Monday, December 15, 2014

ಸುಮ್ಮನ ನೆನಪು....೨

ಮೊದಲಿನ ಭಾಗದಲ್ಲಿ ಬರದಂಗ ಹೇಮಂತ್ ಅನ್ನುವ ಹೆಸರು ಹೊಸಾ ಸಾಧ್ಯತೆ ತೆರೆದಿತ್ತು. ನನ್ನೆಲ್ಲ ಈ ಸಾಹಸಗಳನ್ನು
ಗೆಳೆಯ ವಿವೇಕ್ ಶಿಂಧೆ ಜೊತೆ ಹಂಚಿಕೊಳ್ಳುತ್ತಿದ್ದೆ. ಅವ ಪ್ರೋತ್ಸಾಹ ಕೊಡತಿದ್ದ. ರಂಜಿತಾ ಅನ್ನೋ ಬಂಗಾಲಿ ಹುಡುಗಿದು
ಪತ್ರ ಬಂದಿತ್ತು. ವಿವೇಕ್ ಶಿಂಧೆ ಗ ಏರ್ಫೋರ್ಸ ನೌಕರಿ ಸಿಕ್ಕಿತ್ತು. "ಬಂಗಾಲಿ ಹುಡುಗ್ಯಾರು ಭಾಳ ಛಂದಿರತಾರಲೆ.." ಅಂತ
ಅವ ಆಸೆಗಳಿಗೆ ಗೊಬ್ಬರ ಹಾಕಿದ. ಫೋಟೋಗಳ ವಿನಿಮಯನೂ ಆದುವು..ಅವು ಕಲರ್ ಫೋಟೋಗಳಲ್ಲ ..ಬ್ಲಾಕ್ ವೈಟ್ ದಾಗ ಹುಡುಗಿಯರ ಚೆಹರೆ ಛಂದ ಕಾಣಸತಿತ್ತು.ಮನಸ್ಸಿನ್ಯಾಗ ಮಂಡಿಗಿ ತಿಂತಿದ್ದೆ ಜೋರಾಗಿ ಪತ್ರಹೋಗೂದು ಬರೂದು ಇತ್ತು.

ಹುಡುಗರ ಗೆಳೆತನನೂ ಲಭಿಸಿತು. ತಾಳಿಕೋಟಿಯ ಮುಜಾವರ್ ,ಗದಗದ ಮಕಾಂದಾರ್ ಇತ್ಯಾದಿ. ಮಕಾಂದಾರ್ ಹೊಸಾ
ಕವಿಗಳ ಸಂಕಲನ ತರುವ ತಯಾರಿಯಲ್ಲಿದ್ದರು. ನಾನು ನನ್ನ ಕವಿತೆ ಕಳಿಸಿದ್ದೆ ಹೆಸರು "ಸಾರಾಂಶ" ಅಂತ. ಅದು ಪ್ರಕಟ ಆತು ನನ್ನ ಕಿರುಪರಿಚಯನೂ ಅದು ಒಳಗೊಂಡಿತ್ತು. ಹೊಸಾ ಗೆಳೆಯರ ಗೆಳತಿಯರ ಪರಿಚಯ ಲಭಿಸಿತು, ನಾನು ಮಕಾಂದಾರ್ ಜೋಡಿ "ಪ್ರೇಮಲೋಕ" ಸಿನೇಮಾ ನೋಡಿದ್ದೆ..ನಾವಿಬ್ಬರೂ ಆ ಸಿನೇಮಾದ ವಿಮರ್ಶಾನೂ ಮಾಡಿದೆವು..ಅತ್ಯಂತ ಕಟು ಶಬ್ದದಾಗ ಸಿನೇಮಾ ಫ್ಲಾಪ್ ಆಗತದ ಅಂತ ಭವಿಷ್ಯ ಹೇಳಿದೆವು ಆಗಿದ್ದೆಲ್ಲ ಉಲಟಾ ಅದು ಬ್ಯಾರೆ. ಈ ಒಂದು ಘಟ್ಟದಾಗ ನಂಗ .ಎಚ್.ಕೆ ಸುಬ್ಬಲಕ್ಷ್ಮಿ ಅನ್ನುವಳ ಪರಿಚಯ ಆತು..ಪತ್ರಗಳ ಮುಖೇನ. ಅಕಿದು ಒಂಥರಾ ದೈವಿಕ ವ್ಯಕ್ತಿತ್ವ. ಫೋಟೋ ಕಳಿಸಿದ್ಲು ನನ್ನ ಒತ್ತಾಯಕ್ಕ..ಮುತ್ತಿನಂತಹ ಅಕ್ಷರ ಅಕಿವು. ಅಕಿ ಮಯೂರದಾಗ ಬರುತ್ತಿದ್ದ "ಚಿತ್ರಕವನ" ಸ್ಫರ್ಧಾದಾಗ ಭಾಗವಹಿಸತಿದ್ಲು..ಬಹುಮಾನ ಕೆಲವೊಮ್ಮೆ ಬರತಿದ್ದವು ಹಲವು ಸಲ ಅವಳ ಕವಿತೆ ಮೆಚ್ಚಿಗೆ ಪಡೆದ ಲಿಸ್ಟಿನ್ಯಾಗ ಇರತಿದ್ದವು. ಮಲ್ಲಾಡಿಹಳ್ಳಿಯೊಳಗ ಆಶ್ರಮದಾಗ ಇದ್ದು ಕಾಲೇಜು ಕಲಿತಿದ್ದಳು..ಸ್ವತಃ ಅಪ್ಪ ಅವ್ವ
ಇದ್ದರೂ ಅವರ ಬಗ್ಗೆ ಭಾರಿಕಮಿ ಹೇಳಾಕಿ ಬದಲಿಗೆ ಆಶ್ರಮ ಅಲ್ಲಿಯ ಗುರೂಜಿ ಹಂಗ ಅಲ್ಲಿಯ ಜೀವನದ ಬಗ್ಗೆ ಬಹಳ ಸೊಗಸಾಗಿ ಬರಿತಿದ್ದಳು. ಅಕಿ ಜೋಡಿ ಪತ್ರವ್ಯವಹಾರ ಮಾಡುತ್ತ ನಾ ಹೊಸಾಹೊಸಾ ವಿಷಯ ತಿಳಕೊಂಡೆ. ಅಕಿ ನಂಕಿಂತಸಣ್ಣಾಕಿ ಆದ್ರ ಅಕಿ ಜೀವನದ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯ ಎಲ್ಲ ನಂಗೂ ಪಟಾಯಿಸಿದವು. ವೈಯುಕ್ತಿಕವಾಗಿ ನಾ ನನ್ನ ತಂದಿ, ಅಕ್ಕಗ ಕಳಕೊಂಡಿದ್ದು ಸಹ ನನ್ನಲ್ಲಾದ ಬದಲಾವಣೆಗೆ ಕಾರಣ ಆದವು.

ಪತ್ರಮಿತ್ರತ್ವದಾಗ ಆದ ಒಂದು ಕಹಿಘಟನಾ ನಾ ಅದರಿಂದ ವಿಮುಖಆಗಲಿಕ್ಕೆ ಕಾರಣಆತು. ಭೀಮಪ್ಪ ಅನ್ನುವ ಆನೆಗೊಂದಿಯವ ಪರಿಚಯವಾದ. ಅವ ಬೇಂದ್ರೆಯವರ ಮ್ಯಾಲೆ ಬರೆದಿರುವ ಕವಿತಾ ಸಂಗ್ರಹ ಹೊರತರುವುದಾಗಿ ವಿಳಾಸ ನಿಮ್ಮದು ಕೊಡುವುದಾಗಿ ಬರುವ ಕವಿತೆಗಳ ಸಂಗ್ರಹಿಸುವುದು ಹಾಗೆಯೇ ಆ ಕವಿಗಳ ವಿಳಾಸ ಭೀಮಪ್ಪಗೆ ಕಳಿಸಿಕೊಡುವುದು ಅಂತ ಮಾತಾತು. ಪೇಪರುಗಳಲ್ಲಿ ಅವನೇ ಜಾಹೀರಾತು ಕೊಟ್ಟಿದ್ದ. ಕೆಲವುದಿನಗಳಲ್ಲಿ
ಕವಿತೆಗಳು ಬರಲುಶುರುಆದವು. ಸುಮಾರು ೫೦ ಕವಿತಾಗಳ ಸಂಗ್ರಹ ಆತು. ನಾ ಕಳಿಸಿದವರ ವಿಳಾಸಎಲ್ಲಾ ಭೀಮಪ್ಪಗೆ ಕೊಟ್ಟು ಕಳಿಸಿದ್ದೆ.ಮುಂದೆ ಬಂದ ಪತ್ರಗಳ ಧಾಟಿ ವಿಚಿತ್ರಆಗಿದ್ದುವು. "ನೀವು ಹೇಳಿದಂತೆ ದುಡ್ಡು ಕಳಿಸಿರುವೆ..ನೀವು ಹೇಳಿದ ಭೀಮಪ್ಪ ಅವರ ವಿಳಾಸಕ್ಕೆ..ಸಂಕಲನ ಯಾವಾಗ ಬರುತ್ತದೆ.." ಅನ್ನುವ ಒಕ್ಕಣೆ. ಯೋಚಿಸಿದಾಗ ನಾನೆಂತಹ ಕೆಲಸದಲ್ಲಿ ಅಮಾಯಕಾವಾಗಿ ಸಿಕ್ಕಿಹಾಕಿಕೊಂಡೆ ಇದು ನೆನೆದು ನೋವಾಯಿತು. ದೂರಿನ ಪತ್ರಗಳು ಖಾರರೂಪ ತಾಳಿದವು..ನಾ ಭೀಮಪ್ಪಗೆ ಎಲ್ಲ ವಿವರ ಕೇಳಿ ಪತ್ರಬರೆದೆ. ಆಸಾಮಿಯಿಂದ ಉತ್ತರವೇ ಇಲ್ಲ..!! ಹೋಗಿಅವನನ್ನು ಖುದ್ದು ಭೇಟಿಯಾಗಲೆ
ಜೋರುಮಾಡಲೆ ಅನ್ನುವ ದ್ವಂದ್ವ ಕಾಡಿತು.ಮನೆಯಲ್ಲಿ ನನ್ನವ್ವಗೆ ಇದು ಗೊತ್ತಾಗಿ ಅಕಿನೂ ಹೆದರಿದಳು. ಯಾರಾದರೂ ಮನೆಗೆ ಬಂದು ಜೋರುಮಾಡಿದರೆ ಗತಿಏನು ಎಂಬ ಹೆದರಿಕೆ ನಂಗೂ ಕಾಡಿತು ಎರಡುತಿಂಗಳವರೆಗೆ ನಿರಂತರ ಟೆನಶನ್ ಕೊನೆಗೆ ಭೀಮಪ್ಪ ಬಂದ.ಅನಾರೋಗ್ಯದ ಕಾರಣ ಹೇಳಿದ. ಸಂಕಲನ ಶೀಘ್ರಹೊರತರುವುದಾಗಿ ದುಡ್ಡು ಸಂಗ್ರಹಿಸಲು ನನ್ನ ಹೆಸರು ಬಳಸಿಕೊಂಡಿದ್ದು ನಿಜಅಂತ ಒಪ್ಪಿಕೊಂಡ. ನಾ ಅದುವರೆಗೆ ಸಂಕಲಿತ ಎಲ್ಲ ಕವಿತೆಗಳ ಹಸ್ತಪ್ರತಿ ಅವನ ಕೈಯ್ಯಲ್ಲಿತ್ತು ಅವನಿಗೆ ಇದರಿಂದ ಬಿಡುಗಡೆಗೊಳಿಸೆಂದು ಕೇಳಿದೆ. ಅವನಯಾವ ಪ್ರಲೋಭನೆಗಾಗಲಿ ಮನವಿಗಾಗಲಿ ನಾ ಒಪ್ಪಲಿಲ್ಲ.

ಮುಂದೆ ಪೇಪರ್ ನಲ್ಲಿ ಅವ ಮಾಡಿದ ಮೋಸದ ವರದಿ ಪ್ರಕಟವಾಗಿತ್ತು. ಅನೇಕ ಜನರಿಗೆ ಅವ ಸಂಕಲನ ತರುವುದಾಗಿ ಮೋಸಮಾಡಿದ್ದನಂತೆ. ನೋವಾಗೋದು ಇಂತಹ ಹೀನ ಕೆಲಸಗಳಿಗೆ ಬೇಂದ್ರೆಯವರ ಹೆಸರು ಬಳಸಿಕೊಂಡಿದ್ದುದು. ನಾ ಗೊತ್ತಿಲ್ಲದೆಯೇ ಹುದುಲಾಗ ಸಿಕ್ಕಿ ಕೊನೆಗೆ ಹೊರಬಂದಿದ್ದೆ. ಪತ್ರಮಿತ್ರತ್ವದ ಇನ್ನೊಂದು ಮುಖದ ಪರಿಚಯಾನು ಆದಂಗಾತು..



2 comments:

  1. ಮೋಸಕ್ಕೆ ಅನೇಕ ಮುಖಗಳು ಇವೆಯಲ್ಲ! ನಿಮ್ಮ ನಿರೂಪಣೆಯಲ್ಲಿ ಪ್ರಾದೇಶಿಕತೆಯ ಒಗರು ಇದೆ. ದಯವಿಟ್ಟು ಮುಂದುವರೆಸಿ.

    ReplyDelete
  2. ಕಹಿಯೂ ಇದ್ದೇ ಇರುತ್ತದಲ್ಲ ಹೀಗೂ! :(
    ಪತ್ರ ಮಿತ್ರತ್ವದ ಮುಂದುವರೆದ ಭಾಗವಾದ ಸಾಮಾಜಿಕ ತಾಣಗಳಲಿರುವ ನಮಗೂ ಇದು ಪಾಠವೇ ಸರಿ...

    ReplyDelete