Saturday, October 25, 2014

ಚೌಕಟ್ಟಿನಾಚೆ

ಪ್ರಸ್ತುತ ಈ ಕತೆಗೆ ಶ್ರೀ ವಿದ್ಯಾದರ್ ಕನ್ನಡ ಪ್ರತಿಷ್ಠಾನ, ಮುಂಬೈ ದವರು ಏರ್ಪಡಿಸಿದ ಕಥಾಸ್ಫರ್ಧೆಯಲ್ಲಿ ಮೂರನೇ ಬಹುಮಾನ ಬಂದಿತ್ತು. ಕತೆ ಓದಿ ನಿಮ್ಮ ಅನಿಸಿಕೆ ಅಭಿಪ್ರಾಯ ಜರೂರು ತಿಳಿಸಿ.

-------------------------------------------------------------------
“ಆರ್‍ ಯು ಕಂಫರ್ಟೆಬಲ್ ಇನ್ ಬೆಡ್” ಅವನ ಪ್ರಶ್ನೆ ಅನಿತಾಗೆ ಮೊದಲು ಅರ್ಥವಾಗಲೇ ಇಲ್ಲ. ನಿಧಾನವಾಗಿ ವಾಸ್ತವಕ್ಕೆ ಬಂದಳು. ಉತ್ಸಾಹ, ಆತಂಕ ಎಲ್ಲ ಮಾಯವಾಗಿ ಎದುರಿನ ಅವನನ್ನು ನಿರುಕಿಸಿದಳು ಹಾಗೆಯೇ ಅರಿವಿಗೆ ಬಂದಿದ್ದು... ತನ್ನ ಗಂಡ ಎಂದೂ ಈ ಪ್ರಶ್ನೆ ಕೇಳಿರಲೇ ಇಲ್ಲ ಅಂತ. ಪ್ರಶ್ನೆಗೆ ಏನು ಉತ್ತರಿಸುವುದು ಎಂಬ ಗೊಂದಲವಿತ್ತು. ಇವಳ ದ್ವಂದ್ವ ಅರಿತವನಂತೆ ಆತ ಮುಂದುವರೆಯಲಿಲ್ಲ. ನಿಧಾನವಾಗಿ ಬೀರ್ ಹೀರಲು ಸುರು ಇಟ್ಟ.
“ನಿಜ ಹೇಳೂದಾದ್ರೆ ಇದೆಲ್ಲ ಅನಬಿಲಿವೇಬಲ್... ಇದು ಸಾಧ್ಯನೇ ಅಂತ ಅನ್ಸುತ್ತೆ...” ಅನಿತಾಳ ಗೊಂದಲ ಅವಳ ದನಿಯಲ್ಲಿ ಇಣುಕಿತ್ತು.
“ರಿಲಾಕ್ಸ್... ಈ ಘಟನೆ ಅಥವಾ ಈ ಗೇಮ್‍ನ ಉದ್ದೇಶವೇ ಹೀಗೆ... ಒಂದೇ ತರಹದ ಅಡಿಗೆ ಪ್ರತಿದಿನ ಉಂಡರೆ ಹೇಗೆ ಬೇಸರ ಆಗುತ್ತದೋ ಹಾಗೆ... ಅದೇ ಗಂಡ ಅಥವಾ ಹೆಂಡತಿ. ನನಗೆ ಈ ಗೇಮ್‍ನಲ್ಲಿ ಹಿಂದೆ ಭಾಗವಹಿಸಿದ ಅನುಭವ ಇದೆ. ನಿಮ್ಮದು ಮೊದಲಸಲ ಅನ್ಸುತ್ತೆ ಅಲ್ಲ...”
ಅವನ ಪ್ರಶ್ನೆಗೆ ತಲೆ ಆಡಿಸಿದಳು. ಕ್ಲಬ್ಬಿಗೆ ಮೆಂಬರ ಶಿಪ್ ಸಹಿ ಮಾಡಿಸಿಕೊಳ್ಳುವಾಗ ಗಂಡ ಈ ಆಟದ ಬಗ್ಗೆ ಹೇಳಿರಲಿಲ್ಲ. ಲಕ್ಕಿ ಡ್ರಿಪ್‍ನಲ್ಲಿ ತಮ್ಮ ಹೆಸರು ಕೂಗಿದಾಗಲೂ ನಂಬಿಕೆ ಬಂದಿರಲಿಲ್ಲ. ತನ್ನ ಮೆಂಬರ್‍ಗಳಿಗೆ ಕೊಡುವ ವಿಶಿಷ್ಟ ಸೇವೆಯೇ ಈ ಆಟ. ಕಳೆದ ಮೂರುವರ್ಷಗಳಿಂದ ಈ ಸ್ಕೀಮನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಹೀಗೆ ಲಕ್ಕಿ ಡಿಪ್‍ನಿಂದ ಎರಡು ಜೋಡಿ ಆರಸಲಾಗುತ್ತದೆ. ಆ ಜೋಡಿಗಳು ಅದಲು ಬದಲಾಗಬೇಕು. ಅಂದರೆ ಆ ಕಡೆಯ ಗಂಡನ ಜೊತೆ ಈ ಕಡೆಯ ಹೆಂಡತಿ... ಆ ಕಡೆಯ ಹೆಂಡತಿ ಜೊತೆ ಈ ಗಂಡ ಇದಕ್ಕೆ ವೈಫ್ ಸ್ವಾಪಿಂಗ್ ಅಂತಾರೆ ಅಂತ ಅನಿತಳ ಗಂಡ ತಿಳಿಸಿದ್ದ. ಬರೀ ವೈಫ್ ಯಾಕೆ ಹಸ್ಬೆಂಡ್ ಸ್ವಾಪಿಂಗ್ ಕೂಡ ಅಲ್ಲವೇ ಅನ್ನುವ ಅನಿತಾಳ ಪ್ರಶ್ನೆಗೆ ಹುಬ್ಬು ಕುಣಿಸಿದ್ದ. ಅನಿತಾ-ಅನಿಲ್ ಮದುವೆಯಾಗಿ ಐದುವರ್ಷ ಮೂರುವರ್ಷದ ಮಗಳು ಮುಂದಿನ ವರ್ಷದಿಂದ ಶಾಲೆಗೆ ಹೋಗುತ್ತಾಳೆ. ಇಬ್ಬರೂ ದುಡಿಯುತ್ತಾರೆ. ಕೆಲಸದ ಒತ್ತಡ ವಿಪರೀತವಿದೆ. ಫ್ಲಾಟ್‍ಬುಕ್ ಮಾಡಿದ್ದು ಇನ್ನೊಂದೆರಡು ತಿಂಗಳಲ್ಲಿ ಪೂಸೆಶನ್ ಸಿಗುವುದಿದೆ. ಮೇಲ್ನೋಟಕ್ಕೆ ಸುಖ ಹಾಗೂ ಸಂತೃಪ್ತತೆಯ ಕುಟುಂಬ ಇಬ್ಬರಲ್ಲೂ ವೃತ್ತಿಯ ಬಗ್ಗೆ ಕಳಕಳಿ ಇದೆ. ಮಹತ್ವಾಕಾಂಕ್ಷೆ ಇದೆ. ಮಗಳಿಗೂ ಏನೂ ಕಮ್ಮಿ ಮಾಡಿಲ್ಲ. ವೀಕೆಂಡ್ ಪೂರ್ತಿ ಅವಳಿಗೆ ಮೀಸಲಿಟ್ಟಿರುವುದಿದೆ. ಆದರೂ ಏನೋ ಚಿಂತೆ ಇದೆ... ಕೊರತೆ ಇದೆ. ಆದರೂ ಮೊದಲಿನ ಹಾಗೆ ಇಲ್ಲ... ಏನನ್ನೂ ಕಳೆದುಕೊಳ್ಳುತ್ತಿದ್ದೇವೆ... ಇದು ಇಬ್ಬರಿಗೂ ಅನಿಸಿತ್ತು. ಹೀಗೆ ಅಂತ ಬೊಟ್ಟುಮಾಡಿ ತೋರಿಸುವುದು. ಸುಲಭದ ಮಾತಾಗಿರಲಿಲ್ಲ. ಅನಿಲ್ ಹೇಳಿದಾಗ ಅನಿತಾ ತಲೆ ಆಡಿಸಿದಳು. ಅವಳಲ್ಲೂ ಅದು ಇತ್ತ್ತು. ಆ ಕೊರತೆಯ ಭಾವ ಅವಳಿಗೂ ಬಾಧಿಸುತ್ತಿತ್ತು. ಇಬ್ಬರು ಹುಡುಕುತ್ತಿದ್ದರು. ಆ ಹಿಂದಿನ ದಿನಗಳ ಸುಖವನ್ನು ಉನ್ಮಾದವನ್ನು ಆದರೆ ಮೊದಲಿನ ಹಾಗೆ ಇರಲಾಗುತ್ತಿಲ್ಲ. ಅನಿಲ್, ಅನಿತಾ ಗೆಳೆಯರೊಡನೆ ಚರ್ಚಿಸಿದರು. ನೆಟ್ ತುಂಬ ಹರಡಿರುವ ಕೌನ್ಸಲಿಂಗ್‍ಗೂ ಮೊರೆಹೋದ್ರು. ಆದರೆ ಪ್ರಯೋಜನ ಮಾತ್ರ ಶೂನ್ಯ. ಈ ಕ್ಲಬ್ ಹಾಗೂ ಅದರ ಸದಸ್ಯರಲ್ಲಿ ನಡೆಸುವ ಲಕ್ಕಿಡಿಪ್ ಎಲ್ಲ ಹೊಸತೆನಿಸಿದ್ದವು. ಇಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಮುಂದುವರೆದದ್ದು.
***
ಬಿಸಿ ಹಾಗೂ ತಣ್ಣಗಿನ ಹದದ ಮಿಶ್ರಣ. ತುಂತುರು ತುಂತುರಾಗಿ ಬೀಳುತ್ತಿತ್ತು. ಸುಹಾಸ್ ಕಣ್ಣುಮುಚ್ಚಿ ಆಸ್ವಾದಿಸುತ್ತಿದ್ದ. ಹೀಗೆಲ್ಲ ಆದೀತು ಎಂದು ಅವ ಊಹಿಸಿರಲಿಲ್ಲ. ಆದರೆ ಅವನು ಯಾವಾಗಲೂ ಆಶಾವಾದಿ. ಅಂದು ನಡೆದು ಹೋದ ವಿಷಯಗಳ ಪುನರಾವರ್ತನೆ ಮಾಡಿಕೊಳ್ಳುತ್ತ ಕೊರಗುವುದು ಮೂರ್ಖತನ ಅನಿಸಿತವಗೆ. ಆದರೆ ತನ್ನ ವರ್ತನೆಯಿಂದ ಅವಳು... ಹೆಸರು ಅನಿತಾ ಅಲ್ಲವೇ... ಇಂಪ್ರೆಸ್ ಆಗಿದ್ದಾಳೆ. ತಾನೇ ತನ್ನ ನಂಬರ್ ಕೊಟ್ಟಿದ್ದಾಳೆ. ಹೊಸಬಳು... ಅನೇಕ ದ್ವಂದ್ವಗಳಿರುತ್ತವೆ... ಹಾಗೆಯೇ ಎಲ್ಲ ಗೋಜಲಾಗಿರುತ್ತದೆ. ತಾನೇ ಸಂಭಾಳಿಸಿಕೊಳ್ಳಬೇಕು. ಈ ಸಂಭಾಳಿಸಿಕೊಳ್ಳುವಿಕೆ ಒಂಥರಾ ರೂಢಿಯಾದಂತಾಗಿದೆ ಅಲ್ಲವೆ... ಅದೂ ಈ ಮೂರು ವರ್ಷಗಳಲ್ಲಿ. ಸುಮತಿ ಡಿಮಾಂಡಿಂಗ್ ಆದ ಮೆಲೆ ತಾನು ಎಲ್ಲ ಅಡ್ಜೆಸ್ಟ್‍ಮೆಂಟ್‍ಗಳ ಮೊರೆ ಹೊಕ್ಕಿರುವುದು. ಈ ಸ್ಥಿತಿ ತನಗೆ ಪೂರ್ತಿ ಒಪ್ಪಿಗೆ ಇಲ್ಲ. ಆದರೂ ಅನಿವಾರ್ಯವಾಗಿ ಒಗ್ಗಿ ಕೊಳ್ಳಬೇಕಾಗಿದೆ. ನೀರು ಹಿತವಾಗಿತ್ತು. ಈ ಶಾವರ್‍ನಿಂದ ಹೊರಹೋಗುವುದೇ ಬೇಡ ಅಂತ ಸುಹಾಸ್ ಅಂದುಕೊಂಡ ನೀರಿನ ಹಿತ ಅನುಭವಿಸುತ್ತಲೇ ಕಳೆದುಹೋದ.
ಸುಮತಿ ಅಂದರೆ ಸುಹಾಸನ ಹೆಂಡತಿ ಬಿಂದಾಸ್ ಆಗಿ ಬೆಳೆದವಳು. ಸುಹಾಸನ ಜೊತೆ ಅವಳ ಮೊದಲ ಭೇಟಿಯೂ ವಿಚಿತ್ರಸ್ಥಿತಿಯಲ್ಲಿಯೇ ಆಗಿತ್ತು. ರಿಸಾರ್ಟ್ ಒಂದರಲ್ಲಿ ಪಾರ್ಟಿ ನಡೆಯುತ್ತಿತ್ತು. ಗೆಳೆಯನೋರ್ವ ಸುಮತಿಗೆ ಸುಹಾಸನನ್ನು ಪರಿಚಯಿಸಿದ್ದ. ಸುಮತಿ ಅದಾಗಲೇ ನಶೇ ಏರುವಂತೆ ಕುಡಿದಿದ್ದಳು. ಮಾತಿನಲ್ಲಿ ಹಿಡಿತವಿರಲಿಲ್ಲ. ಚೇಂಜ್‍ರೂಮ್‍ಗೆ ಹೋಗುವಾಗ ಕಾಲುಜಾರಿಬಿದ್ದವಳನ್ನು ಅನಾಮತ್ತಾಗಿ ಎತ್ತಿಕೊಂಡು ರೂಮಿನ ಹಾಸಿಗೆ ಮೇಲೆ ಮಲಗಿಸಿದ ಸುಹಾಸ ಅಂದಿಡೀ ರಾತ್ರಿ ಮೂಲೆಯ ಸೂಫಾದ ಮೇಲೆಯೇ ಒರಗಿದ್ದ. ನಡುವೆ ಅವಳಿಗೆ ಎಚ್ಚರವಾಗಿ ಬಾತ್‍ರೂಮಲ್ಲಿ ವಾಂತಿ ಮಾಡಿಕೊಂಡಳು ಆಗಲೂ ಅವಳ ಜೊತೆಯೇ ಇದ್ದ. ಮರುದಿನ ಅವಳು ಏಳುವ ಮೊದಲೇ ಬಿಸಿನೀರಿನ ಪಾನಕ ಮಾಡಿಸಿ ಅವಳಿಗೆ ಒತ್ತಾಯದಿಮದ ಕುಡಿಸಿದ್ದ. ಸುಮತಿಗೆ ಇಡೀ ರಾತ್ರಿ ಸುಹಾಸ್ ತನ್ನ ಮೈ ಸಹ ಮಟ್ಟದೇ ಹಾಗೆಯೇ ಇದ್ದಿದ್ದು ವಿಚಿತ್ರವಾಗಿ ಕಂಡಿತು ಕೇಳಿಯೂ ಬಿಟ್ಟಳು. ಸುಹಾಸನ ಮುಗುಳ್ನಗೆಯೇ ಅವಳಿಗೆ ಉತ್ತರ ರೂಪದಲ್ಲಿ ಸಿಕ್ಕಿತು.
ವರಿಬ್ಬರೂ ಮತ್ತೆ ಮತ್ತೆ ಭೇಟಿಯಾದರು ಇಬ್ಬರಲ್ಲೂ ಆಕರ್ಷಣೆ ಬೆಳೆಯಿತು. ಅದಕ್ಕೆ ಮದುವೆಯ ಅಂಕಿತವನ್ನು ಹಾಕಿಕೊಂಡರು. ಇಬ್ಬರೂ ಸಾಪ್ಟ್‍ವೇರ್ ವೃತ್ತಿಯವರು. ಮದುವೆಯಾದ ಮೇಲೆ ಇಬ್ಬರೂ ಜೊತೆಗಿದ್ದುದೇ ಅಪರೂಪ. ಸಿಕ್ಕ ವೇಳೆ ಇಬ್ಬರೂ ಸದುಪಯೋಗಿಸುತ್ತಿದ್ದರು. ಸುಮತಿ ಸೆಕ್ಸ್ ಬೆಗಿನ ಆಸಕ್ತಿ ಅವಳ ಹಸಿವು ಸಹಾಸನಿಗೆ ಅಚ್ಚರಿ ಮೂಡಿಸಿತ್ತು. ಅವಳ ಬಿಂದಾಸ್ ನಡುವಳಿಕೆ, ಅವಳ ಹಿಂದಿನ ಜೀವನದ ಅಫೇರುಗಳು ಎಲ್ಲ ಸುಹಾಸ್ ಅವಳಿಂದ ಕೇಳಿಸಿಕೊಂಡಿದ್ದ. ಮಗ ನಿಶಾಂತ ಹುಟ್ಟಿದ ಮೇಲೆ ಅವಳ ವರ್ತನೆ ಕಡಿಮೆಯಾದೀತು ಅಂದುಕೊಂಡವ ನಿರಾಶೆ ಅನುಭವಿಸಿದ್ದ. ನಿಶಾಂತನಿಗೆ ಬೋರ್ಡಿಂಗ್ ಸ್ಕೂಲ್‍ಗೆ ಸೇರಿಸುವ ಸುಮತಿಯ ನಿರ್ಧಾರ ಸಹಾಸನಿಗೆ ಸಂಬಂದಿರಲಿಲ್ಲ. ಈ ಬಗ್ಗೆ ವಾದ ವಿವಾದಗಳಾದರೂ ಕೊನೆಗೆ ಗೆದ್ದಿದ್ದು ಸುಮತಿಯೇ ಸುಹಾಸ ನಿರ್ಲಿಪ್ತನಾಗುವ ಸೋಗು ಹಾಕಿದ. ಸುಮತಿ ಕೆರಳಿ ನಿಂತಾಗಲೂ ಇವನದು ಅದೇ ಧೋರಣೆ. ಅವಳ ನಿಂದನೆಗಳಿಗೆ, ಚುಚ್ಚುಮಾತುಗಳಿಗೆ ಇವನಿಂದ ಯಾವ ಸ್ಪಂದನೆಯೂ ಇರುತ್ತಿರಲಿಲ್ಲ. ಸುಮತಿನೇ ಕ್ಲಬ್ಬಿನ ಬಗ್ಗೆ ವಿವರ ತೆಗೆದು ಸದಸ್ಯರಾಗುವ ಪ್ರಸ್ತಾಪ ಮುಂದಿಟ್ಟಾಗ ಸುಹಾಸ ವಿಚಲಿತನಾದ. ಇದು ಸರಿ ಅಲ್ಲ ಅನ್ನುವ ವಾದ ಸುಮತಿಯ ಅಬ್ಬರದ ನುಡಿಗಳೆದುರು ಮಂಕಾಯಿತು. ಮುಖ್ಯವಾಗಿ ಸುಮತಿ ಅಂದ ಮಾತುಗಳು ಅವನನ್ನು ಇನ್ನಷ್ಟು ಜರ್ಜರಿತ ಮಾಡಿದವು. ಸುಮತಿ ತನ್ನನ್ನು ‘ಎಮ್‍ಸಿಪಿ’ ಎಂದು ಬ್ರಾಂಡ್ ಮಾಡಿದಾಗ ಸುಹಾಸ ಸೋಲೊಪ್ಪಿಕೊಂಡ. ಇದೂ ಒಂದು ಆಗಿ ಹೋಗಲಿ ಎನ್ನುವ ಧೋರಣೆಯಿಂದ ಫಾರ್ಮಿಗೆ ಸಹಿ ಹಾಕಿದ. ಹೊಸ ಪರಿಚಯ, ಅಲ್ಲಿ ಬಂದ ದಂಪತಿಗಳು ಅವರು ಏನನ್ನು ಹುಡುಕುತ್ತ ಇಲ್ಲಿ ಬಂದಿರಬಹುದು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗಲೇ ಇವರ ಹೆಸರು ಲಕ್ಕಿ ಡಿಪ್‍ನಲ್ಲಿ ಬಂದಾಗಿತ್ತು. ಪಾರ್ಟನರ್ ಮೇಲೆ ಎಲ್ಲಿಲ್ಲದ ಆವೇಶ ಪ್ರದರ್ಶಿಸಿದ. ಸುಹಾಸ್ ತನ್ನ ಸಾಹಸಕ್ಕೆ ಹೆಮ್ಮೆಯನ್ನು ಅನುಭವಿಸಿದ. ಒಂದೆರಡು ಸಾರಿ ಆದ ಮೇಲೆ ಅದ ಬೇಸರ ತರಿಸಿತು. ಹೀಗೆ ಪರರ ಹೆಂಡಂದಿರ ಮೇಲೆ ತನ್ನ ಮೃಗತೃಷೆ ತೀರಿಸಿಕೊಳ್ಳುವುದು ಎಷ್ಟು ಸರಿ ಈ ಜಿಜ್ಞಾಸೆ ಸುರ ಆಯಿತು. ಹಾಗೆ ನೋಡಿದ್ರೆ ತಾನೇಕೆ ಇದಕ್ಕೆ ಒಪ್ಪಿದೆ... ಯಾವ ಸೆಳೆತ ಇತ್ತು ಈಗ ನಿರ್ಧರಿಸಲಾಗುತ್ತಿಲ್ಲ. ಎಲ್ಲ ಸಂಬಂಧಗಳು ಹೀಗೆಯೇನು... ದಿನ ಕಳೆದಂತೆ ಆಕರ್ಷಣೆ ಕಮ್ಮಿಯಾಗುತ್ತ ಸಾಗುತ್ತದೆ. ವಿವಾಹದ ಬೆಳ್ಳಿ, ಸುವರ್ಣ ಮಹೋತ್ಸವ ಆಚರಿಸಿಕೊಂಡವರ ಬಗ್ಗೆ ಹಲವು ಸೋಜಿಗದಿಂದ ನೋಡಬೇಕು. ಅದು ಹೇಗೆ ಅವರ ಬಾಂಡಿಂಗ್ ಅಷ್ಟು ಮಜಬೂತಾಗಿರುತ್ತದೆ ಅಥವಾ ಅವರು ಒಳಗಿಂದೊಳಗೇ ಕಸಿವಿಸಿಪಡುತ್ತ ಹೊರಗಡೆ ಖಷಿಯ ಸೋಗು ಹಾಕಿಕೊಂಡಿರುತ್ತಾರೇನೋ...?
‘ತೇರೆ ಬಿನಾ ಜಿಂದಗಿ ಸೆ ಕೋಯಿ...’ ಮೊಬೈಲ್ ಗುಣುಗುಣಿಸಿತು. ಸುಮತಿಯ ಕಾಲ್‍ಗೆ ಸೆಟ್ ಮಾಡಿಟ್ಟ ಹಾಡು. ಕಾಲ್ ತೆಗೆದು ಕೊಂಡವನಿಗೆ ಅತ್ತಲಿಂದ ತೇಲಿಬಂದ ದನಿಯಲ್ಲಿ ಉತ್ಸಾಹ ತುಳುಕುತ್ತಿದ್ದುದು ಗಮನಕ್ಕೆ ಬಂತು...
“ಹಾಯ್ ಎಲ್ಲಿದ್ದಿ... ನಾ ಅಂತೂ ಫೇಡ್‍ಔಟ್ ಆಗಿರುವೆ. ಈಗ ನಾಳೆ ಸಂಜೆವರೆಗೂ ನಿದ್ದೆ ಮಾಡಬೇಕು. ಮನೆಗೆ ಬಂದರೂ ಡಿಸ್ಟರ್ಬ ಮಾಡಬೇಡ. ನಿನ್ನ ಪಾರ್ಟನರ್ ಹೇಗಿದ್ಲು ಎಂಜಾಯ್ಡ...?”
“ಓಕೆ ಸೋ ಹ್ಯಾಪಿ ಡ್ರೀಮಿಂಗ್... ನಾ ಇದೀಗ ಫ್ರೆಶ್ ಆಗಿ ಹೊರಟಿರುವೆ...”
ಇವನ ಮಾತು ಪೂರ್ತಿಯಾದದ್ದೇ ತಡ ಸಂಪರ್ಕ ತುಂಡರಿಸಿತ್ತು. ನಿರಾಳವಾಗಿ ಉಸಿರುಹಾಕಿದ ಸುಹಾಸ್ ಟಾವೆಲ್‍ಗೆ ಕೈ ಚಾಚಿದ.
***
ಊಟಿ ಹಿತವಾಗಿತ್ತು. ಕಾಟೇಜ್ ಹೊರಗಡೆ ಬಿಸಿ ಚಹಾ ಕುಡಿಯುತ್ತಿದ್ದ ಅನಿತಾಳ ಮೂಡು ಊಟಿಯಲ್ಲಿಯೂ ಸರಿಹೋಗಿರಲಿಲ್ಲ. ಹಾಗೆ ನೋಡಿದರೆ ಅವಳ ಮೂಡು ಸರಿ ಇಲ್ಲ ಅಂತ ಶುರು ಅನಿಸತೊಡಗಿದ್ದು ಮೂರು ತಿಂಗಳ ಹಿಂದಿನಿಂದಲೇ. ಸುಹಾಸ ಜೊತೆ ಆ ರಾತ್ರಿ ಕಳೆದ ನಂತರವೇ. ಮೊದಲಿನ ಹಾಗೆ ತಾನಿಲ್ಲ ಇದು ಅವಳ ಅರಿವಿಗೂ ಬಂದ ಸಂಗತಿಯೇ. ಗಂಡ ಅನಿಲ್ ಎರಡು ಮೂರು ಸಲ ಈ ಬಗ್ಗೆ ಕೆದಕಿದ್ದ. ಏನು ಉತ್ತರ ನೀಡಿದರೆ ಅವನಿಗೆ ಸಮಾಧಾನವಾದೀತು ಎಂಬ ಕುಹಕ ಅವಳ ಮನದಲ್ಲಿ ಮೂಡಿದ್ದು ಸುಳ್ಳಲ್ಲ. ಅನಿಲ್ ಮಾತ್ರ ಆ ದಿನದ ಅಂದರೆ ಲಕ್ಕಿ ಡಿಪ್‍ನ ಸಂಗಾತಿಯೊಡನೆ ಕಳೆದ ರಾತ್ರಿಯ ನಂತರ ಹೆಚ್ಚು ಉತ್ಸಾಹದಿಂದ ಇದ್ದ. ಇದು ಅನಿತಾ ಗಮನಿಸಿದ ಸಂಗತಿ. ತಮ್ಮ ಮಿಲನದ ಸವಿಗಳಿಗೆಗಳನ್ನು ಅವ ವರ್ಣಿಸಿದ್ದ. ಅನಿತಾಳಿಗೆ ಮುಜುಗರವಾಗಿತ್ತು. ಸುಮತಿ -ಅವನ ಪಾರ್ಟನರ್- ಡಿಮಾಂಡಿಂಗ್ ಆಗಿದ್ದಳು. ಕೊಟ್ಟ ಎರಡರಷ್ಟು ಪಡೆದುಕೊಳ್ಳುತ್ತಿದ್ದಳು. ಇವೇ ಮುಂತಾಗಿ ಅವ ಹೇಳಿದ್ದ. ಅನಿತಾ ವಿಚಿತ್ರ ಸಂಕಟ ಅನುಭವಿಸುತ್ತಿದ್ದಳು. ಅವಳ ಗಂಡ ಇನ್ಯಾರ ಜೊತೆಗೆ ರಮಿಸಿ ಅಲ್ಲಿಯ ರಸನಿಮಿಷಗಳನ್ನು ಯಾವ ಮುಜುಗರ ಇಲ್ಲದೇ ವರ್ಣಿಸುತ್ತಾನೆ ಈ ಕ್ರಿಯೆ ಅವಳಿಗೆ ಸೋಜಿಗ ತಂದಿತ್ತು. ಜೀವನ ಒಮ್ಮೆಲೆ ಇಷ್ಟು ಮುಕ್ತವಾಯಿತೆ... ಕಟ್ಟುಪಾಡು ಬೇಡ ಪ್ರೀತಿ ಪ್ರೇಮದ ಸೆಲೆಯೂ ಬತ್ತಿಹೋಯಿತೆ... ಅನಿಲ್‍ಗೆ ಇದು ಬೇಕಾಗಿತ್ತು. ನನ್ನ ಸಹವಾಸ ಅವನಿಗೆ ಬೇಸರ ತರಿಸಿತ್ತೇ... ನನ್ನ ಆಕರ್ಷಣೆ ಮಂಕಾಯಿತೇ ಹೀಗೆ ಹತ್ತು ಹಲವು ಪ್ರಶ್ನೆಗಳು ಅವಳಿಗೆ ಕಾಡಿದ್ದವು. ಮಾತು ಮಾತಿನಲ್ಲಿಯೇ... ಅನಿಲ್ ಅನಿತಾಳ ಮಾತುಗಳ ಮೇಲೆ ಅವನಿಗೆ ನಂಬಿಕೆ ಇರಲಿಲ್ಲ ಅನಿತಾಳ ಅನುಭವದ ಬಗ್ಗೆಯೂ ಕೇಳಿದ್ದ. ತನ್ನ ಪಾರ್ಟನರ್ ಜೊತೆ ಅದು ನಡೆಯಲೇ ಇಲ್ಲ ಎಂಬ ಅನಿತಾಳ ಮುಚ್ಚುಮರೆಯಿಲ್ಲದೇ ಹೇಳಿಕೊಳ್ಳಲಿ ಇದು ಅವನ ಆಗ್ರಹವಾಗಿತ್ತು. ಸತ್ಯ ಹೇಳಿದರೂ ನಂಬದ ತನ್ನ ಗಂಡನ ಬಗ್ಗೆ ಅನಿತಾ ಮರುಕಗೊಂಡಿದ್ದಳು.
ಮೇಲಿನ ಸಂವಾದ ನಡೆದು ಅದಾಗಲೇ ಮೂರು ತಿಂಗಳು. ಊಟಿಯಲ್ಲಿ ಮಳೆಗಾಲದ ಸೂಚನೆಗಳಿದ್ದವು. ಮುಂದಿನ ತಿಂಗಳಿಂದ ಮಗಳು ಶಾಲೆಗೆ ಹೋಗುತ್ತಾಳೆ. ಬೇಸರ ಕಳೆಯಲು ಊಟಿಯ ಟೂರ್ ಅನಿಲ್ ಪ್ರಸ್ತಾಪಿಸಿದಾಗ ಅನಿತಾ ಹುಂಗುಟ್ಟಿದ್ದಳು. ಬೆಳಿಗ್ಗೆಯಿಂದ ಅಲ್ಲಿ ಇಲ್ಲಿ ಸುತ್ತಾಡಿ ದಣಿದ ಅಪ್ಪ ಮಗಳು ಮಲಗಿದ್ದರು. ಸಂಜೆಯ ನೀರವತೆಯಲ್ಲಿ ಊಟಿತೊಯ್ದಿತ್ತು. ಚಹಾ ಕಪ್ ಕೆಳಗಿರಿಸಿದ ಅನಿತಾ ಎದ್ದಳು. ಊಟಿಯಲ್ಲಿಯೇ ನಾವು ಹನಿಮೂನಿಗೆ ಬಂದಿದ್ದು. ಅವು ಚಳಿಗಾಲ ದಿನಗಳು. ಆ ಉನ್ಮಾದತೆಯ ದಿನಗಳು ಅದೆಲ್ಲಿ ಕರಗಿ ಹೋದವು. ಯಾಕೆ ನಾವು ಎಲ್ಲರ ಹಾಗೆ ಇಲ್ಲ. ಶೂನ್ಯವನ್ನು ಹುಡುಕುತ್ತಿದ್ದೇವೆ ಎಂಬ ಭಯ ಅನಿತಾಗೆ ಬಂದಿದ್ದು ಇದೇ ಮೊದಲಲ್ಲ. ಅನಿಲ್ ಜೊತೆ ಈ ಬಗ್ಗೆ ಒಂದೆರಡು ಸಲ ಚರ್ಚೆ ಮಾಡಿದಾಗಲೂ ಅವನಿಂದ ನೀರಸ ಪ್ರತಿಕ್ರಿಯೆಯೇ ದೊರೆತಿತ್ತು. ಇಲ್ಲದ್ದನ್ನೆಲ್ಲ ವಿಚಾರ ಮಾಡುವ ಬದಲು ಈ ಕ್ಷಣವನ್ನು ಎಂಜಾಯ್ ಮಾಡು ಎಂಬ ಉಪದೇಶವೂ ಸಿಕ್ಕಿತ್ತು. ಮಗಳ ಶಾಲೆಯ ತಯಾರಿ ಅವಳಿಗೆ ಹೊಸದಾಗಿ ಕೊಡಿಸಿದ ಬ್ಯಾಗು, ಬೂಟು ಎಲ್ಲ ಹಾಕಿಕೊಂಡು ಮಗಳು ನಕ್ಕಾಗ ಆ ಖುಷಿಯಲ್ಲಿ ನೋವು ಮರೆಯುವ ಪ್ರಯತ್ನ ಮಾಡಿಯೂ ಆತು. ಆದರೂ ತಳಮಳ ತಡಬಂದಿಗೆ ಬಂದಿರಲಿಲ್ಲ. ಒಂದೇ ಮಂಚದ ಮೇಲೆ ಮಲಗಿದರೂ ಗಂಡನೊಡನೆ ಸ್ವರ ಮಿಡಿದಿರಲಿಲ್ಲ. ಒಂದೆರಡು ಸಲ ಅವನೇ ಮುಂದುವರೆದಾಗ ಇವಳಿಂದ ಪ್ರತಿಸಾದ ಸಿಗದೇ ಸಿಟ್ಟಿನಿಂದ ಸರಿದು ಹೋಗಿದ್ದ. ಅವನ ಆ ವರ್ತನೆ ಅನಿತಾಳಿಗೆ ಖುಷಿ ನೀಡಿತ್ತು. ಅವನ ಕ್ರಿಯೆಗೆ ತನ್ನ ಪ್ರತಿಕ್ರಿಯೆ ಶೂನ್ಯ ಎನ್ನುವ ಭಾವ ಅವಳಿಗೆ ಅದೇನೋ ವಿಚಿತ್ರ ಹರ್ಷ ನೀಡಿತ್ತು. ಅವನ ಆ ಹತಾಶ ಮುಖ ನೋಡಿದಾಗ ಆ ಗೆದ್ದೆ ಎಂದು ಬೀಗಿದ್ದಳು.
ಊಟಿಯ ಸೌಂದರ್ಯವೂ ಮುದಗೊಳಿಸದ ಸ್ಥಿತಿ ನನ್ನದು. ಮಗಳು ನಕ್ಕಾಗಲೂ ಕೊರತೆಯ ಭಾವ ಕಾಡಿದ್ದಿದೆ. ತಾ ಹುಡುಕುತ್ತಿರುವ ಪ್ರಶ್ನೆಗಳಿಗೆ ಉತ್ತರ ದೊರೆತರೆ ಸಮಾಧಾನವಾದೀತು. ಆದರೆ ಅಷ್ಟು ಸುಲಭವಾಗಿ ಉತ್ತರ ಸಿಗುವುದೇ... ಅಥವಾ ಉತ್ತರ ಕೊಡುವ ಯೋಗ್ಯತೆ ಅನಿಲ್‍ಗಿದೆಯೇ... ವಿಚಾರಮಾಡಿದಾಗ ಹೊಳೆದಿದ್ದು ನಕಾರಾತ್ಮಕತೆಯೇ... ಇಲ್ಲ ಅನಿಲ್ ಮತ್ತೆ ಈ ವಿಷಯ ತಮಾಶೆಯಲ್ಲಿಯೇ ತೇಲಿಸಬಹುದು. ಅವನಿಂದ ಉತ್ತರ ನಿರೀಕ್ಷಿಸುವುದು ತಪ್ಪಾಗಬಹುದು. ಸುಹಾಸ್‍ನನ್ನು ಕೇಳಿದರೆ ಹೇಗೆ ಈ ಪ್ರಶ್ನೆಗಳಿಗೆ ಅವನ ಉತ್ತರ ಏನಿರಬಹುದು. ಅವನೂ ಇದೇ ತೊಳಲಾಟದಲ್ಲಿ ಇದ್ದಿರಬಹುದು. ವೈಫ್ ಸ್ವ್ಯಾಪಿಂಗ್‍ಗೆ ಅವನೂ ಒಪ್ಪಿಕೊಂಡವನೇ... ಅವನೇ ನನ್ನ ದ್ವಂದ್ವಗಳಿಗೆ ಪ್ರಶ್ನೆಗಳಿಗೆ ಉತ್ತರವಾಗಬಲ್ಲ. ಹೌದು ಬೆಂಗಳೂರಿಗೆ ಹೋದ ಮೇಲೆ ಅವನೊಡನೆ ಮಾತು ಆಡುವುದೇ ನಿರ್ಧಾರದಿಂದ ಮನ ಹಗುರಾಯಿತು.
***
ಉನ್ಮಾದದ ಘಳಿಗೆಗಳು ಜಾರಿಹೋಗಿ ಹುಮ್ಮಸ್ಸು ಇಳಿದು ಹೋಗಿತ್ತು. ಇದ್ದಕ್ಕಿದ್ದಂತೇ ಸುಹಾಸನಿಗೆ ಸಿಗರೇಟು ಸೇದಬೇಕೆನಿಸಿ ಅಲ್ಲಿಯೇ ಸೇದಿದರೆ ಅವಳು ಮುಜುಗರ ಪಟ್ಟಾಳೆಂದು ಹೊರನಡೆದ. ಒಂದರೆ ಕ್ಷಣದಲ್ಲಿ ಎಲ್ಲ ಮುಗಿದು ಮತ್ತೆ ಶೂನ್ಯ ಕವಿದ ಭಾವ. ಇದು ಹೀಗೆಯೇ... ಅರಸುತ್ತಿದ್ದ ವಸ್ತು ಕೈ ಸೇರಿ ಅದರ ಅನುಭೂತಿ ಅನುಭವಿಸಿ ನಂತರ ಕವಿಯುವ ಅದೇ ಹತಾಶ ಭಾವ. ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಮತ್ತೆ ಅದರ ಹಿಂದೆ ಓಡುವುದೇಕೆ. ಮತ್ತೆ ಈ ವಿಷಾದ ಭಾವ ಅಮರಿಕೊಳ್ಳಲೇಕೆ... ಪರಿಣಾಮ ಪೂರ್ವ ನಿರ್ಧರಿತವಾಗಿರುತ್ತದೆ. ಆದರೆ ಪ್ರಯಾಸಪಡುವುದು ತಪ್ಪಿಸಿಕೊಳ್ಳದ್ದು. ಸುರುಳಿ ಸುರುಳಿಯಾಗಿ ಹೊಗೆ ಬಿಡುವ ಮನಸ್ಸಾಯಿತವಗೆ. ಪ್ರಯತ್ನ ಪಟ್ಟ. ಇಂಜಿನಿಯರಿಂಗ್ ಓದುವಾಗ ಹಾಸ್ಟೆಲ್‍ನಲ್ಲಿ ಗೆಳೆಯರ ಜೊತೆ ಪಂದ್ಯಕಟ್ಟಿ ಸುರುಳಿ ಸುರುಳಿಯಾಗಿ ಹೊಗೆ ಬಿಟ್ಟ ದಿನ ಛೆ ನಾ ಏಕಾದರೂ ಹೀಗಾದೆ. ಎಲ್ಲ ಮರೆತಿತ್ತು. ಅವಳ ಫೋನು ಬರುವವರೆಗೂ ಅವಳಾಗಿಯೇ ನೆನಪು ಮಾಡಿಕೊಡದಿದ್ದರೆ ಅವಳ ಹೆಸರೂ ಸಹ ನೆನಪಿನಲ್ಲಿರಲಿಲ್ಲ. ಮಾತನಾಡಬೇಕಾಗಿದೆ... ಭೇಟಿಯಾಗುವ ಎನ್ನುವ ಅವಳ ಆಗ್ರಹಕ್ಕೆ ಮಣಿದಿದ್ದೆ. ಕಾಫಿ ಡೇನಲ್ಲಿ ಭೇಟಿಯಾಗಿ ಅದರ ಪರ್ಯಾವಸಾನ ಆಗಿದ್ದು ಈ ರಿಸಾರ್ಟನ ರೂಮಿನಲ್ಲಿ. ಮಗಳು, ಗಂಡನಿಗೆ ಸುಳ್ಳು ಹೇಳಿ ಬಂದಿರಬಹುದು ಅವಳು. ದಿಟ್ಟೆ ಅಂದುಕೊಂಡ. ತನಗಾದರೋ ಸುನೀತಾ ಎಲ್ಲಿ ಹೋಗಿದ್ದು ಎಂದು ಕೇಳುವುದೇ ಇಲ್ಲ. ಆದರೆ ಅವಳು ತನ್ನ ಎಲ್ಲ ಕಟ್ಟುಪಾಡು ತೊರೆದು ಹೀಗೆ ನನ್ನ ಜೊತೆ... ಹಿಂದೆಯೂ ಹೀಗೆ ಇತ್ತು. ಆದರೆ ಇದು ಅವಳಾಗಿಯೇ ಬಯಸಿದ್ದು. ಹಿಂದಿನ ಅ ಲಕ್ಕಿ ಡ್ರಿಪ್‍ನಲ್ಲಿ ಭೇಟಿಯ ಹಾಗಲ್ಲ ಇದು. ಕೇಳಬೇಕವಳಿಗೆ ಯಾಕೆ ಹೀಗೆ ಅಂತ. ಹಿಂದೆಯೇ ಅರಿವಿಗೆ ಬಂತು. ತಾನು ಅವಳನ್ನು ಹೀಗೆ ಮಾಡುವುದು ಬೇಡ... ಅದು ಅನಿವಾರ್ಯವಲ್ಲ ಅಂತ ಅನೇಕ ಸಲ ತಿಳಿಸಿಹೇಳಿದ್ದು. ಅದು ಅವಳಿಗೆ ಕಿರಿಕಿರಿ ತರಿಸಿದ್ದು. ಅವಳು ವಾದ ಮಾಡಿದ್ದು ಎಲ್ಲ ನೆನಪಾಯಿತು. ಸುನೀತಾ ಹೀಗೆ ಅವಳ ವಾಂಛೆಗಳ ಮೇಲೆ ಅವಳಿಗೆ ಹತೋಟಿಯಿಲ್ಲ. ಅವಳನ್ನು ಸುಲಭವಾಗಿ ವರ್ಗೀಕರಿಸಬಹುದು. ಇವಳು ಹಾಗಲ್ಲ. ಇವಳು ಅದೇನೋ ಹುಡುಕುತ್ತಿದ್ದಾಳೆ. ನನ್ನ ಸಹವಾಸ ಅವಳಿಗೆ ಉತ್ತರ ಹುಡುಕಲು ನೆರವಾಯಿತೇ ಗೊತ್ತಿಲ್ಲ. ಇಷ್ಟಕ್ಕೂ ಚೌಕಟ್ಟಿನಾಚೆ ಅವಳು ಏನನ್ನು ಹುಡುಕುತ್ತಿದ್ದಳು. ಮುಖ್ಯವಾಗಿ ಯಾಕೆ ಹುಡುಕುತ್ತಿದ್ದಳು ಈ ಪ್ರಶ್ನೆಗೆ ಉತ್ತರ ಹೇಳಬೇಕಾದವಳು ಅವಳೇ...
***
ಇದ್ದಕ್ಕಿದ್ದಂತೇ ಆ ಭಾವ ಬಂದಿತ್ತು. ತಡೆಹಿಡಿಯಲಾರೆ ಅನಿಸಿದಾಗ ಮೊದಲಿಟ್ಟಿದ್ದು ಶಾವರ್ ನೀರ ಜೊತೆ ಸುರಿಸುವ ಕಣ್ಣೀರು ಮೇಳೈಸಿರಬಹುದು... ಪೈಪೋಟಿ ಕೊಟ್ಟರೆ ಕಣ್ಣೀರೇ ಗೆಲ್ಲಬಹುದೇನೋ... ಕತ್ತಲಲ್ಲಿ ತಡಕಾಡುತ್ತಿದ್ದಾಗ ಹುಡುಕುತ್ತಿದ್ದ ವಸ್ತು ದೊರೆತು ಅಪ್ಪಿ ಮುದ್ದಾಡಿ ಮತ್ತೆ ಅದರ ಮೇಲೆ ಬೇಸರ ಬಂದಂಥ ತಾ ಹುಡುಕುತ್ತಿದ್ದ ವಸ್ತು ಇದೆಯೇ ಎಂಬ ಸಂಶಯವೂ ಸೇರಿಕೊಂಡಂತೆ ನಾ ಹೀಗೆ ಮಾಡಿದ್ರೆ... ಇದು ನಂಬಿಕೆಗೆ ನಿಲುಕದ ಸಂಗತಿ. ನನ್ನನ್ನು ಯಾರೂ ಬಲವಂತ ಮಾಡಿರಲಿಲ್ಲ. ಇಲ್ಲಿ ಯಾವ ಲಕ್ಕಿಡ್ರಿಪ್‍ನ ಪ್ರಲೋಭನೆ ಇರಲಿಲ್ಲ. ಅಥವಾ ಅದು ಹೇಗಿರಬಹುದು ಎಂದು ನೋಡಿಬಿಡುವ ಹುಚ್ಚು ಹಂಬಲವೂ ಇಲ್ಲ. ಎಲ್ಲ ಗೊತ್ತಿತ್ತು. ಅದು ಹೀಗೆಯೇ ಇರುತ್ತದೆ ಅಂತ. ಆದರೂ ಸೆಳೆತ ತಡೆಯದಾದೆ. ಅವನೂ-ಸುಹಾಸನೂ-ಹೇಳಿ ನೋಡಿದ್ದ. ಬೇಡ ಇದು ಅಂತ. ನನ್ನ ಹಟಗೆದ್ದಿತ್ತು. ನಾನೇ ಅವನಿಗೆ ಈ ರೆಸಾರ್ಟ ಬಗ್ಗೆ ಹೇಳಿದ್ದು. ಅಲ್ಪಸ್ವಲ್ಪ ಮುಜುಗರ ಇತ್ತು. ಮೊದಮೊದಲು ಆದರೆ ಕೊನೆಗೆ ಉಕ್ಕಿದ್ದು ಸುನಾಮಿಯ ಅಲೆಗಳು... ಈಗ ಎಲ್ಲ ಶಾಂತ ಮತ್ತೆ ಅದೇ ಸ್ಥಿತಿ. ಇದರ ಬಗ್ಗೆ ಅವ ಮೊದಲೇ ಹೇಳಿದ್ದ ನಾ ಹುಡುಕುತ್ತಿರುವುದು ಇದಲ್ಲವಾಗಿರಬಹುದು ಎಂದು. ಆದರೂ ಹುಚ್ಚಿತ್ತು. ಒಂದು ಕೈ ನೋಡೇಬಿಡುವ ಹಂಬಲ. ಯಾಕೋ ಗೊತ್ತಿಲ್ಲ. ಯುದ್ಧದಲ್ಲಿ ಎಲ್ಲ ಗೆದ್ದರೂ ಶೂನ್ಯ ಕವಿಯುವ ಸ್ಥಿತಿ ಯಾಕೆ ಬರುತ್ತದೋ... ಅನಿಲನಿಗೆ, ಮಗಳಿಗೆ ನೆವ ಹೇಳಿ ಬಂದಿದ್ದಾಯಿತು. ಎಲ್ಲ ಮುಗಿಸಿ ಗೆದ್ದ ಬೀಗುವಿಕೆಯಲ್ಲಿ ಒಮ್ಮೆ ನಗಬೇಕು ಎಂದುಕೊಂಡಾಗಲೇ ಬಂದಿತ್ತು ಬಿಕ್ಕುವಿಕೆ ಜೊತೆಗೂಡಿದ ಅಳು. ಈ ಅಳು ನನ್ನ ಸ್ಥಿತಿಗೆ ದ್ಯೋತಕವೇ ನಾ ಏನೇ ಮಾಡಿದರೂ ಇದರಿಂದ ಈ ಹಂಬಲಗಳಿಂದ ಬಿಡುಗಡೆಯೇ ಇಲ್ಲವೇ... ಏನೂ ಗೊತ್ತಿರದ ಪರಿಸ್ಥಿತಿ. ಉತ್ತರ ಮೊದಲೇ ಗೊತ್ತಿದ್ದೂ ಪ್ರಶ್ನೆ ಎಸೆಯುವ ಹುಂಬತನ ಇದೆ ಏನು...
ನೀರು ಸುರಿಯುತ್ತಿತ್ತು. ಅನಿತಾ ನಿಂತೇ ಇದ್ದಳು ಕ್ಷಣ ಅನಂತವಾಗಿತ್ತು. ಚೌಕಟ್ಟಿನಾಚೆಗಿನ ಚಿತ್ರ ಗಾಳಿಯಲ್ಲಿ ತೇಲುತ್ತಲೇ ಇತ್ತು.
-------------------------------------------------------------------

4 comments:

  1. ನಾಲ್ಜು ವಿಭಿನ್ನ ವ್ಯಕ್ತಿತ್ವಗಳ ಅನಾವರಣ ಇಲ್ಲಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಅಂತ ಶಭಾಷ್ ಕೊಡಲೂ ಮನಸೊಪ್ಪದ ಪದ್ಧತಿ ಇದು!

    ReplyDelete
  2. ಮುಕ್ತ.. ಮನದಲ್ಲೇ ಕಲ್ಪನೆಯಾಗಿ ಹುಟ್ಟಿ ಕೊಳೆತು ನಾರುವ ಕನಸುಗಳ ಕಥೆ.. ಮನಸು ಬೇಕಿದ್ದನ್ನು ಬಯಸಲು ಹೋರಾಟ, ಆ ಮನಸಿಗೆ ನಾನೊಬ್ಬನೇ ಒಡೆಯನೆಂಬ ಭ್ರಮೆಯಿಂದ ಬಂಧನ, ಎಲ್ಲವೂ ಸರಿಯೆಂದು ತಿಳಿದೂ ಮೂರ್ಖನಂತೆ ಅವುಗಳಲ್ಲಿ ತಪ್ಪಿನ ಹುಡುಕಾಟ.. ಮುಳುಗೇಳುತ್ತ ಕೊನೆಗೂ ಸಾಯುವ ಚೌಕಟ್ಟಿನ ಆಚೆಗಿನ ಭಾವ...

    ReplyDelete
  3. ಬೇವಿನಮರದಲ್ಲಿ ಮಾವಿನ ಹಣ್ಣು ಹುಟ್ಟಬಹುದೆ? ಲಜ್ಜೆಗೇಡಿತನವನ್ನೇ ಆಧುನಿಕತೆ ಎಂದು ತಿಳಿದವರ ಅವಸ್ಥೆಯನ್ನು ಸಮರ್ಪಕವಾಗಿ ಚಿತ್ರಿಸಿದ್ದೀರಿ. ಹೊಸ ತರಹದ ಕತೆಗಳನ್ನು ಕೊಡುತ್ತಿರುವ ನಿಮಗೆ ಅಭಿನಂದನೆಗಳು.

    ReplyDelete
  4. ಹೊಸಥರದ ಕಥೆ ಇಷ್ಟವಾಯಿತು ಸರ್...:) :)..

    ReplyDelete