Thursday, November 1, 2012

ಇನ್ನಿಲ್ಲ ವಾಯಿತೇ ...



ಮೊನ್ನೆ ಝಿ ಮರಾಠಿಯ "ಫು ಬಾಯಿ ಫು" ನೋಡುತ್ತಿದ್ದೆ..ನಗಿಸುವುದೇ ಈ ಕಾರ್ಯಕ್ರಮದ ಉದ್ದೇಶ
ಸಣ್ಣ ಸಣ್ಣ ಸ್ಕಿಟ್ ಗಳಿರುತ್ತವೆ ಇದರಲ್ಲಿ ಹೋದವಾರ ಇದರಲ್ಲಿ ಒಂದು ಸ್ಕಿಟ್ ಪ್ರಸಾರವಾಗಿತ್ತು ಅದನ್ನು
ನೋಡುತ್ತಿದ್ದಂತೆ ನನ್ನ ಕಣ್ಣು ಜಿನುಗಿದ್ದವು...ಸ್ಕಿಟ್ ಇದೀಗ ಬಹು ವೇಗದಿಂದ ಮರೆಯಾಗುತ್ತಿರುವ
ಅಂಚೆ ಅಣ್ಣ ಮತ್ತು ಓರ್ವ ಸಣ್ಣ ಹುಡುಗಿಯ ನಡುವೆ ನಡೆಯುವ ಸಂಭಾಷಣೆ ಆ ಸ್ಕಿಟ್ ನ ವಸ್ತು..
ಹುಡುಗಿ ಚಿಕ್ಕವಳಾದರೂ ಈಗಿನ ಕಾಲದ ಹುಡುಗಿ. ಖಾಕಿ ಅಂಗಿ ಧರಿಸಿದ ಅಂಚೆಅಣ್ಣ ಅವಳಿಗೆ ಪೋಲಿಸ
ಎಂದು ಭಾಸವಾಗುತ್ತದೆ..ಅವರಿಬ್ಬರ ನಡುವೆ ನಡೆದ ಸಂಭಾಷಣೆಯ ಕೆಲ ತುಣುಕು ಇಂತಿವೆ..

ಹುಡುಗಿ: ನೀವು ಈ ಚೀಲದಲ್ಲಿ ಏನು ಇಟ್ಟು ಕೊಂಡಿರುವಿರಿ..?
ಅಂಚೆಅಣ್ಣ : ಪತ್ರ..
ಹುಡುಗಿ: ಪತ್ರ ಹಾಗಂದ್ರೆ..? ಜನ ಯಾಕೆ ಪತ್ರ ಬರೀತಾರೆ ಮೇಲ್ ಇದ್ದಾಗ?
ಅಂಚೆ ಅಣ್ಣ : ಪತ್ರದಲ್ಲಿ ಭಾವನೆ ಉತ್ತಮವಾಗಿ ಹೇಳಬಹುದು ಮೇಲ್ ನಲ್ಲಿ ಸಾಧ್ಯವಿಲ್ಲ..
ಹುಡುಗಿ: ಮೊಬೈಲ್ ನಲ್ಲಿ ನೇರವಾಗಿ ಮಾತಾಡಬಹುದಲ್ಲ ಪತ್ರ ಯಾಕೆ..?
ಅಂಚೆಅಣ್ಣ: ನಿನ್ನ ಅಣ್ಣ ನಿಮ್ಮ ಅಮ್ಮನಿಗೆ ಹಣ..ನೀ ಕಳಿಸೋ ರಾಖಿ ತಲುಪಿಸಲು ಅಂಚೆ ಬೇಕು..
ಹುಡುಗಿ: ಇಲ್ಲ ಹಂಗಲ್ಲ ಅಣ್ಣ ಅಮ್ಮನ ಖಾತೆಗೆ ಮನಿಟ್ರಾನ್ಸಫರ್ ಮಾಡ್ತಾನೆ ಅಮ್ಮ ಏಟಿಎಮ್ ಅಲ್ಲಿ ಡ್ರಾ ಮಾಡ್ತಾಳೆ..   ನಮ್ಮಲ್ಲಿ
ಸ್ಕೈಪ್ ಇದೆ ಅದ್ರಿಂದ ಕನೆಕ್ಟ ಆಗಿ ಅಣ್ಣ್ ಕೈ ಮುಂದೆ ಚಾಚುತ್ತಾನೆ..ನಾನು ರಾಖಿ ಕಟ್ಟಿದ ಹಾಗೆ ಮಾಡ್ತೇನೆ..
ಎಷ್ಟು ಸಿಂಪಲ್ ಇದೆ ಅಲ್ಲವಾ?

ಇದು ಸ್ಯಾಂಪಲ್ ಮಾತ್ರ. ಅಂಚೆಅಣ್ಣ ಈ ಆಧುನಿಕತೆಯ ದಾಳಿಗೆ ತಡವರಿಸುತ್ತಾನೆ..
ಹುಡುಗಿ ಅವನಿಗೆ "ಕಿತಿ ಹಾಸ್ಯಾಸ್ಪದ್ ಆಹೆ ತುಮ್ಹಿ" ಆಂತ ಹೇಳುತ್ತಾಳೆ...ನಿಜ ಅಂಚೆ, ಪತ್ರ , ಪೋಸ್ಟಮ್ಯಾನ್
ಎಲ್ಲ ನಿಧಾನವಾಗಿ ಮಾಯವಾಗುತ್ತಿದ್ದಾರೆ..ಆಧುನಿಕತೆಯ ಬಿರುಗಾಳಿಗೆ ಸಿಲುಕಿ. ನಮ್ಮ ಮುಂದಿನ ಪೀಳಿಗೆ
ಬಹುಶಃ ಅಂಚೆಅಣ್ಣನನ್ನು ಕಾಣಲಾರರು. ಈಗಾಗಲೇ ಅಂಚೆಇಲಾಖೆಯಲ್ಲಿ ಸಂಪ್ರದಾಯ ಮುರಿದು ನೂರೆಂಟು
ತರದ ವ್ಯವಹಾರ ಅಲ್ಲಿ ಈಗ ನಡೆಯುತ್ತಿವೆ. ತೀರ ಇತ್ತೀಚೆಗೆ ಅಲ್ಲಿ ಬಂಗಾರದ ನಾಣ್ಯ ಸಹ ಮಾರಲಿಕ್ಕೆ ಶುರುಇಟ್ಟಿದ್ದಾರೆ.
ನಿಜ ಕಾಲಕ್ಕೆ ತಕ್ಕಂತೆ ಆಧುನಿಕ ಸವಲತ್ತು ಅಳವಡಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ..ಆದರೆ ಈ ಬದಲಾವಣೆಯ
ಭರಾಟೆಯಲ್ಲಿ ನರಳಿಕೆಯೂ ಇದೆ..ಈ ನರಳಿಕೆ ಎಲ್ಲ ಕಡೆ ವ್ಯಾಪಿಸಿದೆ.




ಪತ್ರ ಬರೆಯುವುದು ಕಮ್ಮಿಯಾಗಿದೆ..ಭರದಿಂದ ಸಾಗಿದ ಆಧುನಿಕತೆಯ ತೆಕ್ಕೆಗೆ ಸಿಲುಕಿ. ನಿಜ ಕೆಲ
ಪರಿಸರವಾದಿಗಳು ವಾದಿಸಿಯಾರು..ಮರ ಉಳಿದಿದೆ ಅಂತ..ಆದ್ರೆ ಮರ ಕಡಿಯೋದು ನಿಂತಿದೆಯಾ? ಈಗಂತೂ
ಎಲ್ಲ ಕಡೆ ಮೊಬೈಲ್ ಭರಾಟೆ..ಎಸ್ ಎಂಸ್ ,ಎಂಎಂಸ್ ಗಳ ನಡುವೆ ಪತ್ರಗಳು ನಗಣ್ಯವಾಗಿವೆ..ಹೀಗಾಗಿ ಕೆಲಸವೇ
ಇಲ್ಲದೆ ಪೋಸ್ಟ ಆಫೀಸು ಖಾಲಿಯಾಗಿವೆ...ಒಂದಾನೊಂದು ಕಾಲದಲ್ಲಿ ಸಂದೇಶಎ ವಾಹಕನಾಗಿದ್ದ ಅಂಚೆಅಣ್ಣ ಇಂದು
ಆ ಹುಡುಗಿ ಹೇಳಿದ ಹಾಗೆ ಹಾಸ್ಯಾಸ್ಪದ ಆಗಿಬಿಟ್ಟಿದ್ದಾನೆ..ಅವನ ಈ ಸ್ಥಿತಿಗೆ ನಾನು ನೀವೇ ಕಾರಣರು ಅಲ್ಲವೇ..?
ಎಷ್ಟು ದಿನಾ ಆತು ನಾವು ಪತ್ರ ಬರೀದೆ..ಪತ್ರ ಸ್ವೀಕರಿಸದೆ..ಯಾವುದೋ ಹುಚ್ಚು ಪ್ರವಾಹದಲ್ಲಿ ತೇಲುತ್ತ ನಾವೇನು
ಕಳೆದುಕೊಂಡಿದ್ದೇವೆ ಅನ್ನುವ ಯೋಚನೆಯೂ ನಮಗೆ ಬರುವುದಿಲ್ಲ ಇದು ದುರಂತವೇ ಸರಿ. ನಾನೂ ಪತ್ರ ಬರೆಯುವುದು
ಮರೆತಿರುವೆ..ಸ್ವಲ್ಪ ನನ್ನ ಅತೀತ ಹೇಳುವೆ..

ನಮ್ಮ ತಂದೆ ಪತ್ರಬರೆಯುವುದರಲ್ಲಿ ಎತ್ತಿದ ಕೈ. ನಮ್ಮ ಅಕ್ಕನ ಮದುವೆ-ವರ- ತೋರಿಸುವುದು ಹೀಗೆ ಅವಾಗ
ಕಾರಣಗಳೂ ಇದ್ದವೆನ್ನಿ...ಸಾಧಾರಣವಾಗಿ ಅವರೇ ಬರೆಯುತ್ತಿದ್ದರು ಅವಾಗಿವಾಗ ನಾನೂ ಬರೆಯುವುದಿತ್ತು..
"ಶ್ರೀ ರಾ.ರಾ......ಇವರಿಗೆ..." ಎಂಬ ಒಕ್ಕಣೆಯಿಂದ ಸುರುವಾಗುತ್ತಿತ್ತು ಆ ಪತ್ರ.ದೊಡ್ಡೋನಾದಮೇಲೆ ನನಗೊಂದು
ಹುಚ್ಚು ಹೊಕ್ಕಿತು ಅದೇ ಪತ್ರಮಿತ್ರತ್ವದ್ದು. ಅದೇಕೋ ನನಗೆ "ಹೇಮಂತ" ಹೆಸರು ಪ್ರಿಯವಾಗಿ ಕಂಡು ನನ್ನ ಪ್ರೊಫೈಲಿಗೆ
ಅದೇ ಹೆಸರು ಇಟ್ಟುಕೊಂಡೆ...ಬಹಳ ಜನ ಗೆಳೆಯ/ಗೆಳತಿಯರಿದ್ರು... ಇಬ್ಬರು ಹುಡುಗಿಯರು ದೂರದ ಠಾಣೆಯಿಂದ ಗೆಳೆತನ
ಬೆಳೆಸಿದ್ದರು. ಮಲ್ಲಾಡಿಹಳ್ಳಿಯಿಂದ ಗೆಳತಿ ಸುಬ್ಬಲಕ್ಷ್ಮಿ ದೊರೆತಳು. ಅವಳ ಜೊತೆ ನನ್ನ ಜೀವನ, ನಾ ಓದಿದ ಕತೆ, ಕಾದಂಬರಿ
ಹೀಗೆ ಎಲ್ಲ ಮುಕ್ತವಾಗಿ ಚರ್ಚಿಸುತ್ತಿದ್ದೆ..ನಿರ್ಮಲ ಗೆಳೆತನದ ಮೊದಲ ಅನುಭವ ಅವಳಿಂದ ಸಿಕ್ಕಿತ್ತು.ಮುಂದೆ ಭಾವಿಪತ್ನಿಗೆ ಬರೆದ
ಪ್ರೇಮಪತ್ರಗಳು..ಹೀಗೆ ನಾ ಪತ್ರಬರೆಯದೇ ಇದ್ದುದೇ ಕಮ್ಮಿ. ಆದರೆ ಕಳೆದ ಕೆಲವರ್ಷಗಳಿಂದ ಜಡತ್ವ ಆವರಿಸಿದೆ..
ಗೊತ್ತಿಲ್ಲ ಈ ಜಡ್ಡು ಎಂದು ಕಮಿಯಾಗುವುದು ಎಂದು...ನನ್ನ ಅನುಭವದಿಂದ ಹೇಳಬಲ್ಲೆ ಪತ್ರ ಬರೆಯುವುದರಲ್ಲಿನ ಆನಂದ
ಬೇರೆ ಎಲ್ಲೂ ಇಲ್ಲ. ಹಾಗೆಯೇ ಪತ್ರ ಓದುವಾಗಿನ ಅವರ್ಚನೀಯ ಆನಂದವೂ ಅಷ್ಟೆ..ಆ ವ್ಯಕ್ತಿ ತೀರ ಹತ್ತಿರ ನಿಂತು ಏನೋ
ಹೇಳುತ್ತಿರುವ ಹಾಗೆ. ಆ ಅನುಭವವೇ ಸೊಗಸು...

4 comments:

  1. Umesh,
    nimma maathu nija.
    mundina peeLigege "Post-Man" noDu heege irtidda antha Photodalle torisabekaagutte!
    -Roopa

    ReplyDelete
  2. "ಫು ಬಾಯಿ ಫು"ನ ಸ್ಕಿಟ್ ನನಗೂ ಕಣ್ಣಂಚಿನಲ್ಲಿ ಹನಿಗೂಡಿಸಿತು. ಆಧುನಿಕತೆ ಆತ್ಮೀಯತೆಯ ನಡುವಿನ ತೆಳು ಗೆರೆ ಇಂದಿನ ತಲಮಾರಿಗೆ ಅರ್ಥವಾದೀತೆ?

    ನಿಮ್ಮ ಹೇಮಂತ ಪತ್ರಾಂಕಿತ ಕಂಡ ಮೇಲೆ ನನಗೆ ಮದುವೆಗೆ ಮುಂದೆ ನನ್ನ ಭಾವಿ ಪತ್ನಿಗೆ ಗುಬ್ಬಚ್ಚಿ ಗೂಡು ಹೆಸರಿನಲ್ಲಿ ಪುಟಗಟ್ಟಲೇ ಪತ್ರ ಬರೆಯುತ್ತಿದ್ದದ್ದು ನೆನಪಾಯಿತು.

    ReplyDelete
  3. ದೇಸಾಯರ,
    ಪತ್ರಲೇಖನವು ನಮ್ಮ ಶಾಲೆಗಳಲ್ಲಿ ಒಂದು ಕಡ್ಡಾಯದ ವಿಷಯವಾಗಿರುತ್ತಿತ್ತು. ಅನೇಕ ದಿನಗಳವರೆಗೆ ನನ್ನ ಗೆಳೆಯರ ಪತ್ರಗಳನ್ನು ನಾನು ಸಂಗ್ರಹಿಸಿ ಇಟ್ಟುಕೊಂಡಿದ್ದೆ. ಎಲ್ಲಿ ಹೋದವೊ ಗೆಳೆಯಾ, ಆ ಕಾಲ!?

    ReplyDelete
  4. ನಿಜ ಮಾತಲ್ಲಿ ಹೇಳಲು ಆಗದೆ ಇರುವುದನ್ನು ಬರವಣಿಗೆಯಲ್ಲಿ ಹೇಳಬಹುದು...
    ನಮಗಂತೂ ಈ ಪತ್ರಗಳ ಮಾಯೆ ಗೊತ್ತಿಲ್ಲ.. ಆದರೆ ಅಪ್ಪ ಬರೆದ ಪತ್ರಗಳು ಅಮ್ಮನಲ್ಲಿ ಇದೆ. ಅದನ್ನ ನೋಡಿದ್ದೇನೆ.. ;)

    ReplyDelete