Thursday, January 9, 2014

ಮಾತು ಮರೆತವರು...

ಆಫೀಸು ಮುಗಿಸಿ ಸುಧೀರ ಮನೆ ಸೇರಿದಾಗ ಎದಿರಾದದ್ದು ಮಡದಿಯ ದುಗುಡದ ಮುಖ. ಮಗಳು ನೀತಾ ತನ್ನ ಹೋಮ್‍ವರ್ಕ್‍ನಲ್ಲಿ ಮುಳುಗಿದ್ದಳು. ಕಾಫಿ ಕೊಡುವಾಗಲೂ ಹೆಂಡತಿ ಅನ್ಯಮನಸ್ಕಳಾಗಿದ್ದನ್ನು ಗಮನಿಸಿದ ಸುಧೀರ. ಅವನ ಹೆಂಡತಿ ನೀರಜ ಸನ್ನೆ ಮಾಡಿ ಇವನನ್ನು ಹೊರಕರೆದಾಗ ಮೌನವಾಗಿ ಹಿಂಬಾಲಿಸಿದ. ನೀರಜಳ ಆತಂಕಕ್ಕೆ ಕಾರಣವಾಗಿದ್ದು ಅಂದು ಅವಳು ಕೆಲಸ ಮಾಡುತ್ತಿದ್ದ ಬ್ಯಾಂಕಿಗೆ ಬಂದ ವಾರಿಜ ಮೇಡಂ ಹಾಗೂ ಅವರ ಜೊತೆ ಬಂದಿದ ಇಬ್ಬರು ಗಂಡಸರು ಹಾಗೂ ಆ ಗಂಡಸರು ಆಡಿದ ಧಮಕಿಪೂರಿತ ಮಾತುಗಳಾಗಿದ್ದವು. ಪ್ರಕರಣ ಇಲ್ಲಿಯೇ ಮೊಟಕುಗೊಳಿಸಿರಿ ಇದು ಅವರ ತಾಕೀತಾಗಿತ್ತು. ನೀರಜ ಅದನ್ನು ಕೇಳಿದಾಗಿನಿಂದ ಉದ್ವಿಗ್ನಗೊಂಡಿದ್ದಳು. ಮಾತು ಕೇಳಿಸಿಕೊಂಡ ಸುಧೀರ ಸಹ ಗಲಿಬಲಿಗೊಂಡಿದ್ದ ಇದು ಎಲ್ಲಿಯೋ ಶುರುವಾಗಿ ಕೊನೆಗೆ ತನ್ನ ಒಬ್ಬಳೇ ಮಗಳ ಸುತ್ತ ಸುತ್ತಿಕೊಂಡರೆ ಎಂಬ ಆತಂಕ ಇತ್ತು. ಆದರೂ ಹೆಂಡತಿಗೆ ಸಮಾಧಾನ ಹೇಳಿ, ಅಂದು ಅಪ್ಪನೊಡನೆ ಮಾತನಾಡುವುದಾಗಿ ಹೇಳಿದ.
***
ಆದರೆ ಸುಧೀರ ಅಂದುಕೊಂಡಷ್ಟು ಆ ಮಾತು ಸುಲಭವಾಗಿರಲಿಲ್ಲ. ಅಪ್ಪನೊಡನೆ ವಾದಿಸುವಾಗ ಈಗೆಲ್ಲ ಅವನು ಸೋತಿದ್ದಾನೆ. ಅಪ್ಪ ಎತ್ತುವ ಅನೇಕ ಪ್ರಶ್ನೆಗಳಿಗೆ ತನ್ನಲ್ಲಿ ಉತ್ತರಗಳೇ ಇಲ್ಲ ಇದು ಅವನಿಗೆ ಗೊತ್ತಿತ್ತು. ಹಾಗೆಂದು ಆ ಪ್ರಶ್ನೆಗಳು ಸುಧೀರನಲ್ಲಿಯೂ ಇದ್ದವು... ಎಲ್ಲ ನೋಡಿ ಸಿಡಿದೇಳಬೇಕು ಎಂಬ ಹಂಬಲ ಅವನಲ್ಲೂ ಇತ್ತು. ಆದರೆ ಅವನನ್ನು ಏನೂ ತಡೆಹಿಡಿದಿತ್ತು. ಆ ಏನೋ ಹಲವಾರು ಬಾರಿ ಅವನ ನಿರ್ಲಿಪ್ತತೆಯೇ ಆಗಿತ್ತು. ಈ ಬಗ್ಗೆ ಸಹ ಅವನಿಗೆ ಗೊತ್ತಿತ್ತು.

ಸುಧೀರನ ತಂದೆ ವಾಮನ ದೇಸಾಯಿ. ಸರಕಾರಿ ನೌಕರಿಯಿಂದ ನಿವೃತ್ತರಾದವರು. ಅವರ ಹೆಂಡತಿ ತೀರಿಕೊಂಡು ಎರಡು ವರ್ಷವಾಗಿದೆ. ಹುಬ್ಬಳ್ಳಿಯ ತಮ್ಮ ಮನೆಯ ಒಂದು ಕೋಣೆ ಹೊರತುಪಡಿಸಿ ಉಳಿದೆಲ್ಲ ಬಾಡಿಗೆಕೊಟ್ಟು ಮಗನ ಜೊತೆ ಬೆಂಗಳೂರಿಗೆ ಬಂದಿದ್ದಾರೆ. ಸುಧೀರನಿಗೆ ಒಬ್ಬ ತಂಗಿಯೂ ಇದ್ದಾಳೆ. ಅವಳು ಅಮೆರಿಕಾದಲ್ಲಿ ತನ್ನ ಗಂಡನ ಜೊತೆ. ವಾಮನ ದೇಸಾಯರು ತಮ್ಮ ಸರ್ವೀಸಿನುದ್ದಕ್ಕೂ ಪ್ರಾಮಾಣಿಕ ಅನಿಸಿಕೊಂಡವರು. ಅವರ ಸಹೋದ್ಯೋಗಿಗಳೆಲ್ಲ ದುಡ್ಡು ಹೊಡೆದು ಎರಡು ಮೂರು ಬೇನಾಮಿ ಆಸ್ತಿ ಸಂಪಾದಿಸಿದ್ದರೂ, ವಾಮನ ದೇಸಾಯರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಮಕ್ಕಳಿಗೆ ನಾನೇನು ಆಸ್ತಿ ಮಾಡಿಡೋಲ್ಲ ಬದಲು ಅವರನ್ನೇ ಆಸ್ತಿಯಾಗಿ ಮಾಡುವೆ ಇದು ಅವರು ಆಗಾಗ ಹೇಳುತ್ತಿದ್ದ ಮಾತು. ತಾವು ನುಡಿದಂತೆ ನಡೆದಿದ್ದರು ಕೂಡ. ಪರಿಣಾಮವಾಗಿ ಸುಧೀರ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಾನೆ. ಮಗಳು ಸುನೀತಾ ಅಮೆರಿಕದಲ್ಲಿ ಲೆಕ್ಚರರ್.

ಆದರೆ ವಾಮನ ದೇಸಾಯರ ಸ್ವಭಾವದಲ್ಲಾದ ಪಲ್ಲಟ ಸುಧೀರನಿಗೆ ಚಿಂತೆ ತಂದಿತ್ತು. ಅಪ್ಪ ಹಾಯಾಗಿದ್ದಾರೆ... ಮೊಮ್ಮಗಳ ಜೊತೆ ಆಟ ಆಡುತ್ತ. ಅವಳ ಹೋಮ್‍ವರ್ಕನಲ್ಲಿ ನೆರವಾಗುತ್ತ ಹಾಗೆಯೇ ಸಾಯಂಕಾಲದ ಹೊತ್ತು ಹತ್ತಿರದ ಪಾರ್ಕಿನಲ್ಲಿ ವಾಮನ ದೇಸಾಯರು ಹೋಗಿ ಕೂಡುತ್ತಿದ್ದುದು, ಅಲ್ಲಿ ಪರಿಚಯವದ ಅನೇಕ ಅವರ ಮಿತ್ರರು ಮನೆಗೆ ಬಂದಿದ್ದರು. ಹಾಗೂ ಸುದೀರನಿಗೂ ಅವರ ಪರಿಚಯ ಇತ್ತು. ತನ್ನ ಮಗಳು ತಾತನ ಜೊತೆ ಹೊಂದಿಕೊಂಡಿದ್ದು, ಸುಧೀರ-ನೀರಜರಿಗೆ ಸಂತಸವಾಗಿತ್ತು. ಮೇಲಾಗಿ ಬೇಕಾದ ತರಕಾರಿ, ದಿನಸಿ ಹೀಗೆ ಬಹಳಷ್ಟು ಜವಾಬ್ದಾರಿ ವಾಮನ ದೇಸಾಯರು ಹೊತ್ತುಕೊಂಡಿದ್ದರು. ಸುಧೀರನೂ ಮನೆಯಲ್ಲಿರುವ ಕಂಪ್ಯೂಟರ್, ಇಂಟರ್‍ನೆಟ್ ಬಳಕೆ ಹೀಗೆ ಅಪ್ಪನಿಗೆ ಹೊಸದರ ಬಗ್ಗೆ ತಿಳಿಸಿಕೊಟ್ಟದ್ದ. ಎಲ್ಲ ಸುರಳಿತ ಇದೆ ಅಂದುಕೊಂಡಾಗಲೇ... ಸುಧೀರ ನೀರಜರಿಗೆ ಗಾಂಧಿಬಜಾರಿನಲ್ಲಿ ಭೇಟಿಯಾದ ಸುಬ್ಬರಾವ್ ಹೇಳಿದ ಮಾತು ಚಿಂತೆಗೆ ಈಡು ಮಾಡಿತ್ತು. ಸುಬ್ಬರಾವ್ ಹಲವು ಸಲ ಇವರ ಮನೆಗೆ ಬಂದು ಹೋಗಿದ್ದರು. ಸುಧೀರನ ಪರಿಚಯ ಅವರಿಗೆ ಇತ್ತು.
“ನೋಡಿ ಸುಧೀರ್ ನಿಮ್ಮ ತಂದೆಗೆ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಪ್ರತಿಭಟನೆ, ಹೋರಾಟ ಎಲ್ಲ ಯಾಕೆ ಬೇಕು... ನಾವು ಹೇಳಿ ನೋಡಿದ್ವಿ ಅವರು ಕೇಳೊಲ್ಲ... ನೀವು ಮಗ ಹೇಳಿ... ನಾವು ಬದಲಾಯಿಸುತ್ತೇವೆ... ಎಂದು ಹೊರಟರೆ ಜಗತ್ತು ಬದಲಾಗಿ ಬಿಡುತ್ತದೆಯೇ...?”

ಸುಬ್ಬರಾವ್‍ರ ಮಾತು ಒಂದು ಸುಳಿವು ನೀಡಿತ್ತು. ತನ್ನ ಅಪ್ಪನೊಡನೆ ಆ ಮಾತು ಆಡಿದಾಗ ವಾಮನದೇಸಾಯರು ಒಪ್ಪಿಕೊಂಡರು. ಅವರು ಪ್ರಗತಿಪರ ಸಂಘಟನೆಯ ಸದಸ್ಯರು ಅಂತ ಹೇಳಿಕೊಂಡ್ರು. ಸರಕಾರ ಹಾಗೂ ಇತರೇ ಸಂಸ್ಥೆಗಳಿಂದ ಅನ್ಯಾಯ ಆಗಿದೆ ಅಂತ ಕಂಡುಬಂದಲ್ಲಿ ಅದರ ವಿರುದ್ಧ ಪತ್ರಿಕೆಗಳಿಗೆ ಲೇಖನ ಬರೆಯುವುದು, ಪ್ರತಿಭಟಸೋದು ಇವೇ ಮುಂತಾದ ಆ ಸಂಘಟನೆಯ ಕಾರ್ಯಸೂಚಿಗಳು. ಮಾತಾಡುತ್ತ ವಾಮನ ದೇಸಾಯರು ಆ ಸಂಘಟನೆಯೊಂದಿಗಿನ ಸಖ್ಯ ತಮಗೆ ಹೊಸ ದಿಕ್ಕು ತೋರಿಸಿದೆ ಅಂತ ಹೇಳಿದರು. ಸುಧೀರನಿಗೆ ತಂದೆಯ ಮಾತು ಅಷ್ಟಾಗಿ ರುಚಿಸಲಿಲ್ಲ. ಯಾಕೆ ಈ ಎಲ್ಲ ಉಸಾಬರಿ... ನಿಮ್ಮ ಪಾಡಿಗೆ ನೀವಿರಿ ಎಂಬ ಅವನ ಮಾತಿಗೆ ನೀರಜಳೂದನಿಗೂಡಿಸಿದಳು. ಮೇಲಾಗಿ ಸುಧೀರ ತನ್ನ ತಂದೆಯ ಜೊತೆ ಅವರ ನೌಕರಿ ಸಮಯದಲ್ಲಿ ಅನ್ಯಾಯಗಳನ್ನು ಅವರು ಮೌನವಾಗಿ ಸಹಿಸಿದುದರ ಬಗ್ಗೆ ಕೆದಕಿದ. ಎಲ್ಲ ಶಾಂತಬಾಗಿ ಕೇಳಿಸಿಕೊಂಡ ವಾಮನ ದೇಸಾಯರು.

“ಸುಧಿ ನಾ ಸುಮ್ಮನಿದ್ದೆ ನನ್ನ ಸುತ್ತುಮುತ್ತ ಇರೋರೆಲ್ಲ ದುಡ್ಡು ಹೂಡೀತಿದ್ರು. ನಾ ಪ್ರಾಮಾಣಿಕ ಇದ್ದೆ. ಈ ವಿಷಯ ನನ್ನ ಮೇಲಾಧಿಕಾರಿಗಳಿಗೂ ಅಸಮಾಧಾನ ತಂದಿತ್ತು. ನನ್ನ ಮಟ್ಟ ಹಾಕಬೇಕು ಇದು ಅವರ ಹುನ್ನಾರ. ಅವರು ಕೊಡುವ ಎಲ್ಲ ಕಿರುಕುಳ ಸಹಿಸಿಕೊಂಡೆ. ಸಂಸಾರದ ಜವಾಬ್ದಾರಿ ಇತ್ತು. ನಿಮ್ಮನ್ನೆಲ್ಲ ಒಂದು ದಾರೀಗೆ ಹಚ್ಚಬೇಕಾಗಿತ್ತು. ಈಗ ನಿರಾಳ ಆಗೇನಿ... ಈಗ ಅವಾಗ ಮಾಡದ್ದನ್ನ ಮಾಡ ಹೊರಟೀನಿ... ಇದರಾಗ ನಿನಗೇನು ತಪ್ಪು ಕಾಣಸ್ತದ ತಿಳೀಲಿಲ್ಲ...”

ಸುಲಭವಾಗಿ ಸೋಲಬಾರದು ಎಂದು ಸುಧೀರ ಹಾಗೂ ನೀರಜ ಮನಸ್ಸು ಮಾಡಿದರೂ ವಾಮನ ದೇಸಾಯರ ತರ್ಕಬದ್ಧ ವಾದಗಳಿಗೆ ಇಬ್ಬರೂ ಸುಮ್ಮನಾಗಲೇಬೇಕಾಯಿತು. ಹಾಗೆಯೇ ಸುಧೀರ ತಂಗಿ ಸುನೀತಾಳಿಗೆ ಒಂದು ಮೇಲ್ ಹಾಕಿ ಅಪ್ಪನ ಈ ವರ್ತನೆ ಹಾಗೂ ಇದು ಹಾಗೆಯೇ ಮುಂದುವರೆದರೆ ಅಪ್ಪ ಸಿಕ್ಕಿಹಾಕಿಕೊಳ್ಳುವ ಸಂಭಾವ್ಯ ಅಪಾಯಗಳ ಬಗ್ಗೆಯೂ ಹೇಳಿದ. ಸುನೀತಾ ಅಪ್ಪನಿಗೊಂದು ದೀರ್ಘವಾದ ಮೇಲ್ ಹಾಕಿದ್ದಳು. ಅದರ ಪ್ರಸ್ತಾಪ ಸುಧೀರನೊಡನೆ ಮಾಡಿದ ವಾಮನ ದೇಸಾಯರು... ಅನ್ಯಾಯದ ವಿರುದ್ಧ ತಮ್ಮ ಹೋರಾಟ ಹೀಗೆಯೇ ಸಾಗಲಿದೆ ಎಂದು ಘೋಷಿಸಿದರು.

ಸುಧೀರನೂ ವಿಚಾರ ಮಾಡಿದ. ಅಪ್ಪ ಹೀಗೆ ಪ್ರತಿಭಟಿಸುವುದು ಅವನ ಒಳದನಿಗೆ ಅಪ್ಯಾಯಮಾನವೇ. ಅದೆಷ್ಟು ಲಂಚಗುಳಿತನ, ಗುಂಡಾಯಿಸಂ ನಮ್ಮ ಸುತ್ತ ಸುತ್ತಿದೆ... ಒಂಥರಾ ನಿರ್ಲಿಪ್ತರಾಗಿದ್ದೇವೆ. ನಮ್ಮನ್ನು ನಾವು ಒಂದು ಕಂಫರ್ಟವಲಯದಲ್ಲಿ ಸಿಗಿಸಿಕೊಂಡಿದ್ದೇವೆ. ಅಪ್ಪ ಹೀಗೆಲ್ಲ ಮಾಡುವುದರ ಹಿಂದೆ ಯಾವ ಸ್ವಾರ್ಥವೂ ಇಲ್ಲ. ಆದರೂ ಅವರ ವರ್ತನೆ ನನ್ನಲ್ಲೇಕೆ ಈ ಬಗೆ ತಳಮಳ ತಂದಿದೆ. ಬಹುಷಃ ಅಪ್ಪನ ಮೇಲೆ ನನಗೆ ಕಾಂಪ್ಲೆಕ್ಸ ಬೆಳೆಯುತ್ತಿದೆಯೇ...

***
ಸುಧೀರನ ಹೆದರಿಕೆ ಇನ್ನೂ ಬಲವಾಗುವ ದಿನ ಸ್ವಲ್ಪದರಲ್ಲಿಯೇ ಕೂಡಿಬಂತು. ಅದು ಕಾರ್ಪೊರೇಷನ್ ಚುನಾವಣೆ. ಇವರ ಕ್ಷೇತ್ರದ ಎಂಎಲ್‍ಎ ಅಂದು ತನ್ನ ಪಕ್ಷದ ಅಭ್ಯರ್ಥಿ ಪರ ವೋಟು ಕೇಳಲು ಇವರ ಬಡಾವಣೆಗೂ ಬರುವವನಿದ್ದ. ಭಾನುವಾರವಾದ್ದರಿಂದ ಸುಧೀರ ನೀರಜರೂ ಮನೆಯಲ್ಲಿದ್ದು. ಎಂಎಲ್‍ಎ ಸವಾರಿ ಇವರ ಮನೆ ಬಾಗಿಲಿಗೆ ಬಂತು. ವಾಮನ ದೇಸಾಯರು ಅದನ್ನೇ ಎದುರು ನೋಡುತ್ತಿದ್ದರು ಎಂಬಂತೆ... ಎಂಎಲ್‍ಎಗೆ ಒಂದು ಪ್ರಶ್ನೆ ಕೇಳಿದರು. ಸುತ್ತಮುತ್ತಲಿನ ಜನ ಗಮನಿಸುತ್ತಿದ್ದರು... ಆದರೆ ದೇಸಾಯರು ಹೆದರಿರಲಿಲ್ಲ. ಅವರ ಪ್ರಶ್ನೆ ಆಕ್ಷೇಪವಾಗಿತ್ತು. ಆ ಅಭ್ಯರ್ಥಿಯ ಶಿಷ್ಯನೊಬ್ಬ ಹತ್ತಿರದ ಹೈಸ್ಕೂಲಿನ ಹತ್ತಿರ ನಿಂತು ಬರುವ ಹುಡುಗಿಯರನ್ನು ಚುಡಾಯಿಸುತ್ತಿರುತ್ತಾನೆ. ಇದ ಸರಿಯೇ... ಇಂಥ ಅಭ್ಯರ್ಥಿಗೆ ನಾವು ಬೆಂಬಲಿಸಬೇಕೆ... ಇದು ರಾಯರ ಪ್ರಶ್ನೆ. ನೇರವಾದ ಪ್ರಶ್ನೆಯಿಂದ ಅಭ್ಯರ್ಥಿ ಹಾಗೂ ಎಂಎಲ್‍ಎ ತಡಬಡಾಯಿಸಿದರು. ಅಂಥ ವ್ಯಕ್ತಿ ನಮಗೇ ಗೊತ್ತೆ ಇಲ್ಲ ಎಂದು ಜಾರಿಕೊಳ್ಳಲು ಅನುವಾದರು. ದೇಸಾಯರು ಸುಮ್ಮನಾಗದೇ ಅಲ್ಲಿದ್ದ ಒಬ್ಬ ವ್ಯಕ್ತಿಯನ್ನು ತೋರಿಸಿ ಅದೇ ವ್ಯಕ್ತಿ ಎಂದು ಗುರುತಿಸಿದರು.

ಮುಂದಾಗಿದ್ದು ನಾಟಕೀಯ ಬೆಳವಣಿಗೆಗಳು. ಸುಧೀರನ ಅಕ್ಕಪಕ್ಕದ ಮನೆ ಜನ ದೇಸಾಯರ ಸಾಹಸ ಮೆಚ್ಚಿ ಹೂಗಳಿದರು. ಎದುರು ಮನೆ ಹುಡುಗಿಯಂತೂ ದೇಸಾಯರ ಕೈಕುಲುಕಿ ಸಂತಸ ವ್ಯಕ್ತಪಡಿಸಿದಳು. ಅಪ್ಪನನ್ನು ಸೂಕ್ಷ್ಮವಾಗಿ ಗಮನಿಸಿದ ಸುಧೀರ ಹೊಗಳಿಕೆಯಿಂದ ಉಬ್ಬಿಹೋಗಿದ್ದಾರೆಯೇ ಅಂತ. ದೇಸಾಯರು ಎಂದಿನಂತೆ ನಿರ್ಲಿಪ್ತರಾಗಿದ್ದರು. ಸುದ್ದಿ ತಿಳಿದ ಟಿವಿ ಚಾನೆಲ್‍ನವರು ಬಂದಾಗ ರಾಯ ರು ಎಂದಿನಂತೆ ಸಹಜವಾಗಿಯೇ ಇದ್ದರು. ಸುಧೀರನಿಗೆ ಅಪ್ಪ ತನಗೆ ದೊರೆತ ಅವಕಾಶ, ಅದಕ್ಕೆ ಸಿಕ್ಕ ಸ್ಕೋಪನ್ನು ಆನಂದಿಸುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ತನ್ನ ಅಪ್ಪ ಎತ್ತರ ಎತ್ತರ ಬೆಳೆದಂತೆ ಅವನಿಗೆ ಅನಿಸತೊಡಗಿತು. ಹಾಗೆಯೇ ಅವರ ಈ ವರ್ತನೆ ತನ್ನ ಹಾಗೂ ನೀರಜಳ ಮಧ್ಯೆ ಹೊಸ ಟೆನ್‍ಶನ್ ಕೊಡುತ್ತದೆ ಎಂಬುದು ಕೂಡು ಸುಧೀರನಿಗೆ ಅರಿವಿತ್ತು.
***
ಸುಧೀರನ ಮಗಳು ನೀತಾ ಆಗಿನ್ನೂ ನಾಲ್ಕನೇಯತ್ತೆಯಲ್ಲಿ ಓದುತ್ತಿದ್ದಳು. ಮನೆಗೆ ಹತ್ತಿರ ಹಾಗೂ ಹಳೆಯ ಶಾಲೆ. ಡೊನೇಶನ್ನು ಕಮ್ಮಿ ಇತ್ತು. ನೀತಾಳಿಗೆ ಅಜ್ಜ ಬಂದು ತಮ್ಮೊಡನಿದ್ದುದು ಬಹಳೇ ಖುಷಿಯಾಗಿತ್ತು. ಅಜ್ಜ ಅವಳಿಗೆ ಶಾಲೆಗೆ ಕಳಿಸಿ ಕರೆತರುವ ಜವಾಬ್ದಾರಿ ಹೊತ್ತಿದ್ದರು. ಅಪ್ಪ, ಅಮ್ಮನ ಜೊತೆ ಮಾತಾಡುವುದಕ್ಕಿಂತ ಅಜ್ಜನೊಡನೆ ಹಾಯಾಗಿದ್ದಳು. ಅವಳ ಸ್ಕೂಲು, ಅವಳ ಮಿಸ್ಸುಗಳು ಅವಳ ಸ್ಕೂಲಲ್ಲಿ ಅಂದು ನಡೆದ ಸಂಗತಿಗಳು ಹೀಗೆ ಎಲ್ಲ ನೀತಾ ಅಜ್ಜನಿಗೆ ವರದಿ ಒಪ್ಪಿಸುತ್ತಿದ್ದಳು. ನೀತಾ ಸ್ಕೂಲಿಂದ ಬಂದಾಗ ಅಜ್ಜನೇ ಅವಳಿಗೆ ಊಟ ಬಡಿಸಿ ತಾವು ಅವಳ ಜೊತೆ ಊಟ ಮಾಡುತ್ತಿದ್ದರು. ರಾತ್ರಿ ಅವಳು ಮಲಗುವ ಮೊದಲು ಕತೆ ತಪ್ಪದೇ ಕೇಳುತ್ತಿದ್ದಳು. ಅಜ್ಜನಿಂದ ನೀತಾಳಿಗೆ ಅಜ್ಜ ಹೊಸ ಗೆಳೆಯನಂತೆ ಅನಿಸಿದ್ದ.

ಅವರ ಈ ಅಪ್ಯಾಯತೆಯೇ ವಾರಿಜ ಮೇಡಂ ನಡಾವಳಿಯ ಬಗ್ಗೆ ವಾಮನ ದೇಸಾಯರಿಗೆ ಪರಿಚಯ ಮಾಡಿದ್ದು. ಶಾಲೆಯಲ್ಲಿ ಬಹಳ ಶಿಸ್ತಿನ ಮೇಡಂ ಅಂತ ವಾರಿಜ ಹೆಸರು ತಗೊಂಡಿದ್ರು. ಶಾಲೆಯ ಹುಡುಗರು ಅವರಿಗೆ ಹೆದರುತ್ತಿದ್ದರು. ವಾರಿಜ ಮೇಡಂ ಈ ವರ್ಷ ನೀತಾಳ ಕ್ಲಾಸ್ ಟೀಚರ್ ಬೇರೆ. ಅವರ ವಿಷಯದ ಹೋಮ್‍ವರ್ಕ ಆಗಲಿ, ಟೆಸ್ಟ್ ತಯಾರಿಯಾಗಲಿ, ನೀತಾ ತಪ್ಪಿಲ್ಲದೇ ಪಾಲಿಸುತ್ತಿದ್ದಳು. ವಾಮನ ದೇಸಾಯರು, ಮೊಮ್ಮಗಳು ವಾರಿಜ ಮೇಡಂ ಬಗ್ಗೆ ಮಾತಾಡುವಾಗ ಗಂಭೀರಳಾಗುತ್ತಿದ್ದುದನ್ನು ಗಮನಿಸಿತಿದ್ದಳು. ಒಂದು ವಾರದ ಹಿಂದೆ ಅದೇಕೋ ನೀತಾ ಹೆದರಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಅಂದು ಶಾಲೆ ಬಿಟ್ಟು ಬಂದಾಗಿನಿಂದಲೂ ಅನ್ಯಮನಸ್ಕಳಾಗಿದ್ದಳು ನೀತಾ. ಕೆದಕಿ ಕೇಳಿದಾಗ ಬಾಯಿ ಬಿಟ್ಟಿದ್ದಳು. ಇವಳ ಕ್ಲಾಸ್‍ಮೆಟ್ ಸುಂದರ ಅದೇನೋ ಗಲಾಟೆ ಮಾಡಿದ ಅಂತ. ವಾರಿಜ ಮೇಡಂ ಅವನನ್ನು ಬಲವಾಗಿ ತಳ್ಳಿದಾರೆ... ಗೋಡೆಗೆ ಆತನ ತಲೆ ಬಡಿದು ಅವ ಎಚ್ಚರತಪ್ಪಿದ್ದಾನೆ. ನೀರು ಚಿಮುಕಿಸಿ, ಆಟೋ ಮಾಡಿ ಸಾಲೆಯ ಸೆಕ್ಯೂರಿಟಿ ಜೊತೆ ಅವನ್ನು ಮನೆಗೆ ಕಳಿಸಿಕೊಟ್ಟಿದ್ದಾರೆ. ನೀತಾ ಇದನ್ನೆಲ್ಲ ನೋಡಿ ಹೆದರಿದ್ದಾಳೆ. ಎಲ್ಲ ಕೇಳಿದ ವಾಮನ ದೇಸಾಯರಿಗೂ ಕೆಡುಕೆನ್ನಿಸಿತು. ಅದೇಕೆ ಇದ್ದಕ್ಕಿದ್ದಂತೆ ವಾರಿಜ ಮೇಡಂಗೆ ಈ ಪರಿಕೋಪ. ಹಾಗೆಯೇ ವಿಚಾರಿಸಿದಾಗ ಅವರು ಶಿಕ್ಷಿಸುವ ಅನೇಕ ವಿಧಗಳನ್ನು ನೀತಾ ಹೇಳಿದಳು. ಕೇಳಿದವರು ಕಸಿವಿಸಿಗೊಂಡರು. ಸುಂದರ ಯಾಕೋ ಎರಡು ಮೂರುದಿನ ಶಾಲೆಗೇ ಬಂದಿಲ್ಲ ಎಂದು ನೀತಾ ಹೇಳಿದಾಗ ಮಾತ್ರ ದೇಸಾಯರು ನಿರ್ಧಾರ ತಳೆದರು.

ಹೆಡ್‍ಮಿಸ್ ಜೊತೆಗೆ ನೇರವಾಗಿ ವಿಷಯ ಪ್ರಸ್ತಾಪಿಸಿದರು ಅವರು. ಆದರೆ ಸುಲಭದಲ್ಲಿ ಹೆಡ್‍ಮಿಸ್ ಒಪ್ಪಿಕೊಳ್ಳಲಿಲ್ಲ. ಬದಲು ಸುಂದರನಿಗೆ ಜ್ವರ ಬಂದಿದ್ದಕ್ಕೆ ಅವ ಶಾಲೆಗೆ ಬಂದಿಲ್ಲ ಎಂದು ತಿಳಿಸಿದರು. ಸುಂದರನ ಮನೆ ವಿಳಾಸ ಸಂಪಾದಿಸಿದ ದೇಸಾಯರು ಅಂದು ಮಧ್ಯಾಹ್ನ ಅವನ ಮನೆಗೆ ಹೋದರು. ಸುಂದರನ ಅಪ್ಪ ಬೀಡಾ ಅಂಗಡಿ ಇಟ್ಟುಕೊಂಡಿದ್ದರು. ದೇಸಾಯರು ಅವರ ಮನೆಗೆ ಹೋದಾಗ ಸುಂದರನ ತಾಯಿ ಮಾತ್ರ ಇದ್ದರು. ಸುಂದರನಿಗೆ ಸ್ಕಾನಿಂಗ್ ಮಾಡಿಸಲು ಅವನ ಸೋದರ ಮಾವ ಕರೆದುಕೊಂಡು ಹೋಗಿದ್ದ. ವಾರಿಜ ಮೇಡಂ ನೂಕಿದ ವೇಗಕ್ಕೆ ತಲೆಗೆ ಪೆಟ್ಟು ಬಿದ್ದಿದೆ ಸುಂದರನಿಗೆ ಈ ವಿಷಯ ದೇಸಾಯರಿಗೆ ಸುಂದರನ ಅಮ್ಮ ಹೇಳುವಾಗ ದನಿ ವ್ಯಾಕುಲಗೊಂಡಿತ್ತು. ಸ್ವಲ್ಪಹೊತ್ತು ಅವರ ಜೊತೆ ಮಾತನಾಡಿದ ದೇಸಾಯರು ಸುಂದರ ವಾಪಸ್ ಬಂದಾಗ ಮತ್ತೆ ಬರುವೆ ಎಂದು ತಿಳಿಸಿಹೋದರು.

ಮರುದಿನ ಮತ್ತೆ ಸುಂದರನ ಮನೆಗೆ ಹೋದ ದೇಸಾಯರ ಅನುಮಾನ ನಿಜವಾಗಿತ್ತು. ಸುಂದರನಿಗೆ ತಲೆಗೆ ಪೆಟ್ಟುಬಿದ್ದಿದೆ... ಮೇಲಾಗಿ ಮಾನಸಿಕವಾಗಿ ಅವ ಆಘಾತಗೊಂಡಿದ್ದಾನೆ ಅಂತ. ಸುಂದರನ ಅಪ್ಪ ಅಮ್ಮರೊಡನೆ ಮಾತನಾಡಿದ ದೇಸಾಯರು ವಾರಿಜ ಮೇಡಂರ ಈ ವರ್ತನೆ ಬಗ್ಗೆ ಸ್ಕೂಲ್ ಬೋರ್ಡಗೆ ಕಂಪ್ಲೇಂಟ್ ಕೊಡಲು ತಿಳಿಸಿದರು. ದೇಸಾಯರ ಒತ್ತಾಯ ಹಾಗೂ ಸುಂದರನ ಚಿಕಿತ್ಸೆಗೆ ದುಡ್ಡು ಸಿಗಬಹುದು... ಹೀಗೆ ಉದ್ದೇಶ ಇಟ್ಟುಕೊಂಡು ಸುಂದರನ ತಂದೆ ಲಿಖಿತ ದೂರು ಕೊಟ್ಟರು. ದೇಸಾಯರು ಸ್ಕೂಲ್‍ಬೋರ್ಡು ಮಾತುಕತೆಗೆ ಕರೆದಾಗ ಹಾಜರಿದ್ದು ಸುಂದರನ ತಂದೆಗೆ ಬೆಂಬಲ ಸೂಚಿಸಿದರು. ಸ್ಕೂಲಿನ ಬೋರ್ಡಿನವರಿಗೂ ಇದು ನುಂಗಲಾರದ ತುತ್ತು. ವಾರಿಜ ಸೀನಿಯರ್ ಮೇಡಂ... ಯಾವುದೋ ವೈಯುಕ್ತಿಕ ಕಾರಣ, ಒತ್ತಡಕ್ಕೆ ಅವರು ಈ ರೀತಿ ಮಾಡಿದ್ದಾರೆ. ಆದರೆ ಸುಂದರನಿಗೆ ಹೆಚ್ಚು ಕಮ್ಮಿ ಆದರೆ ಸ್ಕೂಲಿಗೂ ಕೆಟ್ಟ ಹೆಸರು ಬರುತ್ತದೆ. ಶಿಕ್ಷೆ ಕೊಡುತ್ತಾರೆ, ಹುಡುಗರನ್ನು ಹೊಡಯುತ್ತಾರೆ ಈ ದೂರುಗಳು ಹೆಡ್‍ಮಿಸ್ ಹಲವು ಸಾರಿ ಕೇಳಿದ್ದರು ಬಹಳ ಸಲ ವಾರಿಜ ಮೇಡಂ ಜೊತೆ ಈ ಬಗ್ಗೆ ಹೇಳಿದ್ರುಕೂಡ. ಈ ಪ್ರಕರಣ ಬೇರೆಯೇ ತಿರುವು ತಗೂಳ್ಳಬಹುದು ಅಂತಾನೇ ಅವರು ಸ್ಕೂಲಿನ ಬೋರ್ಡಿಗೂ ವಿಷಯ ತಿಳಿಸಿದ್ದು. ಬೋರ್ಡಿನವರು ವಾರಿಜ ಮೇಡಂಗೆ ಕರೆದು ಬೈದರು ಕೂಡ. ಆದರೆ ಸುಂದರ್‍ನ ಸ್ಥಿತಿ ಸ್ಕ್ಯಾನಿಂಗ್ ರಿಪೋರ್ಟು ಮೇಲೆ ಅವಲಂಬಿತವಾಗಿತ್ತು. ಒಂದು ವೇಳೆ ಅವನ ಮಿದುಳಿಗೆ ಪೆಟ್ಟಾಗಿದ್ದರೆ ಮುಂದಾಗುವ ಪರಿಣಾಮ ನೆನೆದು ಬೋರ್ಡಿನವರು ಹೆದರಿದ್ದರು. ಮೇಲಾಗಿ ವಾಮನ ದೇಸಾಯರು ಹಾಗೂ ಅವರ ಸಂಘಟನೆಯ ಬಗ್ಗೆ ಅವರಿಗೆ ಭಯವಿತ್ತು. ಹೇಗಾದ್ರೂ ಮಾಡಿ ಸುಂದರನ ತಂದೆ, ತಾಯಿಯನ್ನು ಒಳಗೆ ಮಾಡಿಕೊಂಡು, ಏನಾದರೂ ಪರಿಹಾರಕೊಟ್ಟು ಪ್ರಕರಣ ಮುಗಿಸಬೇಕು ಇದು ಬೋರ್ಡಿನ ಹವಣಿಕೆಯಾಗಿತ್ತು.

ವಾಮನ ದೇಸಾಯರು ಸುಂದರನ ತಂದೆಯನ್ನು ಪೂರ್ಣ ನಂಬಿದ್ದರು. ಹೋರಾಟ ನಡೆಸಿರುವುದು ಸುಂದರನಿಗಾದ ಅನ್ಯಾಯ ಸರಿಪಡಿಸಲು ಅಂತ ಮನವಿರಿಕೆ ಮಾಡಿದ್ದರು. ಇತ್ತ ವಾರಿಜ ಮೇಡಂಗೂ ತಮ್ಮ ದುಡುಕು ತರಬಹುದಾದ ತೊಂದರೆ ಬಗ್ಗೆ ಚಿಂತೆಯಾಗಿತ್ತು. ಬೋರ್ಡಿನವರು ಇದು ಕೊನೆ ಎಚ್ಚರಿಕೆ ಎಂಬರ್ಥದ ಮಾತು ಹೇಳಿದ್ದಾರೆ. ಬೇಕೂಂತ ಅವನನ್ನು ತಳ್ಳಿಲ್ಲ ಎಂಬ ಸಮಾಜಾಯಿಷಿಯಿಂದ ಬೋರ್ಡಿನವರು ತೃಪ್ತಿ ಹೊಂದಿರಲಿಲ್ಲ. ಲಿಖಿತ ದೂರು ಬೇರೆ ಇದೆ. ಒಂದು ವೇಳೆ ಈ ವಿಷಯ ಬೆಳೆದರೆ ತೊಂದರೆ ಕಟ್ಟಿಟ್ಟ ಬುತ್ತಿ ಇದು ಅವರಿಗೆ ಗೊತ್ತಿತ್ತು. ಸುಂದರನ ತಂದೆ ಓದಿದವರಲ್ಲ... ನೀತಾಳ ಅಜ್ಜನ ಬೆಂಬಲ ಇದೆ. ನೀತಾಳ ತಾಯಿಯನ್ನು ಕಂಡು ದೂರು ಹಿಂತೆಗೆದುಕೊಳ್ಳಲು ಕೇಳಿದ್ದರು. ಅವರ ಕಸಿನ್ ಹಾಗೂ ಪುಢಾರಿ ಗೆಳೆಯನ ಜೋರಾದ ಮಾತು ನೀತಾಳ ತಾಯಿ ನೀರಜ ಮೇಲೆ ಕೆಲಸ ಮಾಡಿದೆ ಅನ್ನಿಸಿ ನಿರಾಳವಾದರು.
***
ಮಗ, ಸೊಸೆ ಆಡಿದ ಎಲ್ಲ ಮಾತುಗಳನ್ನು ದೇಸಾಯರು ಸಾವಧಾನದಿಂದ ಕೇಳಿಇಕೊಂಡರು. ಮಗ ಮುಂದೆ ನೀತಾಳಿಗೆ ಏನಾದರೂ ಆದೀತು ಎಂದು ಒತ್ತಿ ಒತ್ತಿ ಹೇಳಿದ್ದ. ದ್ವಂದ್ವ ದೇಸಾಯರಲ್ಲೂ ಇತ್ತು. ಈ ಹೋರಾಟ, ಸಂಘರ್ಷ ಅದಕ್ಕೆಂದೇ ಹುಟ್ಟಿದ ಸಂಸ್ಥೆ. ಅಲ್ಲಿ ಎಲ್ಲವೂ ಸರಿ ಇಲ್ಲ. ಸದಸ್ಯರು ಕೆಲವರು ಬ್ಲಾಕ್‍ಮೇಲ್ ಮಾಡುತ್ತಿದ್ದರು. ಹಲವರು ತಮ್ಮ ಸಂಘಟನೆಯನ್ನು ತಮ್ಮ ಲಾಭಕ್ಕಾಗಿ ಬಳಸುತ್ತಿದ್ದರು. ಈ ಬಗ್ಗೆ ಗ್ರುಪ್‍ನಲ್ಲಿ ದೇಸಾಯರು ಒಂದೆರಡು ಬಾರಿ ಪ್ರಸ್ತಾಪ ಸಹ ಮಾಡಿದ್ದರು. ತಾವು ಸಂಘಟನೆಗೆ ಸೇರಿದ ಹೊಸದಾಗಿನ ಉತ್ಸಾಹ ಏಕೋ ಕುಂದಿದೆ ಇದು ಅವರ ಅರಿವಿಗೂ ಬಂದಿತ್ತು. ಈಗ ವಾರಿಜ ಮೇಡಂ ದುಡುಕಿನಿಂದ ಮಾಡಿದ್ದೋ ಅಥವಾ ಅವರ ಅಸಹಜ ಮನಸ್ಥಿತಿಯೋ ಗೊತ್ತಿಲ್ಲ. ಮೊನ್ನೆ ಗ್ರುಪ್‍ನಲ್ಲಿ ಸದಸ್ಯರೊಬ್ಬರು ಈ ಬಗ್ಗೆ ಪ್ರಸ್ತಾಪಿಸಿ ಇನ್ನೂ ಅನೇಕ ಸಮಸ್ಯೆಗಳಿವೆ. ಅವುಗಳ ವಿರುದ್ಧ ಹೋರಾಡುವ. ವಾರಿಜ ಮೇಡಂ ಕ್ಷಮೆ ಕೇಳಿದ್ದಾರೆ. ಬೇಕಾದರೆ ಸುಂದರನ ಆರೈಕೆಯ ಖರ್ಚು ಕೇಳೋಣ ಇತ್ಯಾದಿ ವಾದ ಮಂಡಿಸಿದ್ದರು. ಅದೇಕೋ ಅಂದಿನಿಂದ ವಾಮನ ದೇಸಾಯರು ಖಿನ್ನರಾಗಿದ್ದರು. ಸುತ್ತೆಲ್ಲ ಜಗ ಬತ್ತಲೆ ತಿರುಗುತಿರುವಾಗ ತಾವೂಬ್ಬರೇ ಬಟ್ಟೆ ಹಾಕಿಕೊಂಡ ರೀತಿ ಅವರಿಗೆ ಅನ್ನಿಸಿತು. ಇದು ವೈಯುಕ್ತಿಕ ಸೋಲೇ ಎಂಬ ಜಿಜ್ಞಾಸೆಗೆ ಅವರು ಶರಣಾಗಿದ್ದರು. ಅನ್ಯಾಯದ ವಿರುದ್ಧ ಹೋರಾಡಬೇಕು ನಿಜ ಆದರೆ... ಯಾರನ್ನು ನಂಬುವುದು. ಏಕಾಕಿ ಹೋರಾಟ ವ್ಯರ್ಥ ಅಂತ ಅವರಿಗೆ ಅರಿವಿತ್ತು. ಹೀಗಾಗಿ ಆ ಸಂಘಟನೆ ಸೇರಿದ್ದರು. ಅಲ್ಲೂ ಅವರಿಗೆ ಸೋಲೇ ಎದುರಾಗಿತ್ತು. ಏನೋ ಸಾಧಿಸುವ ಭರದಲ್ಲಿ ತೊಂದರೆಯಾಗಬಾರದು. ತಾನೊಬ್ಬ ಎಲ್ಲ ನಿಗ್ರಹಿಸುವುದು ಅಸಾಧ್ಯದ ಮಾತು. ವಾರಿಜ ಮೇಡಂ, ಸುಂದರನ ತಂದೆ ಒಳ ಒಪ್ಪಂದ ಮಾಡಿಕೊಳ್ಳಲಿ... ಎಲ್ಲ ಸರಿ ಇದೆ ಎಂಬ ಭ್ರಮೆಯ ಬದುಕು ಎಷ್ಟು ನಿರಾಳ. ಮಗ ಸೊಸೆಯ ಮುಂದೆ ಎಲ್ಲ ತಳಮಳ ಬಿಚ್ಚಿಟ್ಟರು. ತಮ್ಮ ನೋವು ಅರ್ಥ ಆದರೆ ಸಾಕು ಅಂತಂದರು.

ಸುಧೀರ ಅಪ್ಪನ ಕೈ ಹಿಡಕೊಂಡ ಕೈ ಬೆಚ್ಚಗಿತ್ತು. ನಡುಗುತ್ತಿರಲಿಲ್ಲ. ಮೆಲ್ಲನೆ ಅವರ ಕೈ ಅದುಮಿದ ಮಗನ ಈ ಸ್ಪರ್ಶ... ದೇಸಾಯರಲ್ಲಿ ವಿಚಿತ್ರ ಅನುಭೂತಿ ತಂತು.
***
2012

2 comments:

  1. ಪ್ರೇರಕ ಕಥನ. ವಾಮನರ ಪ್ರತಿಭಟನೆ ಮತ್ತು ವಾರಿಜಾರಂತಹ ಕೆಟ್ಟ ಮನಸ್ಥಿತಿ ಸಮರ್ಥವಾಗಿ ಬಿಂಬಿತವಾಗಿದೆ.

    ಮನಸ್ಸಿಗೆ ನಾಟುವ ಓದಿಸಿಕೊಂಡು ಹೋಗುವ ಶೈಲಿ.

    ReplyDelete
  2. ಹೋರಾಟಗಾರರ ಮನಃಸ್ಥಿತಿ, ಅವರ ಮೇಲಿರುವ ನಿರ್ಬಂಧಗಳು ಇವನ್ನೆಲ್ಲ ಚೆನ್ನಾಗಿ ಪೋಣಿಸಿ ಬರೆದಿದ್ದೀರಿ. ಇದೀಗ ನಡೆಯುತ್ತಿರುವ ‘ಆಮ್ ಆದ್ಮಿ’ ಚಳುವಳಿಯ ಸಂದರ್ಭದಲ್ಲಿ, ಈ ಕತೆಯು ತುಂಬ ಸಾಮಯಿಕವಾಗಿದೆ.

    ReplyDelete