ್ನು ತೆಗಳಿದ ಫಿಲ್ಮಿ ಜನ
ಪ್ರತಿಭೆ ಹೊಗಳುತ್ತಿದ್ದರು. ಆದರೂ ಕೆಲ ಹಟಮಾರಿಗಳಿದ್ದರು.ಮದನ್ ಮೋಹನ್ ರಿಷಿ ಅಭಿನಯದ "ಲೈಲಾ ಮಜನು" ಚಿತ್ರದ
ಸಂಗೀತ ನಿರ್ದೇಶನ ಮಾಡುತ್ತಿದ್ದ. ನಿರ್ದೇಶಕನಿಗೆ ಕಿಶೋರ ದನಿಯಲ್ಲಿ ಹಾಡಿಸುವ ಇರಾದೆ ಆದರೆ ಮದನ್ ಮೋಹನ್ ಒಪ್ಪಲಿಲ್ಲ
ಕೊನೆಗೆ ಮದನ್ ಮೋಹನ್ ಹಟ ಗೆದ್ದಿತು . ರಫಿ ಆ ಹಾಡು ಹಾಡಿದ.ಆ ಹಾಡು " ಬರ್ಬಾದೆ ಮೊಹಬ್ಬತ ಕಾ...". ಕಿಶೋರ ಮಾತ್ರ ಇಂತಹ ಘಟನೆಗಳಿಂದ ವಿಚಲಿತನಾಗಲಿಲ್ಲ. ಹಿಟ್ ಮೇಲೆ ಹಿಟ್ ಹಾಡು ಕೊಡುತ್ತಲೇ ಸಾಗಿದ.

ಅವನೇ ಹಾಡಿದ ಹಾಡು "ಕುಛ ತೊ ಲೋಗ್ ಕಹೆಂಗೆ ಲೋಗೊಂ ಕಾ ಕಾಮ ಹೈ ಕೆಹನಾ.." ಹಾಡು ಅವನ ನಿಲುವು
ಹೇಳುತ್ತದೆ. ಅದೇನೆ ಟೀಕೆ ಇರಬಹುದು ಕಿಶೋರ್ ಸ್ವಪ್ರತಿಭೆಯಿಂದ ಬೆಳಗಿದವ. ಚಿತ್ರ ಇತಿಹಾಸದಲ್ಲಿ ಹೆಸರು ಸ್ಥಾಯಿಯಾಗಿ
ನಿಲುವಂತೆ ಮಾಡಿದ.....


ವಿ.ಸೂ.
------
ಈ ಲೇಖನ ಸಾಂಗತ್ಯದಲ್ಲೂ ಬಂದಿದೆ....

Friday, October 16, 2009

ಕರಗಿದ ಮಂಜು---೨

ಭಾಗ ೨ ಬಂದಿದೆ ಓದಿ ಅಭಿಪ್ರಾಯ ತಿಳಿಸಿ...



== ೨ ==

ಮಗಳು ನಿದ್ದೆ ಹೋಗಿದ್ದಳು. ಬಸ್ಸಿನಕುಲುಕಾಟಕ್ಕೆ ಸುರೇಖಳಿಗೆ ನಿದ್ದೆ ಬಂದಿರಲಿಲ್ಲ.ಪಕ್ಕದಲ್ಲಿರುವ
ಸುರೇಶನೂ ನಿದ್ದೆ ಹೋಗಿದ್ದ. ಬಸ್ಸು ಮೈಸೂರು ಮುಟ್ಟುವ ಹಾದಿಯಲ್ಲಿತ್ತು. ಗಾಳಿಗೆ ಸುಮನ್ ಕೂದಲು ಹಾರುತ್ತಿದ್ದವು.
ಕಿಟಕಿ ಮುಚ್ಚಿ ಮಗಳಸುತ್ತ ಶಾಲು ಹೊದಿಸಿದಳು. ಟೂರ್ ಎಂದು ಗಂಡ ಹೇಳಿದ್ದ ಉತ್ಸಾಹ ಇರಲಿಲ್ಲ. ಮಗಳಿಗೆ ನಾವೇನು
ಕಮಿಮಾಡಿದೆವು ಅವಳ್ಯಾಕೆ ಅರ್ಥ ಮಾಡ್ಕೊಳ್ಳಲ್ಲ ಇದೇ ಪ್ರಶ್ನೆ ಸುರೇಖಳಿಗೆ ಬಾಧಿಸುತ್ತಿತ್ತು. ಸುಮನ್ ಸಹ ಪ್ರವಾಸಕ್ಕೆ
ಅಷ್ಟೇನು ಉತ್ಸಾಹ ತೋರಿರಲಿಲ್ಲ.ಸುರೇಶ ಒಬ್ಬನೇ ಲವಲವಿಕೆ ಯಿಂದಿದ್ದ. ಅವನ ಎಣಿಕೆ ಬೇರೆ ಆಗಿತ್ತು. ಜಾಗ ಬದಲಾವಣೆ
ಒಳ್ಳೆಯದು ಅದರಲ್ಲೂ ಮೈಸೂರು ಈಗ ದಸರಾದ ಸಂಭ್ರಮದಲ್ಲಿತ್ತು. ಮಗಳರಜೆ ಅ ಸಡಗರದಲ್ಲಿ ಕಳೆಯಲಿ, ಕಹಿ ಎಲ್ಲ
ಮರೆಯಲಿಇದು ಅವನ ಬಯಕೆ. ನಿದ್ದೆ ಕಳೆದು ಎಚ್ಚರವಾದವ ಸುರೇಖಳನ್ನು ಗಮನಿಸಿದ. ಮಗಳ ಪ್ರಶ್ನೆ ನ್ಯಾಯವಾದದ್ದೇ
ಬೇರೆಯವರಿಂದ ಹುಟ್ಟಿನ ರಹಸ್ಯ ತಿಳಿದಾಗ ಸಹಜವಾಗಿಯೇ ಪ್ರತಿಕ್ರಿಯಿಸಿದ್ದಾಳೆ. ಈ ವಿಷಯ ಅವಳಿಗೆ ತಿಳಿಸುವುದು ಸರಿ ಇದು
ಅವನ ವಾದ.ಸುರೇಖಳಿಗೆ ದಿಗಿಲು ನಿಜ ತಿಳಿದು ಮಗಳು ಎಲ್ಲಿ ವಿಮುಖಳಾಗುತ್ತಾಳೊ . ಹಾಗೆ ನೋಡಿದರೆ ಅವಳ ಆತಂಕವು
ಸರಿಯೇ . ಒಟ್ಟಿನಲ್ಲಿ ಸಮಸ್ಯೆ ಎದುರಾಗಿದೆ ಈಗ ಅಂದುಕೊಂಡಂತೆ ನಡೆದರೆ ಸಮಸ್ಯೆಗೆ ಪರಿಹಾರವೂ ಇದೆ.
ಬಸ್ಸು ಮೈಸೂರು ನಿಲ್ದಾಣ ಪ್ರವೇಶಿಸಿತು. ಮಲಗಿದ್ದ ಸುಮನ್ ಳನ್ನು ಎಚ್ಚರಗೊಳಿಸಲು ಮುಂದಾದ.

-----------------------೦---------------------------------------೦---------------------------------------------------------------

ಮೈಸೂರು ದಸರಾಹಬ್ಬದ ಸಡಗರದಲ್ಲಿ ಮೀಯುತ್ತಿತ್ತು. ಬ್ಯಾಂಕ್ ನ ಅತಿಥಿಗೃಹದಲ್ಲಿ ಮೊದಲೇ
ಬುಕ್ ಮಾಡಿದ್ದರಿಂದ ವಸತಿ ಸಮಸ್ಯೆ ಇರಲಿಲ್ಲ.ಚಾಮುಂಡಿ ಬೆಟ್ಟ, ಝೂ,ಕಾರಂಜಿ ಕೆರೆ ಹೀಗೆ ಎಲ್ಲಿ ನೋಡಿದರೂ ಜನ. ಸುಮನ್
ಳಲ್ಲಿ ಉತ್ಸಾಹ ಮೂಡುತ್ತಿತ್ತು. ಹೋದವಾರದ ಬಿಗುವು ಎಲ್ಲ ಕಳಚಿಕೊಂಡಿದ್ದಳು.ಹೊಸವಾತಾವರಣಕ್ಕೆ ಸ್ಪಂದಿಸುತ್ತಿದ್ದಳು.
ರಂಗನತಿಟ್ಟು ನಲ್ಲಿ ಹತ್ತಿರದಿಂದ ತರತರಹದ ಪಕ್ಷಿಗಳನ್ನು ಹತ್ತಿರದಿಂದ ನೋಡಿ ಉಲ್ಲಸಿತಳಾದಳು. ಬಲಮುರಿಯಲ್ಲಿ ನೀರು
ಬಿಟ್ಟು ಏಳಲು ಅವಳಿಗೆ ಮನಸೇ ಇರಲಿಲ್ಲ. ಮಗಳ ಉತ್ಸಾಹ ಸುರೇಖಳಲ್ಲೂ ಹೊಸ ಉಮೇದು ತಂದಿತ್ತು. ಮಗಳು ಇನ್ನು
ಮುಂದೆ ನಗುವುದೇ ಇಲ್ಲ ಅಂತ ಆತಂಕಕ್ಕೊಳಗಾಗಿದ್ದಳು. ಭಯ ಕಳೆದುಮಗಳ ಜೊತೆ ಹಿತವಾಗಿ ನಲಿದಳು.

ಮೈಸೂರಿನಲ್ಲಿ ಮೂರುದಿನ ಕಳೆದದ್ದೇ ಗೊತ್ತಾಗಿರಲಿಲ್ಲ. ಅರಮನೆ ದೀಪಾಲಂಕಾರ ನೋಡುತ್ತಿದ್ದ
ಸುರೇಖಳಿಗೆ ಗಂಡ ಮರುದಿನ ಬೆಂಗಳೂರಿಗೆ ಹೋಗುವ ಪ್ರಸ್ತಾಪ ಮಾಡಿದ. ಅಲ್ಲಿಂದ ಮತ್ತೆ ಹುಬ್ಬಳ್ಳಿ ವಾಪಸ್ ಹೋಗುವುದು
ಎಂದು ಹೇಳಿದ. ಸುಮನ್ ಮನಸ್ಸಿಲ್ಲದ ಮನಸ್ಸಿನಿಂದ ಮೈಸೂರು ಬಿಟ್ಟಳು. ದಾರಿ ಮಧ್ಯೆ ಸಿಗೋ ವಂಡರ್ ಲಾ ದಲ್ಲಿ ಸಂಜೆವರೆಗೆ
ಕಳೆದುಹುರುಪಿನಿಂದ ಬೆಂಗಳೂರು ಸೇರಿಕೊಂಡರು.

ಗಂಡ ಏನೋ ಯೋಜನೆ ಹಾಕಿಯೇ ಈ ಟೂರ್ ಫಿಕ್ಸಮಾಡಿದಾನೆ ಇದು ಸುರೇಖಳಿಗೆ ಅಂದಾಜಿತ್ತು.
ಆದರೆ ಕೇಳಿದರೂ ಅವನ ಮುಗುಳ್ನಗೆ ಮಾತ್ರ ಉತ್ತರವಾಗಿತ್ತು, ಬೆಂಗಳೂರು ಜತೆ ಒಂದು ಅವಿನಾಭಾವ ಸಂಬಂಧ ಇದೆ ಸುರೇಖಳಿಗೆ
ತಾಯ್ತನದ ಅನುಭೂತಿ ಕೊಟ್ಟ ಊರಿದು. ಭಯ ಮಿಶ್ರಿತ ಕಂಪನ ಅವಳಲ್ಲಿ. ಮರುದಿನ ಅವರು ಕುಳಿತ ಆಟೋ ಬಾಣಸವಾಡಿ ಕಡೆ
ತಿರುಗಿದಾಗ ಎದೆ ಡವ ಗುಟ್ಟಿತು ಸುರೇಶ ಮಾತ್ರ ನಿರಾತಂಕವಾಗಿದ್ದ. ಸುಮನ್ ಅಪ್ಪ ಕೊಡಿಸಿದ ವಿಡಿಯೋ ಗೇಮ್ ನಲ್ಲಿ ಮುಳುಗಿದ್ದಳು. ರಸ್ತೆಗಳು ಪರಿಚಿತ ಅನಿಸಿದವು ಸುರೇಖಳಿಗೆ ಆತಂಕದಿಂದ ಗಂಡನ ಕೈ ಹಿಡಿದಳು. ಅವಳ ಕೈಗೆ ಮೆಲುವಾಗಿ ತಟ್ಟಿದ
ಸುರೇಶ ಮುಗುಳ್ನಕ್ಕ. ಆಟೋ ಒಂದು ಕಟ್ಟಡದ ಮುಂದೆ ನಿಂತಿತ್ತು. ಕಟ್ಟಡದ ವಿನ್ಯಾಸ ಬದಲಾಗಿರಲಿಲ್ಲ. ತಂಗಾಳಿ ಬೀಸುತ್ತಿದ್ದರೂ ಸುರೇಖ ಬೆವರಿದ್ದಳು. ಗೇಟು ತೆಗೆದು ಒಳನಡೆದ ಗಂಡ ಹಾಗೂ ಮಗಳನ್ನು ಹಿಂಬಾಲಿಸಿದಳು....

-----------------------------೦--------------------------------------೦-----------------------------------------------------------------

ಎಲ್ಲ ಮೊದಲೇ ಯೋಜನೆ ಹಾಕಿಕೊಂಡಿದ್ದ ಸುರೇಶ. ಆ ಬಗ್ಗೆ ಸಂಸ್ಥೆಯ ಅಧಿಕಾರಿಗಳಲ್ಲಿ ಮಾತೂ
ಆಡಿದ್ದ.ಸಹಕಾರ ಕೊಡುವುದಾಗಿ ಹೇಳಿದ್ದರು.ಅವರೆಲ್ಲ ಈಗ ಆಟೋದಿಂದಿಳಿದು ಪ್ರವೇಶಿಸಿದ ಸಂಸ್ಥೆಯಿಂದಲೇ ಸುಮನ್ ಳನ್ನು
ದತ್ತು ತೆಗೆದುಕೊಂಡಿದ್ದರು. ಸುರೇಶನಿಗೂ ಪರಿಣಾಮದ ಬಗ್ಗೆ ಅಳುಕಿತ್ತು ಇದು ಬಹಳ ಸೂಕ್ಷ್ಮ ವಿಚಾರ. ಮಗಳ ಪ್ರತಿಕ್ರಿಯೆ ಮೇಲೆ
ಎಲ್ಲ ನಿಂತಿತ್ತು. ಆ ಸಂಸ್ಥೆಯ ಮೇಲಧಿಕಾರಿಣಿ ಇವರನ್ನು ಆದರದಿಂದ ಬರಮಾಡಿಕೊಂಡಳು. ಕಾಫಿ ಸೇವನೆ ನಂತರ ಸುಮನಳನ್ನು
ಮೇಲಿನ ರೂಮಿನಲ್ಲಿರೋ ಆಟಿಗೆ ತೋರಿಸುವ ನೆವದಿಂದ ಕರೆದೊಯ್ಯಲಾಯಿತು...ಸುರೇಶ ,ಸುರೇಖ ಮಗಳು ಮೇಲೆ ಹೋಗುವುದನ್ನೇ ನೋಡುತ್ತಿದ್ದರು, ಸುರೇಖಳ ತಲೆ ಗೊಂದಲದ ಗೂಡಾಗಿತ್ತು.ಅವಳ ಪ್ರಶ್ನೆಗಳಿಗೆಲ್ಲ ಸುರೇಶನ ಮುಗುಳ್ನಗೆ
ಉತ್ತರವಾಗಿತ್ತು.
------------------೦---------------------------------೦--------------------------------೦---------------------------------------------

ಆಟಿಗೆ ನೋಡುತ್ತ ಕುಳಿತ ಸುಮನ್ ಸುತ್ತಲೂ ಕಣ್ಣುಹಾಯಿಸಿದಳು. ಅವಳ ಅರಿವಿಗೆ ನಿಲುಕದ ಜಾಗೆ
ಸುತ್ತ ತೊಟ್ಟಿಲುಗಳು..ಅವುಗಳಲ್ಲಿನ ಕೂಸುಗಳು. ದೊಡ್ಡವನ್ನು ನೆಲದ ಕಾರ್ಪೆಟ್ ಮೇಲೆ ಬಿಡಲಾಗಿತ್ತು. ಸುತ್ತ ಹರಡಿದ ಆಟಿಗೆ
ಗಳಲ್ಲಿ ಮಗ್ನ ವಾಗಿದ್ದವು. ನಿಧಾನವಾಗಿ ತಾ ನೋಡುತಿರುವ ಜಾಗೆ ತಾನಿರುವ ಸ್ಥಳದ ಬಗ್ಗೆ ಗೊತ್ತಾಗತೊಡಗಿತು. ರೂಪಾ ಹೇಳಿದ
ಮಾತು ಗುಂಯ್ ಗುಟ್ಟಿತು. ನಾ ಅಮ್ಮನಿಗೆ ಹುಟ್ಟಿಲ್ಲ ಇದು ಗೊತ್ತಾಗಿದ್ದೇ ಇತ್ತೀಚೆಗೆ ಅಪ್ಪ ಅಮ್ಮ ಏನೋ ಮಾತಾಡುತ್ತಿದ್ದವರು ನಾ ಬಂದಿದ್ದು ನೋಡಿ ಮಾತು ನಿಲ್ಲಿಸುತ್ತಿದ್ದರು ಏನೋ ಇದೆ ಇದು ಕಸಿನ್ಸ್ ನೋಡೋ ದೃಷ್ಟಿಯಲ್ಲಿ,
ಮೌಶಿ ಕಾಕು ಅಮ್ಮನೊಡನೆ ಆಡುತ್ತಿದ್ದ ಮಾತಿನಲ್ಲಿ ಇಣುಕುತ್ತಿತ್ತು. ರೂಪ ಜಗಳ ತೆಗೆದು ಆಡಿದ ಮಾತು ಅವಮಾನ ಮಾಡಿತ್ತು.
ನಾ ಅವಳಿಗೆ ಗೆಳತಿ ಇರದಿರಬಹುದು ನಾಲ್ಕು ಜನರ ಮುಂದೆ ಹೀಗೆ ಒಮ್ಮೆಲೆ ಅಂದಾಗ ಸಿಟ್ಟು ಬಂದಿತ್ತು. ಸಿಟ್ಟು ತಿರುಗಿದ್ದು ಅಮ್ಮನ
ಮೇಲೆ ಇಷ್ಟುದಿನ ನನ್ನದು ಎಂದು ತಿಳಿದ ವಸ್ತು ನನ್ನದಲ್ಲ ಎಂದಾಗ ನೋವಾಗಿತ್ತು. ಈಗ ಎಲ್ಲ ಗೊತ್ತಾಗುತಿದೆ. ಅಂದರೆ ನಾನೂ
ಹೀಗೆ ಈಗ ಇವರಿರೋ ಜಾಗೆಯಲ್ಲಿದ್ದೆ .... ಯಾವುದೋ ಮಗು ತೊಟ್ಟಿಲಲ್ಲಿ ಮಲಗಿದ್ದು ಜೋರಾಗಿ ಅಳಲಾರಂಭಿಸಿತು.
ಆಯಾ ಒಬ್ಬಳು ಬಂದು ಅದರ ದುಬಟಿ ಬದಲಾಯಿಸಿದಳು..ಮಗು ಅಳು ನಿಲ್ಲಿಸಲಿಲ್ಲ. ಅದಕ್ಕೆ ಹಸಿವಾಗಿರಬೇಕು ಆಯಾ ಹಾಲು
ಬಾಟಲಿಯಲ್ಲಿ ತರುವವರೆಗೂ ಅದು ಅಳುತ್ತಲೇ ಇತ್ತು. ಹೌದಲ್ಲ ತಾ ಸ್ಕೂಲಿನಲ್ಲಿ ಬಿದ್ದು ಬಂದಾಗ ಅಮ್ಮ ಚಡಪಡಿಸುವುದೇಕೆ
ಹೋದ ವರ್ಷ ಜ್ವರ ಬಂದಾಗ ಇಡೀ ರಾತ್ರಿ ಅಪ್ಪ ಅಮ್ಮ ಎಚ್ಚರಿದ್ದು ಒದ್ದೆಪಟ್ಟಿ ಬದಲಾಯಿಸುತ್ತಿದ್ದುದು ನೆನಪಿಗೆ ಬಂತು.
ಅಂದರೆ ಅಮ್ಮ ಅಮ್ಮನೇ ಅವಳು ಬದಲಾಗಳು.... ಗಕ್ಕನೇ ಅಪ್ಪ ಅಮ್ಮನ ನೆನಪು ಬಂತು. ನಾ ಇಲ್ಲಿ ಏನು ಮಾಡುತಿರುವೆ
ಅವರೆಲ್ಲಿ ಗಾಬರಿಯಾಯಿತು ಸುಮನ್ ಳಿಗೆ. ಅಲ್ಲಿಂದ ಎದ್ದವಳು ಮೆಟ್ಟಿಲು ಇಳಿದು ನೋಡಿದಳು. ಗೇಟ ಹತ್ತಿರ ನಿಂತ ಅಪ್ಪ ಅಮ್ಮ ಕಂಡರು....
------------------------------೦-----------------------------------------೦----------------------------------------------------------

ಹನಿಯುತ್ತಿದ್ದ ಕಣ್ಣೀರು ಒರೆಸಿಕೊಂಡವಳಿಗೆ ಬಾಗಿಲಲ್ಲಿ ನಿಂತ ಸುಮನ್ ಕಂಡಳು.ಉದ್ವೇಗದಿಂದ
ಕಂಪಿಸುವಳನ್ನು ನೋಡಿ ಗಾಬರಿ ಆದಳು. ನೋಡುವುದರಲ್ಲಿಯೇ ಮಗಳು ತೆಕ್ಕೆ ಹಾಕಿ ಅಳುತ್ತಿದ್ದಳು."ಸಾರಿ ಅಮ್ಮ..." ಉದ್ವೇಗದಿಂದ ದನಿ ಕಂಪಿಸುತ್ತಿತ್ತು. ಮಗಳನ್ನು ಬಾಚಿ ತಬ್ಬಿದ ಸುರೇಖ ಸಹ ಅಳುತ್ತಿದ್ದಳು.ನೋಡುತ್ತಿದ್ದ ಸುರೇಶನ ಕಣ್ಣೂ
ಹನಿಗೂಡಿದವು. ಆಗಸದಲ್ಲಿ ಮಂಜು ಕರಗಿ ಸೂರ್ಯ ಮಿನುಗುತ್ತಿದ್ದ.

Saturday, October 10, 2009

ಕರಗಿದ ಮಂಜು

ಈ ಕತೆ ನಾನು ಬರೆದಿದ್ದು ೨೦೦೨-೦೩ ರ ಸುಮಾರು... .ಕರ್ಮವೀರದಲ್ಲಿ ಪ್ರಕಟವಾಗಿತ್ತು.ಪ್ರಸ್ತುತ ಕತೆಯ ಹಸ್ತಪ್ರತಿ
ಸಹ ನನ್ನಲ್ಲಿ ಉಳಿದಿಲ್ಲ.ಇನ್ನು ಕರ್ಮವೀರದ ಕಾಂಪ್ಲಿಮೆಂಟರಿ ಕಾಪಿಯಾರೋ ತಗೊಂಡು ಹೋಗಿದ್ದು ವಾಪಸ್ ಕೊಡಲಿಲ್ಲ.
ಈಗ ಈ ಕತೆ ನೆನಪಿನಾಳದಿಂದ ಹೆಕ್ಕಿ ಮತ್ತೆ ಬರೆದಿರುವೆ. ಕತೆಯ ಮೊದಲಭಾಗ ಇದೆ...ಮುಂದಿನ ಭಾಗಕ್ಕಾಗಿ ಕಾಯುವಿರಿ ತಾನೇ....

ಕರಗಿದ ಮಂಜು
-------------------
== ೧ ==


ಸ್ಕೂಲ್ ವ್ಯಾನ್ ಬರುವುದನ್ನೇ ಕಾಯುತ್ತ ಗೇಟಿನಲ್ಲಿ ನಿಂತ ಸುರೇಖಳಿಗೆ ಅದು ಬಂದಾಗ ಅದರಿಮ್ದಿಳಿದ
ಮಗಳು ಯಾಕೋ ಸರಿಇಲ್ಲ ಅನಿಸಿತು. ಮನೆಗೆ ಬಂದ ಮಗಳು ಬ್ಯಾಗ್ ಬೀಸಿ ರೂಮ್ ಸೇರಿದಾಗ ದಿಗಿಲುಗೊಂಡಳು.ಎಂದೂ ಹೀಗೆ ವರ್ತಿಸದವಳು ಇಂದೇಕೆ ..ಇಂದಿನ ಪೇಪರ್ ಚೆನ್ನಾಗಿ ಮಾಡಿರಲಿಕ್ಕಿಲ್ಲ ..ಕೊನೆ ಪೇಪರ್ ಇವತ್ತು ಎಂದು ಬೆಳಿಗ್ಗೆ ಹಾರ‍ಾಡಿ ಹೋದವಳು
ಈಗ ಈ ರೀತಿ ಸಪ್ಪಾಗಿದ್ದಾಳೆ . ದಿಗಿಲಾಯಿತು ಸುರೇಖಳಿಗೆ. ತಾನೇ ಅವಳ ಬ್ಯಾಗ್ ಎತ್ತಿಟ್ಟು ರೂಮ್ ನಲ್ಲಿ ನೋಡಿದರೆ ಕಾಟ್ ಮೇಲೆ
ಬೋರಲಾಗಿ ಮಲಗಿದ ಮಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಗಾಬರಿಗೊಂಡು ಸುರೇಖ ಮಗಳ ಹತ್ರ ಹೋಗಿ ತಲೆಗೂದಲಲ್ಲಿ ಬೆರಳಾಡಿಸುತ್ತ ನಲ್ಮೆಯಿಂದ ಮುದ್ದುಗರೆದಳು. ಸಿಕ್ಕ ಪ್ರತಿಕ್ರಿಯೆ ಮಾತ್ರ ಸುರೇಖಳನ್ನು ಬೆಚ್ಚಿ ಬೀಳಿಸಿತು.

" ನೀವು ನನ್ನ ತಿಪ್ಪ್ಯಾಗಿಂದ ಎತ್ಕೊಂಡು ಬಂದೀರಿ ಹೌದಲ್ಲೊ ನಾ ನಿಮ್ಮ ಮಗಳಲ್ಲ ಅಲ್ಲ...." ಬಿಕ್ಕುವಿಕೆಯ ನಡುವೆಯೂ ದನಿ ಸ್ಪಷ್ಟವಾಗಿತ್ತು. ಸುಮನ್ ಕಂಪಿಸುತ್ತಿದ್ದಳು. ಅತ್ತು ಅತ್ತು ಕಣ್ಣು ಕೆಂಪಾಗಿದ್ದವು. ಮಗಳ ರೂಪ ಮೇಲಾಗಿ ಅವಳು
ಆಡಿದ ಮಾತು ಸುರೇಖಳನ್ನು ದಂಗಾಗಿಸಿತು.ಹತ್ತು ವರ್ಷ ಮುಚ್ಚಿಟ್ಟ ರಹಸ್ಯ ಹೀಗೆ ಹೊರಬೀಳಬಹುದು ಅದೂ ಮಗಳೇ ಹೀಗೆ
ಪ್ರಶ್ನೆಮಾಡಿಯಾಳು ಇದು ಅವಳು ಊಹಿಸಿರಲಿಲ್ಲ. ಗಂಡ ಸುರೇಶ ಈ ಬಗ್ಗೆ ಅನೇಕಬಾರಿ ಚರ್ಚಿಸಿದ್ದ. ನಿಜ ಏನು ಮಗಳಿಗೆ ಹೇಳಿ
ಬಿಡುವ ಅವನ ವಾದ ಸುರೇಖಳಿಗೆ ಸರಿ ಅನಿಸಿರಲಿಲ್ಲ. ತಾನು ಬಚ್ಚಿಟ್ಟುಕೊಂಡಿದ್ದು ತಪ್ಪಲ್ಲ ಇದು ಅವಳ ನಿಲುವು.
ಮಗಳು ಪ್ರಶ್ನೆಕೇಳಿ ಎದೆಮೇಲೆ ಈ ರೀತಿ ಪ್ರಹಾರ ಮಾಡಬಹುದೇ..

ಸುಮನ್ ಳನ್ನು ಬಾಚಿ ತಬ್ಬಿದವಳು ತಡೆಯಲಾರದೆ ಅಳಲು ಶುರುಮಾಡಿದಳು.ತಾಯಿಯಿಂದ ಕೊಸರಿ ಬಿಡಿಸಿಕೊಂಡ ಸುಮನ್ ದೂರ
ನಿಂತಳು. ಮಗಳ ಈ ಪ್ರತಿಕ್ರಿಯೆ ಸುರೇಖಳಿಗೆ ನೋವು ತಂತು.

"ರೂಪಾ ಎಲ್ಲ ಹೇಳಿದ್ಲು ಅಕಿ ಮನ್ಯಾಗ ನಿನ್ನೆ ಇದ್ನ ಮಾತಾಡತಿದ್ರಂತ.. ಇದು ಖರೆ ಅದ ಅಲ್ಲ...?"
ಮಗಳ ಪ್ರಶ್ನೆಗೆ ಸುರೇಖಳ ಬಳಿ ಉತ್ತರ ಇರಲಿಲ್ಲ.
-----------------೦-----------------------------೦-------------------------------೦-----------------------------------------------------

ಸುರೇಶ ಬ್ಯಾಂಕಿನಲ್ಲಿ ಅಧಿಕಾರಿ.ಹೆಂಡತಿಯಿಂದ ಫೋನ ಬಂದಾಗ ಅವಳ ದನಿ ಗಾಬರಿಯಿಂದ ಕೂಡಿದ್ದು
ಏನೋ ಹೇಳಹೊರಟವಳು ತಡವರಿಸುವದನ್ನು ಕಂಡವ ತಾ ಹೊರ‍ಟುಬರುವುದಾಗಿ ಹೇಳಿದ. ಬೈಕ್ ಮೇಲೆ ಹೊರಟಾಗಲೂ ಏನಾಗಿರಬಹುದು ಎಂಬ ಯೋಚನೆ ಆಗಿತ್ತು. ಮನೆ ತಲುಪಿದಾಗ ಹಾಲ್ ನಲ್ಲಿ ಆತಂಕದಿಂದ ಕುಳಿತ ಸುರೇಖ ಕಂಡಳು.
ಇವನನ್ನು ನೋಡಿದವಳು ಇವನ ಎದೆಗೊರಗಿ ಅಳಲಿಟ್ಟಾಗ ಗಾಬರಿಗೊಂಡ ಸುರೇಶನಿಗೆ ಕಾಣಿಸಿದ್ದು ಮಗಳ ಬ್ಯಾಗು ಅಂದರೆ
ಮಗಳು ಮನೆಯಲ್ಲಿದ್ದಾಳೆ ಹೆಂಡತಿಯ ಮುಖ ಎತ್ತಿ ಹಣೆಗೆ ಮುತ್ತು ನೀಡಿದವ ಏನಾಯಿತೆಂದು ಕೇಳಿದ. ಹೆಂಡತಿಯ ಅಳುವೇ ಉತ್ತರವಾಗಿತ್ತು.
ನಿಧಾನವಾಗಿ ಸುರೇಖ ಎಲ್ಲ ಹೇಳಿದಳು. ಸುರೇಶ ಶಾಂತವಾಗಿ ಕೇಳಿಸಿಕೊಂಡ. ಒಂದಿಲ್ಲೊಂದು ದಿನ ಈ ಸ್ಥಿತಿ ಎದುರಾಗಬಹುದು ಇದು ಅವ ಅಂದಾಜಿಸಿದ್ದ.
ಹೆಂಡತಿಗೂ ತಿಳಿ ಹೇಳುವ ಪ್ರಯತ್ನ ಮಾಡಿದ್ದ. ಸುರೇಖ ಭಾವುಕಳಾಗುತ್ತಿದ್ದಳು ಏನೋ ಗಾಬರಿ ಅವಳಲ್ಲಿರುತ್ತಿತ್ತು.ಅವಳ ಹೆದರಿಕೆಯ ಕಾರಣ ಸುರೇಶನಿಗೂ
ಗೊತ್ತಿತ್ತು. ಹಾಗಂತ ಅವ ಪಲಾಯನವಾದಿಯಾಗಲು ಅವನಿಗೆ ಇಷ್ಟವಿರಲಿಲ್ಲ. ಬದಲು ಮಗಳಿಗೆ ತಮ್ಮಿಂದಲೇ ನಿಜ ಸಂಗತಿ ಗೊತ್ತಾಗಬೇಕು ಬೇರೆ ಯಾರಿಂದಾದರೂ
ಅವಳಿಗೆ ತಿಳಿಯುವುದು ಅವನಿಗೆ ಬೇಡವಾಗಿತ್ತು.ಈಗ ಮಗಳಿಗೆ ಗೊತ್ತಾಗಿ ಹೋಗಿದೆ ಮುಚ್ಚಿಡುವುದರಲ್ಲಿ ಲಾಭವಿಲ್ಲ ಆದರೆ ಸುಮನ್ ಳ ಎಳೆ ಮನಸ್ಸಿನ ಮೇಲೆ
ಇದು ಯಾವ ರೀತಿ ಪರಿಣಾಮ ಬೀರಬಹುದು. ಇದು ಕಸಿವಿಸಿ ಅವನದು. ಅಳುಕುತ್ತಲೇ ಸುಮನ್ ಇದ್ದ ರೂಮಿಗೆ ಹೋದ.....

--------------------------------೦------------------------------------೦--------------------------------------೦----------------------

ಮದುವೆಯಾಗಿ ನಾಲ್ಕು ವರ್ಷಕಳೆದಿದ್ದವು, ಸುರೇಖಳಿಗಿಂತಲೂ ಅವಳ ತಾಯಿ ಆತಂಕಕ್ಕೆ ಒಳಗಾಗಿದ್ದರು. ಅವರ ಒತ್ತಾಯಕ್ಕೆ ಮಣಿದು ಸುರೇಖ
ಡಾಕ್ಟರ್ ಕಡೆ ಹೋಗಿದ್ದು.ಟೆಸ್ಟ ಎಲ್ಲ ಮುಗಿಸಿದ ಡಾಕ್ಟರು ಮರುದಿನ ಗಂಡನ ಜೊತೆ ಬರಲಿಕ್ಕೆ ಹೇಳಿದರು.ಮರುದಿನ ಸುರೇಶ ಹಾಗೂ ಸುರೇಖಳ ಮುಂದೆ ಬಿಚ್ಚಿಟ್ಟ
ಸಂಗತಿ ಸುಲಭವಾಗಿ ಜೀರ್ಣಿಸಲಾರದ್ದು. ಸುರೇಖಳ ಗರ್ಭಾಶಯಮಗುವನ್ನು ಹೆರಲು ಸಮರ್ಥವಾಗಿರಲಿಲ್ಲ. ಮಗು ಆಗುವ ಚಾನ್ಸು ಬಹಳ ಕಡಿಮೆ ಎಂದಾಗ ದಂಪತಿಗಳು
ಕಂಗಾಲಾದರು. ಬೇರೆ ಡಾಕ್ಟರ್ ಬಳಿಯೂ ಇದೇ ಅಭಿಪ್ರಾಯ ವ್ಯಕ್ತವಾದಾಗ ಸುರೇಖ ಹೌಹಾರಿದಳು. ತನ್ನ ಮಡಿಲು ಮಗು ಇಲ್ಲದೆ ಬರಿದು ಈ ವಾಸ್ತವ ಅವಳಿಗೆ
ಆಘಾತ ತಂದಿತ್ತು. ಸುರೇಶನಿಗೂ ಬೇಸರ ಆಗಿತ್ತು ಹಾಗಂತ ಹೆಂಡತಿ ಎದಿರು ಅಧೀರತನ ತೋರುವಹಾಗಿರಲಿಲ್ಲ. ಸುರೇಖ ಗಂಡನಿಗೆ ಇನ್ನೊಂದು ಮದುವೆಯಾಗುವ ಸಲಹೆ
ನೀಡಿದಳು.ಸುರೇಶ ನಿರಾಕರಿಸಿದ. ಹೆಂಡತಿಗೆ ಬುದ್ಧಿಹೇಳಿದ.ಸಮಸ್ಯೆ ಇದೆ ಅದನ್ನು ಎದುರಿಸುವ ಇದು ಅವನ ಆಶಾವಾದ.

ಸುರೇಖ ದೇವರಿಗೆಲ್ಲ ಹರಕೆ ಹೊತ್ತಿದ್ದಳು. ಸುರೇಶ ಹೆಂಡತಿಯ ಒತ್ತಾಯಕ್ಕೆ ಪೂಜೆ ಆರತಿ ಹೀಗೆ ಭಾಗಿ ಆಗುತ್ತಿದ್ದ. ಆದರೆ ಅವನ ಮನದಲ್ಲಿ ಬೇರೆ ಯೋಚನೆ
ಸಾಗಿತ್ತು. ಈ ನಿರ್ಧಾರ ಅವನೊಬ್ಬನೇ ತೆಗೆದುಕೊಳ್ಳುವ ಹಾಗಿರಲಿಲ್ಲ. ಸುರೇಖ ಆ ನಿರ್ಧಾರಕ್ಕೆ ಒಪ್ಪುತ್ತಾಳೊ ಇಲ್ಲವೊ ಅವನಿಗೆ ಖಾತ್ರಿ ಇರಲಿಲ್ಲ. ಸುರೇಶ ಮಗುವನ್ನು ದತ್ತು
ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದ. ಅನಾಥಾಲಯದಿಂದಲೆ ದತ್ತು ತೆಗೆದುಕೊಳ್ಳುವುದು ಇದು ಅವ ತಗೊಂಡ ನಿರ್ಧಾರ. ತನ್ನ ನಿರ್ಧಾರ ಹೆಂಡತಿಗೆ ಹೇಳಿದ. ಸುರೇಖ ಹೌಹಾರಿದಳು.
ಗಂಡ ಈ ರೀತಿಯಾಗಿ ವಿಚಾರ ಮಾಡಬಹುದು ಇದು ಅವಳಿಗೆ ಅಪಥ್ಯ ವಾಗಿತ್ತು. ಬಲವಾಗಿ ವಿರೋಧಿಸಿದಳು. ಸುರೇಶ ಹೆಚ್ಚಿಗೆ ಬಲವಂತ ಮಾಡಲಿಲ್ಲ. ಎರಡು ದಿನ ಸುಮ್ಮನಿದ್ದ
ಸುರೇಖ ಗಂಡನ ಮಾತಿಗೆ ಹುಂಗುಟ್ಟಿದಾಗ ಸ್ವತಃ ಸುರೇಶನಿಗೆ ಆಶ್ಚರ್ಯವಾಗಿತ್ತು. ಹೆಂಡತಿಗೆ ಮುಂದೆ ಬರಲಿರುವ ಚಾಲೆಂಜ್ ಗಳ ಬಗ್ಗೆ ತಿಳಿಹೇಳಿದ. ಅವಳ ನಿರ್ಧಾರ ಪಕ್ಕಾ ಅನಿಸಿದಾಗ
ತಾ ಈ ಮೊದಲೇ ಗುರ್ತುಮಾಡಿಕೊಂಡ ಸ್ವಯಂಸೇವಾ ಸಂಸ್ಥಾಗೆ ಪತ್ರ ಹಾಕಿದ. ಗಂಡ ಹೆಂಡತಿ ತಗೊಂಡ ಈ ನಿರ್ಧಾರ ಇಬ್ಬರ ಮನೆತನದ ಹಿರಿತಲೆಗಳಿಗೆ ಹಿಡಿಸಿರಲಿಲ್ಲ.
ಅದರಲ್ಲಿ ಸುರೇಶನ ಸೋದರಮಾವ ತನ್ನ ಮೂರು ಮಕ್ಕಳ ಪೈಕಿ ಒಬ್ಬನನ್ನು ದತ್ತು ತೆಗೆದುಕೊಳ್ಳಲು ದುಂಬಾಲು ಬಿದ್ದ. ಸುರೇಶ ನಿರ್ಣಯ ತಗೊಂಡಾಗಿತ್ತು. ಬಂಧು ಬಳಗ
ಇವರಿಗೆ ಮುಂದಿನ ಪರಿಣಾಮಗಳ ಬಗ್ಗೆ ಎಚ್ಚರಿಸಿದರು...ಹೆದರಿಸಿದರು. ಸುರೇಖ ವಿಚಲಿತಳಾದರೂ ಗಂಡನ ಪ್ರಶಾಂತ ಮುಖ ನೋಡಿ ಧೈರ್ಯ ತೆಗೆದುಕೊಳ್ಳುತ್ತಿದ್ದಳು.
ಆ ಸಂಸ್ಥೆಯ ವಿಚಾರಣೆಗಳು, ನಿಯಮಾವಳಿಗಳು ಪತ್ರವ್ಯವಹಾರ ಹೀಗೆ ಒಂದು ತಿಂಗಳು ಕಳೆಯಿತು. ಸುರೇಖಳಿಗೆ ಚಡಪಡಿಕೆ ಹೆಚ್ಚಾಯಿತು. ಅಂತೂ ಆ ಸಂಸ್ಥೆಯಿಂದ ಇವರಿಗೆ
ಬೇಕಾದ ಹಾಗೂ ಒಪ್ಪುವಂತಹ ಹೆಣ್ಣುಮಗು ಇದೆ ಬಂದು ನೋಡಿ ಎಂದು ಪತ್ರ ಬಂದಾಗ ಗಂಡ ಹೆಂಡತಿ ನಿರಾಳವಾದರು. ಬೆಂಗಳೂರಿಗೆ ಹೊರಡಲು ಅಣಿಯಾದರು.

ಆ ದಿನ ದಂಪತಿಗಳಿಬ್ಬರೂ ಮರೆಯುವ ಹಾಗಿಲ್ಲ.ಸಂಸ್ಥೆಯಲ್ಲಿ ಕಾಲಿಟ್ಟಾಗ ಇದ್ದ ದುಗುಡ ಅಲ್ಲಿನ
ಸಿಬ್ಬಂದಿಯ ಪ್ರೀತಿಯ ಮಾತಿನಿಂದ ಮಾಯವಾಗಿತ್ತು. ಸ್ವಲ್ಪ ಹೊತ್ತಿಗೆ ಬೆಚ್ಚನೆ ಅರಿವೆಯಲ್ಲಿ ಸುತ್ತಿದ ಮಗುವನ್ನು ತೆಗೆದುಕೊಂಡು
ಬಂದ ಆಯಾ ಸುರೇಖಳ ಕೈಯಲ್ಲಿಟ್ಟಾಗ ಸುರೇಖ ಮೂಕವಾದಳು. ಮುಷ್ಟಿಬಿಗಿದ ಪುಟ್ಟಕೈಗಳು..ಪುಟ್ಟ ಪಾದಗಳು..
ಒಂದು ತಿಂಗಳೂ ತುಂಬಿರದಿದ್ದ ಕೂಸು. ಅದರ ಅನುಭೂತಿಯಲ್ಲಿ ತೇಲಿಹೋದಳವಳು.ಮೆಲ್ಲಗೆ ಕಣ್ಣು ತೆರೆದವಳು ಬೆಳಕಿನ ಪ್ರಖರತೆಗೆ ಮತ್ತೆ ಕಣ್ಣು ಮುಚ್ಚಿದಳು.ಎಲ್ಲ ಫಾರ್ಮಾಲಿಟಿ ಮುಗಿದು ಮಗುವನ್ನು ಎದೆಗಾನಿಸಿಕೊಂಡು ದಂಪತಿ ಹೊರನಡೆದರು.
ಮುಂದಿನ ದಿನಗಳು ಅವಳ ಲಾಲನೆಯಲ್ಲಿ ಕಳೆಯಿತು. ನಾಮಕರಣ,ಮೊದಲ ವರ್ಷದ ಹುಟ್ಟುಹಬ್ಬ ಹೀಗೆ ಸಂಭ್ರಮದಲ್ಲಿ ದಿನ
ಕಳೆದುದೇ ತಿಳಿಯಲಿಲ್ಲ. .ನೋದುತ್ತಿದ್ದಂತೆ ಸುಮನ್ ಬೆಳೆದು ಶಾಲೆಗೆ ಹೊರಟಳು. ಸುರೇಶನಿಗೆ ದಿಗಿಲು ಸತ್ಯಸಂಗತಿ ಮಗಳಿಗೆ ತಿಳಿಹೇಳಬೇಕು ..ಆದರೆ ಇದಕ್ಕೆ ಹೆಂಡತಿಯ ಪ್ರಬಲ ವಿರೋಧ ಎದುರಾಯಿತು.ಸುರೇಖ ಸುಮನ್ ಬಗ್ಗೆ ಪಾಸೆಸಿವ್ ಆಗಿದ್ದಳು.
ಅವಳಿಗೆ ಚಿಕ್ಕ ನೋವಾದರೂ ಇವಳಿಗೆ ತಳಮಳವಾಗುತ್ತಿತ್ತು.
--------------------೦------------------------------೦-----------------------------------೦---------------------------------------

ಮಗಳ ಜೊಂಪುಗೂದಲಲ್ಲಿ ಬೆರ‍ಳಾಡಿಸುತ್ತ ಸುರೇಶ ಕುಳಿತಿದ್ದ. ಅತ್ತು ಅತ್ತು ಸುಸ್ತಾಗಿ ಸುಮನ್ ಮಲಗಿ
ಬಿಟ್ಟಿದ್ದಳು. ಸುರೇಖಳೂ ನಿದ್ದೆ ಹೋಗಿದ್ದಳು.ಸುರೇಶ ಯೋಚಿಸುತ್ತಿದ್ದ. ಹೇಗೆ ಈ ಸಮಸ್ಯೆ ಪರಿಹರಿಸುವುದು ಮಗಳ ಮುಗ್ಧ
ಮನಸ್ಸಿಗೆ ನೋವಾಗಿದೆ ನಿಜ ಆದರೆ ವಾಸ್ತವಕ್ಕೆ ಬೆನ್ನು ಮಾಡಿ ಅದೆಷ್ಟು ದಿನ ಇರೋದು. ಸತ್ಯ ಅವಳಿಗೆ ತಮ್ಮಿಂದಲೆ ಗೊತ್ತಾಗಿದ್ದರೆ ಅದರ ಪರಿಣಾಮ ಬೇರೆ ಆಗಿರುತ್ತಿತ್ತು ಆದರೆ ಬೇರೆಯವರಿಂದ ತಿಳಿಯೋದು ಆಘಾತ ತಂದಿದೆ .... ಯೋಚಿಸುತ್ತ
ಸುರೇಶ ಒಂದು ನಿರ್ಧಾರಕ್ಕೆ ಬಂದ. ನಿರಾಳವಾಗಿ ಮಲಗಿದ.

Wednesday, September 30, 2009

" ನಾ ಮಾತ್ರ ತಾಯಿ ಅಲ್ವಾ...."

ಮೇಲಿನ ತಲೆ ಬರಹದ ಕತೆ ಅಕ್ಟೋಬರ್ ತುಷಾರ ದಲ್ಲಿದೆ. ಮೂಲ ತೆಲುಗು ಲೇಖಕರು
"ಶ್ರೀ ಮನ್ನೆ ಸತ್ಯನಾರಾಯಣ" ಹಾಗೂ ಯಶಸ್ವಿಯಾಗಿ ಕನ್ನಡಕ್ಕೆ ತಂದವರು ಯಲ್ದೂರು ಪ್ರಭು. ಇದು ಅನುವಾದಿತ ಕತೆ.
ನಮ್ಮ ಸಮಾಜದ ಓರೆ ಕೋರೆ , ಹುಳಕನ್ನು ಬೆತ್ತಲಾಗಿಸುತ್ತದೆ. ನಾವೇ ಸೃಷ್ಟಿಸಿಕೊಂಡ ಮೇಲು ಕೀಳುಗಳು
ಸಂಪತ್ತು ಆಧಾರಿತ ವರ್ಗೀಕರಣ ಇವು ನಮ್ಮ ದೇಶ ೬೦ ಸ್ವಾತಂತ್ರ್ಯನೋಡಿದರೂ ಹಾಗೆ ಇದೆ ಇನ್ನೂ ಜಾಸ್ತಿಯಾಗಿತ್ತಿದೆ.

ಸಂಕ್ಷಿಪ್ತವಾಗಿ ಕತೆ ಹಂದರ ಹೀಗಿದೆ. ರೇಖಾ ಹಾಗೂ ನರಸಮ್ಮ ಇಬ್ಬರೂ ಕೂಡಿ ಆಡಿದವರು
ರೇಖಾ ಮಹಿಳಾ ಕಲ್ಯಾಣ ಇಲಾಖೆ ನೌಕರಳು. ನರಸಮ್ಮ ಕೂಲಿ ಹೆಂಗಸು. ಕತೆ ಶುರುಆಗುವುದು ನರಸಮ್ಮ ರೇಖಾಳ ಬಳಿ
ಸಾವಿರರುಪಾಯಿ ಸಾಲ ಕೇಳುತ್ತಾಳೆ. ರೇಖಾಗೆ ಆಶ್ಚರ್ಯದ ವಿಷಯ ಅಂದ್ರೆ ನರಸಮ್ಮ ಒಂದು ತಿಂಗಳ ಮಗುವಿನ ಬಾಣಂತಿ ಆದರೂ ದುಡಿಯಲು ಹೋಗುತ್ತ ಇದ್ದಾಳೆ ಹಾಗೂ ತಾನು ದುಡಿಯದಿದ್ದರೆ ಸಂಸಾರದ ಬಂಡಿ ಸಾಗೊಲ್ಲ ಎಂಬ
ಸಂಗತಿ ರೇಖಾಳಿಗೆ ತಿಳಿಸುತ್ತಾಳೆ. ರೇಖಾಳೂ ಹೆರಿಗೆ ರಜೆಯಲ್ಲಿದ್ದಾಳೆ. ಸರಕಾರ ತನಗೆ ಹೆರಿಗೆ ರಜೆ, ಭತ್ಯೆ ಇತ್ಯಾದಿ ಸವಲತ್ತು
ನೀಡಿರುವುದಾಗಿ ಹೇಳುತ್ತಾಳೆ. ನಮ್ಮ ತಾಯ್ತನಕ್ಕೆ ಗೌರವ ದ್ಯೋತಕವಾಗಿ ಸರಕಾರ ಹೀಗೆ ಸವಲತ್ತು ನೀಡಿದೆ ಎನ್ನುತ್ತಾಳೆ.
ಮುಗ್ಧೆ ನರಸಮ್ಮ ರೇಖಾಳ ಪುಣ್ಯ ಹೊಗಳುತ್ತಾಳೆ.ಮರುದಿನ ಮತ್ತೆ ಬಂದ ನರಸಮ್ಮ ರೇಖಾಳಿಗೆ ಪ್ರಶ್ನೆ ಹಾಕುತ್ತಾಳೆ ಅದೆಂದರೆ ಸರಕಾರ ಏಕೆ ತನಗೂ ಹೆರಿಗೆ ರಜೆ, ಭತ್ಯೆ ನೀಡೊಲ್ಲ. " ನೀವು ಕಾಗದ-ಪೆನ್ನಿನಿಂದ ಕೆಲ್ಸ ಮಾಡ್ತೀರಾ ನಾವು ಭೂಮಿ ಮೇಲೆ ಮಣ್ಣಿನ ಜೊತೆ ಕೆಲ್ಸ ಮಾಡ್ತೀವಮ್ಮ..." . ನರಸಮ್ಮನ ಪ್ರಶ್ನೆ ರೇಖಾಗೆ ವಿಚಲಿತಳನ್ನಾಗಿ ಮಾಡುತ್ತದೆ. ನರಸಮ್ಮನ
ಬೇಡಿಕೆ ನ್ಯಾಯ ಸಮ್ಮತವಾದದ್ದೇ ನಿಜ. ಆದ್ರೆ ತಾನೊಬ್ಬಳು ಏನು ಮಾಡಲಾದೀತು ಇದು ಅವಳ ದಿಗಿಲು. ರೇಖಾ ತನ್ನ ತಾಯಿಯನ್ನು ಕರೆಸಿಕೊಳ್ಳುತ್ತಾಳೆ ಅವಳ ತಾಯಿ ಸಹ ಸರಕಾರಿ ಉದ್ಯೋಗದಲ್ಲಿರೋಳು.ಒಂದು ತಿಂಗಳು ರಜೆ ಹಾಕಿದ್ರೆ ಸಂಬಳ ಕಟ್ ಆಗುತ್ತೆ ಇದು ಅವಳ ಗೋಳು.ಇತ್ತ ರೇಖಾ ಇನ್ನೂ ಎರಡು ತಿಂಗಳು ಮೆಟರ್ನಿಟಿ ಲೀವ್ ಬಾಕಿ ಇರೋವಾಗ್ಲೆ
ಕೆಲಸಕ್ಕೆ ಹಾಜರಾಗುತ್ತಾಳೆ . ಗಂಡ ತಾಯಿ ಸಹೋದ್ಯೋಗಿಗಳ ಕುಹಕಕ್ಕೆ ಜಗ್ಗದೇ. ತಾಯಿಗೆ ರೇಖಾ ಪ್ರಶ್ನಿಸುತ್ತಾಳೆ...
" ಅಮ್ಮ ಸರಕಾರೀ ತಾಯಿ ಮತ್ತು ಖಾಸಗಿ ತಾಯಿ ಅಂತ ಬೇರೆ ಇರ್ತಾರಾ " ತಾಯಿ ನಿರುತ್ತರವಾಗುತ್ತಾಳೆ. ರೇಖಾ
ಐದುಸಾವಿರ ನರಸಮ್ಮನಿಗೆ ಕೊಟ್ಟು ಮೂರು ತಿಂಗಳಮಟ್ಟಿಗಾದರೂ ಮನೆಯಲ್ಲಿಯೇ ಇದ್ದು ಮಗುವನ್ನು ಚೆನ್ನಾಗಿ ನೋಡು
ಎಂದು ಕೇಳಿಕೊಳ್ಳುತ್ತಾಳೆ."ನೌಕರರ ಬೇಡಿಕೆ ಈಡೇರಿಕೆಗೆ ರಾಜಧಾನಿ ಚಲೋ" ಎಂಬ ಕರಪತ್ರ ಮುಡುಡಿ ಬಿಸಾಕುತ್ತಾಳೆ.

ಒಬ್ಬರಿಂದ ಏನೂ ಸಾಧ್ಯವಿಲ್ಲ ಇದು ನಾವೆಲ್ಲ ಆಗಾಗ ಅಂದುಕೊಳ್ಳೋ ಮಾತು. ಎಲ್ಲದಕ್ಕೂ ಇನ್ನೊಬ್ಬರೆಡೆಗೆ ಬೆರಳು ಮಾಡಿ ತೋರಿಸುವುದು ರೂಢಿಯಾಗಿದೆ. ೬೦ ದಶಕ ಕಳೆದಿವೆ ಸರಕಾರ ಪ್ರತಿವರ್ಷ ಹೊಸ ಹೊಸ
ಯೋಜನೆ ಪ್ರಕಟಿಸುತ್ತದೆ. ಯಾರಿಗೆ ಅದು ಮುಟ್ಟಬೇಕಾಗಿದೆಯೋ ಅದು ಅವರಿಗೆ ತಲುಪಿಯೇ ಇಲ್ಲ. ನಮ್ಮ ಯೋಜನಾವರದಿಗಳು.ಆಯವ್ಯಯಗಳು ಏನು ಮಾಡಿವೆ. ಯಾರಿಗೆ ಇದರ ಫಲ ದೊರೆಯಬೇಕಾಗಿತ್ತೋ ಇನ್ನೂ ಅವರ
ತಲೆಮೇಲೆ ಸೂರಿಲ್ಲ ಕೂಳಿಲ್ಲ. ನಿಜ ವೋಟಿನ ಸಮಯದಲ್ಲಿ ಇವರಿಗೆ ಕೈ ಮುಗಿಯುವ ರಾಜಕಾರಣಿಗೆ ಇವರು ಮತ್ತೆ ನೆನಪಾಗೋದು ಐದು ವರ್ಷಗಳ ನಂತರವೇ.ಇದು ಇಷ್ಟೇ ಎಂದು ನರಸಮ್ಮನಂತಹವರು ಯಾವಾಗೋ ಠರಾಯಿಸಿಬಿಟ್ಟಿದ್ದಾರೆ.
ಇದು ಬರೀ ಹಳ್ಳೀ ವಿಷಯ ಅಲ್ಲ, ಬೆಂಗಳೂರಿನಲ್ಲೂ ಈ ಶೋಷನೆ ಇದೆ. ಸಂಬಳ ಕಟ್ ಆಗುತ್ತೆ ಎಂಬ ಸಂಕಟಕ್ಕೆ ಹಸುಗೂಸುಗಳನ್ನು ಕರೆದುಕೊಂಡೇ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಾರೆ. ಮಗು ಆಗಾಗ ಅಳಬಾರದು ಎನ್ನೋ ಸಂಕಟಕ್ಕೆ ಆ
ಕೂಸಿಗೆ ನಿದ್ದೆ ಔಷಧಿ ಉಣಿಸೋ ಮಾಲಕರಿದ್ದಾರೆ. ತಾಯಿ ಆಗಾಗ ಮಗೂಗೆ ಹಾಲು ಉಣಿಸಿದರೆ ಉತ್ಪಾದನೆ ಕಡಿಮೆ ಆಗುತ್ತದೆ
ಇದು ಅವರ ಸಂಕಟ. ಹೇಗಿದೆ ಈ ವಿಷ ವರ್ತುಲ.....?

ಬೆಚ್ಚನೆ ಮನೆಯಲ್ಲಿ ಕಂಪ್ಯೂಟರ್ ಮುಂದೆ ಕೂತು ಟಂಕಿಸುವುದರಿಂದ ಈ ಕತೆ ಓದಿ ಅಥವಾ ಇದರಿಂದ ನರಸಮ್ಮನಂತಹವರು ಉದ್ಧಾರ ಆಗುತ್ತಾರೆ ಎಂಬ ಯಾವ ನಂಬಿಕೆ ನನಗಿಲ್ಲ. ಮನ ಕಲಕಿದ ಕತೆ ಬಗ್ಗೆ ನಿಮ್ಮೊಡನೆ
ಹಂಚಿಕೊಳ್ಳುವ ಇರಾದೆ ಮಾತ್ರ ಇದೆ.

Tuesday, September 22, 2009

ಆಶಾಗೆ ೭೬ ಅಂತೆ.....!

ಮೊನ್ನೆ ಟಿವಿಯಲ್ಲಿ ಆಶಾ ಮಾತನಾಡುತ್ತಿದ್ದಳು. ಒಳಗು ಬಿಚ್ಚಿಡಬಹುದು ಎಂದು ಕಾದಿದ್ದೆ ನಿರಾಸೆಯಾಯಿತು. ಅವಳು ಅನುಭವಿಸಿದ್ದು ಅವಳು ಮಾತ್ರ ಹೇಳಬೇಕು.ಬೇರೆ ಯಾರೇ ಹೇಳಿದರೂ
ಅದು ಗಾಸಿಪ್ ಅನಿಸಿಕೊಳ್ಳುತ್ತೆ. ಆಶಾ ಏನೂ ಬದಲಾಗಿಲ್ಲ ಇದು ಅಂದೇ ರಾತ್ರಿ ನಿರೂಪಿತವಾಯಿತು.
ಝೀ ಟಿವಿಯ ಲಿಟಲ್ ಚಾಂಪ್ ಕಾರ್ಯಕ್ರಮ ಅವಳು ಮುಖ್ಯ ಜಡ್ಜ ಆಗಿದ್ದಳು. ಶ್ರೇಯಸಿ ಎನ್ನೋ ಹನ್ನೆರಡು
ವರುಷದ ಹುಡುಗಿ ಆಶಾ ಹಾಡಿದ " ಪ್ಯಾರ್ ಕರನೆವಾಲೆ ಪ್ಯಾರ್ ಕರತೆ ಹೈ ಶಾನ್ ಸೆ ...." ಅಂದಾಗ
ಎಲ್ಲರಿಗಿಂತ ಮೊದಲು ಎದ್ದು ನಿಂತು ಚಪ್ಪಾಳೆ ಹೊಡೆದಳು...!

ಆಶಾಳ ಈ ಗುಣವೇ ಅವಳ ದೌರ್ಬಲ್ಯ ಆಗಿತ್ತೇ ? ಇತಿಹಾಸ ಸಾಕ್ಷಿ ಹೇಳುತ್ತದೆ ಆಶಾಳಿಂದ ಅನೇಕ
ಗೀತೆಗಳು ಕಸಿಯಲ್ಪಟ್ಟಿವೆ ಎಂದು, ಪ್ರಮುಖ ಉದಾಹರಣೆ "ಏ ಮೇರೆ ವತನ್ ಕೆ ಲೋಗೋ..." ಹಾಡು.ಸಂಗೀತ ನಿರ್ದೇಶಕ
ಸಿ. ರಾಮಚಂದ್ರ ಆಶಾಳನ್ನು ಹಾಡಲು ಆಯ್ಕೆ ಮಾಡಿದ್ದ. ರೆಕಾರಡಿಂಗ್ ವೇಳೆ ಲತಾನೂ ಸ್ಟುಡಿಯೋದಲ್ಲಿದ್ದಳು. ಆಶಾಗೆ ಇರಿಸು ಮುರಿಸು
ನಿಜವಾಗಿ ಲತಾನೇ ಈ ಹಾಡು ಹಾಡಬೇಕಾಗಿತ್ತು ಆದರೆ ಸಿ.ರಾಮಚಂದ್ರ ಗೆ ಅದು ಇಷ್ಟ ಇರಲಿಲ್ಲ. ಅಳುಕುತ್ತ ಆಶಾ ಹಾಡಲು
ಮೊದಲಿಟ್ಟಳು. ಹಾಡು ಮುಂದುವರೆಸುವುದು ಅವಳಿಗಾಗಲಿಲ್ಲ. ಹೊರಗಡೆ ಅಕ್ಕ ಕುಳಿತಿದ್ದಾಳೆ..ತನ್ನ ಜೀವನದ ಮಹತ್ತರ ಗೀತೆ ಇದು
ಅದರೆ ಲತಾಳ ಮುಖದಿಂದ ಹೊಮ್ಮಿದ ಭಾವ ಆಶಾಳಿಗೆ ಅಧೀರ ಮಾಡಿತು. ಹಾಡು ನಿಲ್ಲಿಸಿ ಹೊರಬಂದಳು.. ಸಿ. ರಾಮಚಂದ್ರನಿಗೆ
ದಿಗಿಲು...ಆಶಾ ಸೌಮ್ಯವಾಗಿ ಹೇಳಿದ್ಲು.." ಮಿ ಹೀ ಗಾಣ ಮಃಣೂ ತಾಯಿಲಾ ಅವಡತ್ ನಾಹಿ.....". ಯಾಕೆ ಅವಳು ಹಾಗೆ ಮಾಡಿದ್ಲು ಇದು
ಅವಳೇ ಹೇಳಬೇಕು. ಸಿ.ರಾಮಚಂದ್ರ ತನ್ನ ಆತ್ಮಚರಿತ್ರೆಯಲ್ಲಿ ಈ ಪ್ರಸಂಗ ದಾಖಲಿಸಿದ್ದಾನೆ.

ಹಿಂದಿ ಸಿನೇಮಾದ ಹಾಡಿನ ಇತಿಹಾಸ ಗಮನಿಸಿದರೆ ಅದು ಲತಾ ಹಾಗೂ ಆಶಾ ನಡುವೆಯೇ
ಸುತ್ತುತ್ತದೆ. ಅದಾವ ಮಹಾರಾಯ ಆಶಾ ಬರಿ ಚೆಲ್ಲು ಚೆಲ್ಲು , ಕುಣಿತದ ಹಾಡಿಗೆ ಹೊಂದುತ್ತಾಳೆ ಎಂದು ನಿರ್ಧರಿಸಿದ್ದನೋ ಗೊತ್ತಿಲ್ಲ,
ನಿಯಮದಂತೆ ಇದನ್ನು ಪಾಲಿಸಲಾಗುತ್ತಿತ್ತು. ಈ ನಿಯಮ ಮೊದಲು ಮುರಿದವ ಎಸ್. ಡಿ ಬರ್ಮನ್. ಬಂದಿನಿ ಚಿತ್ರದ
" ಅಬ್ ಕೆ ಬರಸ್ ಭೇಜ ಭೈಯಾಕೊ ಬಾಬುಲ್..." ಹಾಡಿಗೆ ಆಶಾ ಆತ್ಮವನ್ನೇ ಧಾರೆ ಎರೆದಿದ್ದಳು. ಆದರೇನು ನಶೀಬು ಬದಲಾಗಲಿಲ್ಲ.
ಆಶಾ ಗೆ ಹಾಡು ಸಿಗುವುದೇ ಅಪರೂಪ ಸಿಕ್ಕ ಹಾಡುಗಳಿಗೆ ಸರ್ವಸ್ವ ಕೊಡುತ್ತಿದ್ದಳು. ಹಾಡು ಒಂದೊಂದು ಮುತ್ತಿನಂತೆ.....
" ಕಾಲಿ ಘಟಾ ಛಾಯೆ ಮೋರಾ ಜಿಯಾ ಘಬರಾಯೆ....."
" ಆಯಿಯೇ ಮೆಹರಬಾ ಬೈಟಿಯೇ ಜಾನೆ ಜಾ...."
" ಶೋಖ್ ನಜರ್ ಕಿ ಬಿಜಲಿಯಾಂ......"
" ಸಾಕಿಯಾ ಆಜ್ ಮುಝೆ ನೀಂದ ನಹಿ ಆಯೇಗಿ..."
" ಯೇ ಹೈ ರೇಶಮಿ ಜುಲ್ಫೋಂಕಾ ಅಂಧೇರಾ ನ ಘಬರಾಯಿಯೇ...."

ಪಂಚಮ್ ಅವಳ ಜೀವನದಲ್ಲಿ ಬಂದ. ಇವಳ ದನಿಗೆ ಹೊಸ ಆಯಾಮ ನೀಡಿದ. ದನಿಯ ಏರಿಳಿತ ಆಸ್ತಿ ಅನಿಸುವಂತೆ ಮಾಡಿದ. ಸ್ವತಃ ಆಶಾ ದಂಗಾದಳು. ಈ ಜೋಡಿ ಹೊಸ ಪ್ರಯೋಗಗಳಿಗೆ ನಾಂದಿ ಹಾಡಿತು.
ತೀಸರಿ ಮಂಜಿಲ್ ನಿಂದ ಶುರುವಾಗಿದ್ದು ಇಜಾಜತ್ ವರೆಗೆ ನಿರಂತರವಾಗಿ ಪ್ರವಹಿಸಿತು. ಮುತ್ತುಗಳು ಬೇಜಾನ್
ಇವೆ ಕೆಲ ಸ್ಯಾಂಪಲ್ ಗಳು ಹೀಗಿವೆ....

" ಆಆಜಾ ಆಆಜಾ ಮೈ ಹೂಂ ಪ್ಯಾರ ತೇರಾ..."
" ಪಿಯಾತೂ ಅಬ್ ತೊ ಆಜಾ...."
" ಆಜ್ ಕಿ ರಾತ್ ಕೋಯಿ ಆನೆ ಕೊ ಹೈ ರೆ ಬಾಬಾರೆ...."
" ಚುರಾಲಿಯಾ ನೆ ಹೈ ತುಮನೆ ಜೋ ದಿಲ್ ಕೊ...."
" ಕತರಾ ಕತರಾ ಬೆಹತಾ ಹೈ...."

ಹೆಲೆನ್ , ಬಿಂದು ,ಪದ್ಮಾಖನ್ನ ಅನೇಕ ಡಾನ್ಸರಗಳ ಮೇಲೆ ಚಿತ್ರಿತವಾದ ಎಲ್ಲ ಹಾಡುಗಳಿಗೂ ಆಶಾಳ ಹಿನ್ನೆಲೆ
ದನಿ ಜೀವಾಳವಾಗಿತ್ತು.. ಈ ಪರಂಪರೆ ಮುರಿದವ ಖಯ್ಯಾಮ್. ರೇಖಾ ಉಮ್ರಾವ್ ಜಾನ್ ಆಗಿ ನಟಿಸುತ್ತಾಳೆ
ಎಂದಾಗ ಚಿತ್ರೋದ್ಯಮ ಹುಬ್ಬೇರಿಸಿತ್ತು. ಖಯ್ಯಾಮ್ ಆ ಚಿತ್ರದ ಹಾಡುಗಳನ್ನು ಆಶಾಳಿಂದ ಹಾಡಿಸುತ್ತಾನೆ ಅಂದಾಗ ಉದ್ಯಮದ ಮಂದಿ ದಂಗಾದರು. ಖಯ್ಯಾಮ್ ಉಮ್ರಾವ್ ಜಾನ್ ಬಗೆಗಿನ ಪುಸ್ತಕ ಆಶಾಗೆ ಓದಲು
ಕೊಟ್ಟ. ಉಮ್ರಾವ್ ಜಾನ್ ಬಗ್ಗೆ ತಿಳಿದುಕೊಳ್ಳಲು ಅದು ನೆರವಾಯಿತು.ಅಭಿನಯಕ್ಕೆ ರೇಖಾ ರಾಷ್ಟ್ರೀಯ ಪ್ರಶಸ್ತಿ
ಪಡೆದರೆ ಆಶಾ " ದಿಲ್ ಚೀಜ್ ಕ್ಯಾ ಹೈ ಆಪ್ ಮೇರಿ ಜಾನ್ ಲಿಜೀಯೆ..." ಗೆ ಮೊದಲಬಾರಿ ರಾಷ್ಟ್ರಪ್ರಶಸ್ತಿ
ಗಳಿಸಿಕೊಂಡಳು.

ಆಶಾಗೆ ಒಂದು ಗುಣ ದೈವದತ್ತವಾಗಿ ಬಂದಿದೆ. ಬದಲಾವಣೆಗೆ ಬಹಳ ಬೇಗ ಹೊಂದಿಕೊಳ್ಳುತ್ತಾಳೆ. ಇಲ್ಲವಾದರೆ ೬೨ರ ಹರೆಯದಲ್ಲಿ ಮಾದಕವಾಗಿ..." ತನಹಾ ತನಹಾ ಯಹಾಂಪೇ ಜೀನಾ ಏ ಕೋಯಿ ಬಾತ್ ಹೈ..." ಅನಲಾಗುತ್ತಿತ್ತೇ...? ಅಲ್ಬಮ್ ನಲ್ಲೂ ಹಾಡಿ ಪರಾಕ್ರಮ ಮೆರೆದಳು. "ಜಾನಮ್ ಸಮಝಾಕರೋ.." ಒಂದು ಕಾಲದ ಹಿಟ್ ಅಲ್ಬಮ್.

ಆಶಾ ಒಂದು ಶಮಾ ಇದ್ದಂತೆ.ಅನೇಕ ಯುಗ ಉರುಳಿವೆ ಆದರೂ ಅದು ಬೆಳಗುತ್ತಲೇ ಇದೆ
ಅವಳೇ ಹಾಡಿದ ಸಾಲು ಹೀಗಿದೆ....
"ಇಕ್ ಶಮ್ಮೆ ಪರೋಜಾಂಕೊ ಆಂಧಿಸೆ ಡರಾತೆ ಹೋ....
ಇಸ್ ಶಮ್ಮೆ ಪರೋಂಜಾಕೆ ಪರವಾನೆ ಹಜಾರೋಂ ಹೈ..."









-----------------------------------------------------

Monday, September 14, 2009

ಗಮ್ಯ

ಹಿಂದೆ ಅದಾರೋ ಊರಿಹೋದ
ಹೆಜ್ಜೆ ಗುರುತುಗಳು ದಾರಿಯಲಿ ಮಾಸಿಲ್ಲ...
ಈ ಮರುಭೂಮಿಯಲೂ ಚಿಗಿಯುವ ಗಿಡ...
ಇದಾರ ಹಪಾಪಿತನ...
ಬಿಚ್ಚಿ ಬತ್ತಲಾಗಬೇಕು ಓಡಬೇಕು ಈ
ಧಾವಂತ ನಿರಂತರ..

ಗಮ್ಯ ಎಲ್ಲಿ ನೆಲೆ ಯಾವುದು ಗೊತ್ತಿಲ್ಲ
ವಾಸ್ತವಕೆ ಬೆನ್ನು ತೋರಿಸಿ ಓಡುವ
ಹವ್ಯಾಸ ನನಗೆ ಹೊಸದೇನಲ್ಲ....!

ಎಲ್ಲಿ ಹೋದರೇನು ಏನು ಕಳೆದರೇನು
ಬೆನ್ನಿಗಂಟಿದ ಬೇತಾಳ ಈ ದೇಹ...
ಇದು ವಾಸ್ತವವಾದರೆ ಈ ಓಟ ಯಾಕೆ
ದಿನ ಕಳೆದಂತೆ ರಾತ್ರಿಯ ಹಂಬಲವೇಕೆ..
ಒಂಟಿ ಹಾಸಿಗೆಯಲಿ ನಾಳಿನ ಕನಸೇಕೆ....?