Saturday, October 17, 2009

ಕರಗಿದ ಮಂಜು---೨

ಭಾಗ ೨ ಬಂದಿದೆ ಓದಿ ಅಭಿಪ್ರಾಯ ತಿಳಿಸಿ...



== ೨ ==

ಮಗಳು ನಿದ್ದೆ ಹೋಗಿದ್ದಳು. ಬಸ್ಸಿನಕುಲುಕಾಟಕ್ಕೆ ಸುರೇಖಳಿಗೆ ನಿದ್ದೆ ಬಂದಿರಲಿಲ್ಲ.ಪಕ್ಕದಲ್ಲಿರುವ
ಸುರೇಶನೂ ನಿದ್ದೆ ಹೋಗಿದ್ದ. ಬಸ್ಸು ಮೈಸೂರು ಮುಟ್ಟುವ ಹಾದಿಯಲ್ಲಿತ್ತು. ಗಾಳಿಗೆ ಸುಮನ್ ಕೂದಲು ಹಾರುತ್ತಿದ್ದವು.
ಕಿಟಕಿ ಮುಚ್ಚಿ ಮಗಳಸುತ್ತ ಶಾಲು ಹೊದಿಸಿದಳು. ಟೂರ್ ಎಂದು ಗಂಡ ಹೇಳಿದ್ದ ಉತ್ಸಾಹ ಇರಲಿಲ್ಲ. ಮಗಳಿಗೆ ನಾವೇನು
ಕಮಿಮಾಡಿದೆವು ಅವಳ್ಯಾಕೆ ಅರ್ಥ ಮಾಡ್ಕೊಳ್ಳಲ್ಲ ಇದೇ ಪ್ರಶ್ನೆ ಸುರೇಖಳಿಗೆ ಬಾಧಿಸುತ್ತಿತ್ತು. ಸುಮನ್ ಸಹ ಪ್ರವಾಸಕ್ಕೆ
ಅಷ್ಟೇನು ಉತ್ಸಾಹ ತೋರಿರಲಿಲ್ಲ.ಸುರೇಶ ಒಬ್ಬನೇ ಲವಲವಿಕೆ ಯಿಂದಿದ್ದ. ಅವನ ಎಣಿಕೆ ಬೇರೆ ಆಗಿತ್ತು. ಜಾಗ ಬದಲಾವಣೆ
ಒಳ್ಳೆಯದು ಅದರಲ್ಲೂ ಮೈಸೂರು ಈಗ ದಸರಾದ ಸಂಭ್ರಮದಲ್ಲಿತ್ತು. ಮಗಳರಜೆ ಅ ಸಡಗರದಲ್ಲಿ ಕಳೆಯಲಿ, ಕಹಿ ಎಲ್ಲ
ಮರೆಯಲಿಇದು ಅವನ ಬಯಕೆ. ನಿದ್ದೆ ಕಳೆದು ಎಚ್ಚರವಾದವ ಸುರೇಖಳನ್ನು ಗಮನಿಸಿದ. ಮಗಳ ಪ್ರಶ್ನೆ ನ್ಯಾಯವಾದದ್ದೇ
ಬೇರೆಯವರಿಂದ ಹುಟ್ಟಿನ ರಹಸ್ಯ ತಿಳಿದಾಗ ಸಹಜವಾಗಿಯೇ ಪ್ರತಿಕ್ರಿಯಿಸಿದ್ದಾಳೆ. ಈ ವಿಷಯ ಅವಳಿಗೆ ತಿಳಿಸುವುದು ಸರಿ ಇದು
ಅವನ ವಾದ.ಸುರೇಖಳಿಗೆ ದಿಗಿಲು ನಿಜ ತಿಳಿದು ಮಗಳು ಎಲ್ಲಿ ವಿಮುಖಳಾಗುತ್ತಾಳೊ . ಹಾಗೆ ನೋಡಿದರೆ ಅವಳ ಆತಂಕವು
ಸರಿಯೇ . ಒಟ್ಟಿನಲ್ಲಿ ಸಮಸ್ಯೆ ಎದುರಾಗಿದೆ ಈಗ ಅಂದುಕೊಂಡಂತೆ ನಡೆದರೆ ಸಮಸ್ಯೆಗೆ ಪರಿಹಾರವೂ ಇದೆ.
ಬಸ್ಸು ಮೈಸೂರು ನಿಲ್ದಾಣ ಪ್ರವೇಶಿಸಿತು. ಮಲಗಿದ್ದ ಸುಮನ್ ಳನ್ನು ಎಚ್ಚರಗೊಳಿಸಲು ಮುಂದಾದ.

-----------------------೦---------------------------------------೦---------------------------------------------------------------

ಮೈಸೂರು ದಸರಾಹಬ್ಬದ ಸಡಗರದಲ್ಲಿ ಮೀಯುತ್ತಿತ್ತು. ಬ್ಯಾಂಕ್ ನ ಅತಿಥಿಗೃಹದಲ್ಲಿ ಮೊದಲೇ
ಬುಕ್ ಮಾಡಿದ್ದರಿಂದ ವಸತಿ ಸಮಸ್ಯೆ ಇರಲಿಲ್ಲ.ಚಾಮುಂಡಿ ಬೆಟ್ಟ, ಝೂ,ಕಾರಂಜಿ ಕೆರೆ ಹೀಗೆ ಎಲ್ಲಿ ನೋಡಿದರೂ ಜನ. ಸುಮನ್
ಳಲ್ಲಿ ಉತ್ಸಾಹ ಮೂಡುತ್ತಿತ್ತು. ಹೋದವಾರದ ಬಿಗುವು ಎಲ್ಲ ಕಳಚಿಕೊಂಡಿದ್ದಳು.ಹೊಸವಾತಾವರಣಕ್ಕೆ ಸ್ಪಂದಿಸುತ್ತಿದ್ದಳು.
ರಂಗನತಿಟ್ಟು ನಲ್ಲಿ ಹತ್ತಿರದಿಂದ ತರತರಹದ ಪಕ್ಷಿಗಳನ್ನು ಹತ್ತಿರದಿಂದ ನೋಡಿ ಉಲ್ಲಸಿತಳಾದಳು. ಬಲಮುರಿಯಲ್ಲಿ ನೀರು
ಬಿಟ್ಟು ಏಳಲು ಅವಳಿಗೆ ಮನಸೇ ಇರಲಿಲ್ಲ. ಮಗಳ ಉತ್ಸಾಹ ಸುರೇಖಳಲ್ಲೂ ಹೊಸ ಉಮೇದು ತಂದಿತ್ತು. ಮಗಳು ಇನ್ನು
ಮುಂದೆ ನಗುವುದೇ ಇಲ್ಲ ಅಂತ ಆತಂಕಕ್ಕೊಳಗಾಗಿದ್ದಳು. ಭಯ ಕಳೆದುಮಗಳ ಜೊತೆ ಹಿತವಾಗಿ ನಲಿದಳು.

ಮೈಸೂರಿನಲ್ಲಿ ಮೂರುದಿನ ಕಳೆದದ್ದೇ ಗೊತ್ತಾಗಿರಲಿಲ್ಲ. ಅರಮನೆ ದೀಪಾಲಂಕಾರ ನೋಡುತ್ತಿದ್ದ
ಸುರೇಖಳಿಗೆ ಗಂಡ ಮರುದಿನ ಬೆಂಗಳೂರಿಗೆ ಹೋಗುವ ಪ್ರಸ್ತಾಪ ಮಾಡಿದ. ಅಲ್ಲಿಂದ ಮತ್ತೆ ಹುಬ್ಬಳ್ಳಿ ವಾಪಸ್ ಹೋಗುವುದು
ಎಂದು ಹೇಳಿದ. ಸುಮನ್ ಮನಸ್ಸಿಲ್ಲದ ಮನಸ್ಸಿನಿಂದ ಮೈಸೂರು ಬಿಟ್ಟಳು. ದಾರಿ ಮಧ್ಯೆ ಸಿಗೋ ವಂಡರ್ ಲಾ ದಲ್ಲಿ ಸಂಜೆವರೆಗೆ
ಕಳೆದುಹುರುಪಿನಿಂದ ಬೆಂಗಳೂರು ಸೇರಿಕೊಂಡರು.

ಗಂಡ ಏನೋ ಯೋಜನೆ ಹಾಕಿಯೇ ಈ ಟೂರ್ ಫಿಕ್ಸಮಾಡಿದಾನೆ ಇದು ಸುರೇಖಳಿಗೆ ಅಂದಾಜಿತ್ತು.
ಆದರೆ ಕೇಳಿದರೂ ಅವನ ಮುಗುಳ್ನಗೆ ಮಾತ್ರ ಉತ್ತರವಾಗಿತ್ತು, ಬೆಂಗಳೂರು ಜತೆ ಒಂದು ಅವಿನಾಭಾವ ಸಂಬಂಧ ಇದೆ ಸುರೇಖಳಿಗೆ
ತಾಯ್ತನದ ಅನುಭೂತಿ ಕೊಟ್ಟ ಊರಿದು. ಭಯ ಮಿಶ್ರಿತ ಕಂಪನ ಅವಳಲ್ಲಿ. ಮರುದಿನ ಅವರು ಕುಳಿತ ಆಟೋ ಬಾಣಸವಾಡಿ ಕಡೆ
ತಿರುಗಿದಾಗ ಎದೆ ಡವ ಗುಟ್ಟಿತು ಸುರೇಶ ಮಾತ್ರ ನಿರಾತಂಕವಾಗಿದ್ದ. ಸುಮನ್ ಅಪ್ಪ ಕೊಡಿಸಿದ ವಿಡಿಯೋ ಗೇಮ್ ನಲ್ಲಿ ಮುಳುಗಿದ್ದಳು. ರಸ್ತೆಗಳು ಪರಿಚಿತ ಅನಿಸಿದವು ಸುರೇಖಳಿಗೆ ಆತಂಕದಿಂದ ಗಂಡನ ಕೈ ಹಿಡಿದಳು. ಅವಳ ಕೈಗೆ ಮೆಲುವಾಗಿ ತಟ್ಟಿದ
ಸುರೇಶ ಮುಗುಳ್ನಕ್ಕ. ಆಟೋ ಒಂದು ಕಟ್ಟಡದ ಮುಂದೆ ನಿಂತಿತ್ತು. ಕಟ್ಟಡದ ವಿನ್ಯಾಸ ಬದಲಾಗಿರಲಿಲ್ಲ. ತಂಗಾಳಿ ಬೀಸುತ್ತಿದ್ದರೂ ಸುರೇಖ ಬೆವರಿದ್ದಳು. ಗೇಟು ತೆಗೆದು ಒಳನಡೆದ ಗಂಡ ಹಾಗೂ ಮಗಳನ್ನು ಹಿಂಬಾಲಿಸಿದಳು....

-----------------------------೦--------------------------------------೦-----------------------------------------------------------------

ಎಲ್ಲ ಮೊದಲೇ ಯೋಜನೆ ಹಾಕಿಕೊಂಡಿದ್ದ ಸುರೇಶ. ಆ ಬಗ್ಗೆ ಸಂಸ್ಥೆಯ ಅಧಿಕಾರಿಗಳಲ್ಲಿ ಮಾತೂ
ಆಡಿದ್ದ.ಸಹಕಾರ ಕೊಡುವುದಾಗಿ ಹೇಳಿದ್ದರು.ಅವರೆಲ್ಲ ಈಗ ಆಟೋದಿಂದಿಳಿದು ಪ್ರವೇಶಿಸಿದ ಸಂಸ್ಥೆಯಿಂದಲೇ ಸುಮನ್ ಳನ್ನು
ದತ್ತು ತೆಗೆದುಕೊಂಡಿದ್ದರು. ಸುರೇಶನಿಗೂ ಪರಿಣಾಮದ ಬಗ್ಗೆ ಅಳುಕಿತ್ತು ಇದು ಬಹಳ ಸೂಕ್ಷ್ಮ ವಿಚಾರ. ಮಗಳ ಪ್ರತಿಕ್ರಿಯೆ ಮೇಲೆ
ಎಲ್ಲ ನಿಂತಿತ್ತು. ಆ ಸಂಸ್ಥೆಯ ಮೇಲಧಿಕಾರಿಣಿ ಇವರನ್ನು ಆದರದಿಂದ ಬರಮಾಡಿಕೊಂಡಳು. ಕಾಫಿ ಸೇವನೆ ನಂತರ ಸುಮನಳನ್ನು
ಮೇಲಿನ ರೂಮಿನಲ್ಲಿರೋ ಆಟಿಗೆ ತೋರಿಸುವ ನೆವದಿಂದ ಕರೆದೊಯ್ಯಲಾಯಿತು...ಸುರೇಶ ,ಸುರೇಖ ಮಗಳು ಮೇಲೆ ಹೋಗುವುದನ್ನೇ ನೋಡುತ್ತಿದ್ದರು, ಸುರೇಖಳ ತಲೆ ಗೊಂದಲದ ಗೂಡಾಗಿತ್ತು.ಅವಳ ಪ್ರಶ್ನೆಗಳಿಗೆಲ್ಲ ಸುರೇಶನ ಮುಗುಳ್ನಗೆ
ಉತ್ತರವಾಗಿತ್ತು.
------------------೦---------------------------------೦--------------------------------೦---------------------------------------------

ಆಟಿಗೆ ನೋಡುತ್ತ ಕುಳಿತ ಸುಮನ್ ಸುತ್ತಲೂ ಕಣ್ಣುಹಾಯಿಸಿದಳು. ಅವಳ ಅರಿವಿಗೆ ನಿಲುಕದ ಜಾಗೆ
ಸುತ್ತ ತೊಟ್ಟಿಲುಗಳು..ಅವುಗಳಲ್ಲಿನ ಕೂಸುಗಳು. ದೊಡ್ಡವನ್ನು ನೆಲದ ಕಾರ್ಪೆಟ್ ಮೇಲೆ ಬಿಡಲಾಗಿತ್ತು. ಸುತ್ತ ಹರಡಿದ ಆಟಿಗೆ
ಗಳಲ್ಲಿ ಮಗ್ನ ವಾಗಿದ್ದವು. ನಿಧಾನವಾಗಿ ತಾ ನೋಡುತಿರುವ ಜಾಗೆ ತಾನಿರುವ ಸ್ಥಳದ ಬಗ್ಗೆ ಗೊತ್ತಾಗತೊಡಗಿತು. ರೂಪಾ ಹೇಳಿದ
ಮಾತು ಗುಂಯ್ ಗುಟ್ಟಿತು. ನಾ ಅಮ್ಮನಿಗೆ ಹುಟ್ಟಿಲ್ಲ ಇದು ಗೊತ್ತಾಗಿದ್ದೇ ಇತ್ತೀಚೆಗೆ ಅಪ್ಪ ಅಮ್ಮ ಏನೋ ಮಾತಾಡುತ್ತಿದ್ದವರು ನಾ ಬಂದಿದ್ದು ನೋಡಿ ಮಾತು ನಿಲ್ಲಿಸುತ್ತಿದ್ದರು ಏನೋ ಇದೆ ಇದು ಕಸಿನ್ಸ್ ನೋಡೋ ದೃಷ್ಟಿಯಲ್ಲಿ,
ಮೌಶಿ ಕಾಕು ಅಮ್ಮನೊಡನೆ ಆಡುತ್ತಿದ್ದ ಮಾತಿನಲ್ಲಿ ಇಣುಕುತ್ತಿತ್ತು. ರೂಪ ಜಗಳ ತೆಗೆದು ಆಡಿದ ಮಾತು ಅವಮಾನ ಮಾಡಿತ್ತು.
ನಾ ಅವಳಿಗೆ ಗೆಳತಿ ಇರದಿರಬಹುದು ನಾಲ್ಕು ಜನರ ಮುಂದೆ ಹೀಗೆ ಒಮ್ಮೆಲೆ ಅಂದಾಗ ಸಿಟ್ಟು ಬಂದಿತ್ತು. ಸಿಟ್ಟು ತಿರುಗಿದ್ದು ಅಮ್ಮನ
ಮೇಲೆ ಇಷ್ಟುದಿನ ನನ್ನದು ಎಂದು ತಿಳಿದ ವಸ್ತು ನನ್ನದಲ್ಲ ಎಂದಾಗ ನೋವಾಗಿತ್ತು. ಈಗ ಎಲ್ಲ ಗೊತ್ತಾಗುತಿದೆ. ಅಂದರೆ ನಾನೂ
ಹೀಗೆ ಈಗ ಇವರಿರೋ ಜಾಗೆಯಲ್ಲಿದ್ದೆ .... ಯಾವುದೋ ಮಗು ತೊಟ್ಟಿಲಲ್ಲಿ ಮಲಗಿದ್ದು ಜೋರಾಗಿ ಅಳಲಾರಂಭಿಸಿತು.
ಆಯಾ ಒಬ್ಬಳು ಬಂದು ಅದರ ದುಬಟಿ ಬದಲಾಯಿಸಿದಳು..ಮಗು ಅಳು ನಿಲ್ಲಿಸಲಿಲ್ಲ. ಅದಕ್ಕೆ ಹಸಿವಾಗಿರಬೇಕು ಆಯಾ ಹಾಲು
ಬಾಟಲಿಯಲ್ಲಿ ತರುವವರೆಗೂ ಅದು ಅಳುತ್ತಲೇ ಇತ್ತು. ಹೌದಲ್ಲ ತಾ ಸ್ಕೂಲಿನಲ್ಲಿ ಬಿದ್ದು ಬಂದಾಗ ಅಮ್ಮ ಚಡಪಡಿಸುವುದೇಕೆ
ಹೋದ ವರ್ಷ ಜ್ವರ ಬಂದಾಗ ಇಡೀ ರಾತ್ರಿ ಅಪ್ಪ ಅಮ್ಮ ಎಚ್ಚರಿದ್ದು ಒದ್ದೆಪಟ್ಟಿ ಬದಲಾಯಿಸುತ್ತಿದ್ದುದು ನೆನಪಿಗೆ ಬಂತು.
ಅಂದರೆ ಅಮ್ಮ ಅಮ್ಮನೇ ಅವಳು ಬದಲಾಗಳು.... ಗಕ್ಕನೇ ಅಪ್ಪ ಅಮ್ಮನ ನೆನಪು ಬಂತು. ನಾ ಇಲ್ಲಿ ಏನು ಮಾಡುತಿರುವೆ
ಅವರೆಲ್ಲಿ ಗಾಬರಿಯಾಯಿತು ಸುಮನ್ ಳಿಗೆ. ಅಲ್ಲಿಂದ ಎದ್ದವಳು ಮೆಟ್ಟಿಲು ಇಳಿದು ನೋಡಿದಳು. ಗೇಟ ಹತ್ತಿರ ನಿಂತ ಅಪ್ಪ ಅಮ್ಮ ಕಂಡರು....
------------------------------೦-----------------------------------------೦----------------------------------------------------------

ಹನಿಯುತ್ತಿದ್ದ ಕಣ್ಣೀರು ಒರೆಸಿಕೊಂಡವಳಿಗೆ ಬಾಗಿಲಲ್ಲಿ ನಿಂತ ಸುಮನ್ ಕಂಡಳು.ಉದ್ವೇಗದಿಂದ
ಕಂಪಿಸುವಳನ್ನು ನೋಡಿ ಗಾಬರಿ ಆದಳು. ನೋಡುವುದರಲ್ಲಿಯೇ ಮಗಳು ತೆಕ್ಕೆ ಹಾಕಿ ಅಳುತ್ತಿದ್ದಳು."ಸಾರಿ ಅಮ್ಮ..." ಉದ್ವೇಗದಿಂದ ದನಿ ಕಂಪಿಸುತ್ತಿತ್ತು. ಮಗಳನ್ನು ಬಾಚಿ ತಬ್ಬಿದ ಸುರೇಖ ಸಹ ಅಳುತ್ತಿದ್ದಳು.ನೋಡುತ್ತಿದ್ದ ಸುರೇಶನ ಕಣ್ಣೂ
ಹನಿಗೂಡಿದವು. ಆಗಸದಲ್ಲಿ ಮಂಜು ಕರಗಿ ಸೂರ್ಯ ಮಿನುಗುತ್ತಿದ್ದ.

8 comments:

  1. ಅದ್ಭುತ ಕಥೆ. ಪ್ರಾತ್ಯಕ್ಷಿಕ ದರ್ಶನದಿ೦ದ ಸಮಸ್ಯೆಯ ಇನ್ನೊ೦ದು ಮುಖದ ಅರಿವು೦ಟು ಮಾಡಿ ಸಧ್ಯದ ಸಮಸ್ಯೆ ಸಮಸ್ಯೆಯೆ ಅಲ್ಲ ಅನ್ನುವ ವಿಚಾರ ತಿಳಿಮಾಡಿಕೊಡುವ ಸ೦ಗತಿಯೇ ಕಥೆಯ ವೈಶಿಷ್ಠತೆ. ಧನ್ಯವಾದಗಳು.

    ReplyDelete
  2. ಉತ್ತಮ ಮನೋವಿಶ್ಲೇಷಣಾತ್ಮಕ ಕತೆ.
    ಅಭಿನಂದನೆಗಳು.

    ReplyDelete
  3. tumba cheenagide. ತಮಗೂ ಮತ್ತು ನಿಮ್ಮ ಕುಟುಂಬದವರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

    ReplyDelete
  4. ಲೇಖನ ತುಂಬಾ ಚನ್ನಾಗಿದೆ. ಧನ್ಯವಾದಗಳು

    ReplyDelete
  5. ಸೀತಾರಾಮ ದೊಡ್ಡ ಮಾತಿನಿಂದ ಹೊಗಲಿದ್ದೀರಿ ಧನ್ಯವಾದಗಳು...

    ReplyDelete
  6. ಕಾಕಾ ಮೆಚ್ಚಿ ಚುಟುಕಾಗಿ ಪ್ರತಿಕ್ರಿಯಿಸಿದ್ದಕ್ಕೆ ಸ್ವಲ್ಪ ಅಸಮಾಧಾನ ಅದ ತಪ್ಪು ಇದ್ರ ಎತ್ತಿ ತೋರಸ್ರಿ

    ReplyDelete
  7. ಗೋಪಾಲ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  8. ಶಿವು ಇದು ಲೇಖನ ಅಲ್ಲ ಕತೆ ಮೆಚ್ಚಿದ್ದಕ್ಕೆ ಧನ್ಯವಾದಗಳು

    ReplyDelete