Monday, January 26, 2015

ದಂಡಿಮ್ಯಾಲ ನಿಂತು..

ಈ ಕತೆ ತುಶಾರದಿಂದ ತಿರಸ್ಕರಿಸಲ್ಪಟ್ಟಿತ್ತು. ಅಲ್ಲಿಯ ಸಂಪಾದಕರು ಈ ಕತೆ ತುಷಾರಕ್ಕೆ ಯೋಗ್ಯವಲ್ಲ ಎಂಬ ಫರಮಾನು ಕೊಟ್ಟಿದ್ದರು. ಪತ್ರಿಕೆಗೆ ಈ ಕತೆ ಯೋಗ್ಯ ಅಥವಾ ಅಯೋಗ್ಯ ಎಂದು ನಿರ್ಧರಿಸುವ ಮಾನದಂಡವೂ ಇರುತ್ತವೆ ಇದು ವಿಚಿತ್ರಸಂಗತಿ.ಮಂಗಳದವರು ಈ ಕತೆ ೨೧/.೦೧/೨೦೧೫ ರ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರಿಗೊಂದು ಸಲಾಮು. ಎಲ್ಲರೂ ಕತೆ ಓದಲಿ ಎಂಬ ಉದ್ದೇಶದಿಂದ ಕತೆಯನ್ನು ಬ್ಲಾಗಿಗೆ ಹಾಕಿರುವೆ ಓದಿ ಹೆಂಗನ್ನಿಸಿತು ತಿಳಸರಿ.
-------------------------------------------------------------------------------------------------
  ಬೆಳಿಗ್ಗೆ ಎದ್ದಾಗ ಆಗಲೇ ಎಂಟು ಹೊಡದಿತ್ತು.ರಂಜನಾಳನ್ನು ಎಬ್ಬಿಸಿಕೊಂಡು ಹೊರಬಂದೆ.ಗಿರೀಶ ಆಗಲೇ ಆಫೀಸಿಗೆ ಹೊರಡುವುದರಲ್ಲಿದ್ದ.ಅವನ ಹೆಂಡತಿ ಶುಭದಾ ಕೊಟ್ಟ ಚಹಾ ಕುಡಿಯುತ್ತ ಅತ್ಯಾಳನ್ನು ಹುಡುಕಿದೆ. ಗಿರೀಶ ಅವಳು ಗುಡಿಗೆ ಹೋಗಿರುವುದಾಗಿ ಹೇಳಿದ. ಗಿರೀಶನಿಗೆ ಆಫೀಸಿಗೆ ಕಳಿಸಿ ಶುಭದಾ ನನ್ನ ಮುಂದೆ ಬಂದು ಕುಳಿತಳು.
"ವೈನ್ಸ ನಿನ್ನೆ ರಾತ್ರಿ ಏನಾತು..ಅತ್ಯಾ ಆಳುವ ದನಿ ಜೋಡಿ ನಿಮ್ಮ ರಮಿಸೋ ದನಿ ಕೇಳತಿತ್ತು.."
"ಏನಿಲ್ಲ ಅಕಿ ಹಳೇದು ನೆನಪಾಗಿ ಅಳತಿದ್ದಳು..ನಾ ಸಮಾಧಾನ ಮಾಡತಿದ್ದೆ..." ಪೇಪರ ಮೇಲೆ ಕಣ್ಣಾಡಿಸುತ್ತಲೆ ಹೇಳಿದೆ. "ರಂಜನಾ ಬ್ರಶ್ ಮಾಡಿ ಸ್ನಾನ ಮಾಡು..ಲಗೂನ ಮುಗಸು.." ನನಗೆ ಶುಭದಾ ಮುಂದೆ ಕೂಡುವ ಮನಸ್ಸಿರಲಿಲ್ಲ. ರಂಜನಾಗ ನೀರು ತೋಡಿ ಬಂದಾಗೂ ಅಕಿ ಅಲ್ಲೆ ಕೂತಿದ್ದಳು.
" ವ್ವೆನ್ಸ ನೀವೂ ಸುಳ್ಳ ಹೇಳಬ್ಯಾಡ್ರಿ..ಇವರಂಗ..ನಾ ಇವರಿಗೆ ರಗಡ ಸಲ ಹೇಳೇನಿ..ಅತ್ಯಾ ನಾವು ರಾತ್ರಿ ಮಲಗಿದಾಗ ರೂಮಿನ ಬಾಗಿಲ ಸಂದಿಲೆ ಹಣಕಿಹಾಕತಿರತಾರ ಅಂತ ಇವರು ಮ್ವೆಮ್ಯಾಲ ತೆಗೀತಾರ..ನೀವೂ ಹಂಗ ಆಗ ಬ್ಯಾಡರಿ..ಅವರು ರೂಮಿನ ಬಾಗಲದಾಗ ನಿಂತಿದ್ದರು ಹೌದಲ್ಲೋ....." ಅವಳ ದನಿಯಲ್ಲಿ ನಿಖರತೆ ಇತ್ತು.
"ಶುಭದಾ ನೀ ಏನರೆ ಕಲ್ಪನಾ ಮಾಡಿಕೊಂಡು ಮಾತಾಡತಿ..ಅಂಥಾದೇನೂ ಆಗಿಲ್ಲ.." ನನ್ನ ದನಿಯಲ್ಲಿ ವಿಶ್ವಾಸ ಇರಲಿಲ್ಲ..ನನಗೇ..!!
"ವ್ವೆನ್ಸ ಹಿಂಗ ಆಗೂದು ಮೊದಲನೇ ಸಲ ಅಲ್ಲ..ಸಹಸಾ ಮಾವನವರು ಊರಾಗಿಲ್ಲದಾಗ ಹಿಂಗ ಆಗತದ.ನಂಗಂತೂ ಅತ್ಯಾನ ವರ್ತನಾ ವಿಚಿತ್ರ ಅನಸತದ.ಅಲ್ಲ ನಾವು ಮಗ ಸೊಸಿ ಸಮಾನ ಅವರಿಗೆ..ಹಿಂಗ ರೂಮಿನ್ಯಾಗ ಹಣಕಿಹಾಕೂದು ಕದ್ದು ಕೇಳೋದು ಸರಿ ಅನಸತದ ಏನು..ನೀವು ಅವರಿಗೆ ಹೇಳಬಿಡರಿ ಇದು ಯಾಕೋ ಸರಿ ಬರೂದಿಲ್ಲ ನಾ ಮಾವನವರ ಮುಂದ ಎಲ್ಲಾ ಹೇಳಿಬಿಡಾಕಿದ್ದೀನಿ ಹಿರೇಮನಷಾರು ಅವರು ಇದ್ದಾಗ ಹಿಂಗದ ಮುಂದ ಹೆಂಗೋ..." ಅವಳಲ್ಲಿ ಅತ್ಯಾನ ಬಗ್ಗೆ ಜಿಗುಪ್ಸೆ ಇತ್ತು.
"ಇವರು ಮದವಿಮೊದಲ ಏನೇನೋ ಹೊಲಸು ಪುಸ್ತಕ ತಂದಿಟ್ಟಾರ. ನಾ ಅವನ್ನ ಗಂಟುಕಟ್ಟಿ ಮೂಲ್ಯಾಗ ಇಟ್ಟಿದ್ದೆ .ಯಾಕೋ ಯಾರೋ ಆ ಗಂಟುಬಿಚ್ಚಿದಂಗ ಅನಸತಿತ್ತು. ಅವರಿಲ್ಲದಾಗ ಅತ್ಯಾನ ರೂಮಿನ್ಯಾಗ ಹುಡುಕಿದೆ ಅಲ್ಲಿ ಅವು ಸಿಕ್ಕವು..ಏನ ಅಸಹ್ಯರಿ ಇದು.ಮಂದೀಗೆ ಗೊತ್ತಾದ್ರ ಮಾವನವರ ಪುರೋಹಿತಿಕಿ ಬಂದಾಗ್ತದ..ಈ ವಯಸ್ಸಿನ್ಯಾಗ ಎಂಥಾ ಆಶಾ ಅಂತೀನಿ..." ಅತ್ಯಾನ ವರ್ತನೆಯ ಬಗ್ಗೆ ಶುಭದಾಳಲ್ಲಿ ಪುರಾವೆ ಇತ್ತು.ಅದಕ್ಕೆ ಅವಳ ಮಾತಿನಲ್ಲಿ ನಿಖರತೆ ಇದ್ದಿರಬೇಕು.
"ನಾ ಮಾತಾಡತೇನಿ ನೀ ರಸಕಸಿ ಮಾಡಕೋಬ್ಯಾಡ.." ಸಮಾಧಾನ ಮಾಡಿ ಸಾಗಹಾಕಿದೆ. ಪೇಪರ ಓದಲು ತಗೊಂಡೆ. ಮನಸ್ಸು ಅಲ್ಲಿರಲಿಲ್ಲ. ಈ ಅತ್ಯಾ ಹಿಂಗ್ಯಾಕ ಮಾಡಿದಳು.ಅಪ್ಪಗ ಹೇಳಬ್ಯಾಡ ಅಂತ ಆಣಿಚೂರಿ ಎಲ್ಲ ಹಾಕಿಸಿಕೊಂಡಳು.ಸುಡ್ಲಿ ಅಕಿ ಮಾಡಿದ್ದು ನೆನೆದ್ರ ಇನ್ನೂ ಮ್ವೆಮ್ಯಾಲ ಮುಳ್ಳು ಹರದಂಗ ಆಗತದ. ರಾತ್ರಿ ರಂಜನಾ ಎದ್ದಿದ್ಲು. ಅರೇದ ಜಾಗ ಅಂತ ನಾನೂ ಎದ್ದು ಹೋಗಿದ್ದೆ. ಗಿರೀಶ ಶುಭದಾ ಎಲ್ಲೋ ಹೊರಗ ಹೋಗಿ ತಡಾಮಾಡಿ ಬಂದಿದ್ದರು. ರಂಜನಾಳ ಕಾರ್ಯಕ್ರಮ ಮುಗಸಿ ನಡಮನಿ ಹಾದು ರೂಮಿಗೆ ಹೊಂಟಿದ್ದೆ. ಗಿರೀಶನ ರೂಮಿನ ಬಾಗಲದಾಗ ಯಾರೋ ನಿಂತಂಗ ಅನಸತು.ದೀಪದ ಬೆಳಕು ಬೀಳತಿರಲಿಲ್ಲ..ಆದರೂ ಅಲ್ಲೆ ಯಾರೋ ಇದ್ದಾರ ಇದು ಖಾತ್ರಿಆತು. ಹತ್ರ ಹೋಗಿ ನೋಡದೆ..ಅಕಿ ಅತ್ಯಾ ಆಗಿದ್ದಳು. ಅವರ ರೂಮಿನ ಬಾಗಲದಾಗ ಇಕಿ ಏನು ಮಾಡತಾಳ..ರೂಮಿನಿಂದ ಕ್ಷೀಣವಾದ ಬೆಳಕು ಬರತಿತ್ತು, ಅತ್ಯಾ ಸಂದಿಯೊಳಗಿಂದ ಬಗ್ಗಿ ನೋಡತಿದ್ಲು. ಅಕಿ ಹೆಗಲ ಮ್ಯಾಲ ಹೌರಗ ಕೈ ಇಟ್ಟೆ. ನನ್ನ ನೋಡಿ ಗಾಬರಿ ಆದಾಕಿ ಕಣ್ಣಾಗಿಂದ ದಳದಳ ನೀರು ಇಳೀತಿದ್ದವು.ನಂಗ ಗದ್ದಲ ಆಗೂದು ಬ್ಯಾಡಾಗಿತ್ತು. ಅಕಿನ ಕರಕೊಂಡು ಹಿತ್ತಲ ಪಡಸಾಲಿಗೆ ಹೋದೆ.ಅಕಿ ಬಿಕ್ಕಿಸಿ ಬಿಕ್ಕಿಸಿ ಅಳತಿದ್ಲು. ಇದ ಇನ್ನೂ ಹಣಿಕಿಹಾಕ್ಕೋತ ನಿಂತಾಕಿ ಇಕೀನ ಅನ್ನೂದು ಅರಿವಾಗಿ ಸಮಾಧಾನ ಮಾಡುವ ಪ್ರಯತ್ನ ನಿಲ್ಲಿಸಿದೆ.ಇದೆಂಥಾ ಹಂಬಲ ಇಕೀದು..ಈ ವಯಸ್ಸಿನ್ಯಾಗ ಇಕಿಗ್ಯಾಕ ಇಂಥಾ ಬುದ್ಧಿ ಬಂತು...

ಅಕಿದು ಒಂದ ವರಾತ. ಇಲ್ಲಾಗಿದ್ದು ಅಪ್ಪಗ ಹೇಳಬ್ಯಾಡ..ಆಣಿಹಾಕಿಸಿಕೊಂಡಳು.ಮೆಲುದನೀಲೆ ಪರಿಪರಿ ಬೇಡಿಕೊಂಡಳು. ರಾತ್ರಿ ಹಂಗ ಮುಗದಹೋಗಿತ್ತು.ಈಗ ನೋಡಿದರ ಅಕಿ ಮನ್ಯಾಗ ಇಲ್ಲ. ಅಪ್ಪ ರುದ್ರಾಭಿಷೇಕ ಮಾಡಸಲಿಕ್ಕೆ ದಾವಣಗೆರಿಗೆ ಹೋಗಿದ್ದ.ಅಪ್ಪನ ರುದ್ರ ಅಂಬೋಣಕ್ಕೆ ಭಾಳ ಡಿಮಾಂಡ ಇತ್ತು.ರೇಲ್ವೆ ನೌಕರಿಯಿಂದ ರಿಟೈರಾದರೂ ಪುರೋಹಿತಕಿ ನಿಲಸಿರಲಿಲ್ಲ.ಅವ್ವ ಗರ್ಭಾಶಯದ ಕ್ಯಾನ್ಸರಿಂದ ತೀರಕೊಂಡಳು..ಬೆನ್ನಿಗೆ ಬಿದ್ದ ತಂಗಿ ವಿಧವಾಆಗಿ ಮನಿ ಸೇರಿಕೊಂಡಳು.ಹಂಗ ನೋಡಿದರ ಅಪ್ಪಗ ಸುಖ ಎಂದೂ ಭೇಟಿಆಗಿಯೇಇಲ್ಲ ಅಂತ ಹೇಳಬಹುದು.ಗಿರೀಶಗೂ ರೇಲ್ವೆಯಲ್ಲಿ ನವಕರಿ ಆಗಿತ್ತು.ಲಗ್ನ ಆಗಿ ಸೊಸಿ ಬಂದಿದ್ದಳು.ನನ್ನೂ ಛಲೋಕಡೆ ನೋಡಿ ಕೊಟ್ಟಿದ್ದ.ಇವರದು ಬ್ಯಾಂಕಿನ ಕೆಲಸ ಈಗ ಟ್ರೇನಿಂಗಗಾಗಿ ಮುಂಬಯಿಗೆ ಹೋಗ್ಯಾರ.ರಂಜನಾಗೂ ಸೂಟಿ ಇತ್ತು. ಅಪ್ಪ ಗಿರೀಶರ ಆಗ್ರಹದ ಕರೆಯುವಿಕೆಗೆ ಓಗೊಟ್ಠು ಬಂದಿದ್ದೆ.
-------------------------------------------------------------------------------------------------
ಮಧ್ಯಾಹ್ನದ ಊಟ ಮುಗದಿತ್ತು. ಶುಭದಾ ತಲಿನೋವು ಅಂತ ರೂಮು ಸೇರಿದ್ದಳು. ಹಳೆ ಫೋಟೋ ನೋಡುತ್ತ ರಂಜನಾ ಜೋಡಿ ಪಡಸಾಲಿಯೊಳಗ ಕೂತಿದ್ದೆ. ಬಾಜೂಮನಿ ಹುಡುಗಿ ಆಟಕ್ಕ ಕರದಳು ಅಂತೇಳಿ ರಂಜನಾ ಎದ್ದು ಹೋದಳು.ಎಂಜಲಗೋಮ ಮುಗಸಿದ ಅತ್ಯಾ ಬಂದಾಗ ನೋಡಿದೆ ಮುಖದಾಗ ಯಾವ ಪ್ರಾಯಶ್ಚಿತ್ತದ ಭಾವನಾನೂ ಇರಲಿಲ್ಲ. ಸ್ವಲ್ಪ ಅತಿನ ಅನ್ನಬಹುದಾದ ಕೆಂಪು ಬಣ್ಣ ಅಕಿದು. ಮೈ ಕೈ ತುಂಬಿಕೊಂಡಿದ್ದಳು.ಹಂಗ ನೋಡಿದರ ಅಕಿಗೆ ಅಂಥ ವಯಸ್ಸೇನೂ ಆಗಿರಲಿಲ್ಲ. ಲಗ್ನ ಆದಾಗ ಹದಿನೆಂಟು ಆಗಿದ್ದವಂತ. ಅವ್ವ ಹೇಳತಿದ್ಲು. ನಾ ಅವಾಗ ಅಕಿ ಹೊಟ್ಠಿಯೊಳಗ ಇದ್ಯಂತ. ಅತ್ಯಾನ ಲಗ್ನದ ಸುದ್ದಿ ಅವ್ವ ಆಗಾಗ ನೆನಪು ಮಾಡಕೋತ ಹೇಳತಿದ್ದಳು.ಅಪ್ಪಗ ವಂಶಪಾರಂಪರ್ಯ ವಾಗಿ ಸಿಕ್ಕಿದ್ದು ಈ ಹಳೇಮನಿ ಮತ್ತ ಊರಾಗಿನ ತುಂಡ ಜಮೀನು. ಅಂಥ ಸ್ಥಿತಿವಂತ ಅಲ್ಲದ ಅಪ್ಪಗ ಅವರಪ್ಪ ತಂಗಿ ಲಗ್ನದ ಜವಾಬ್ದಾರಿ ಹೊಸಿಹೋಗಿದ್ದ. ಅಪ್ಪಗ ಹೊಲಾಮಾರಿ ತಂಗಿ ಲಗ್ನಮಾಡುವ ಅನಿವಾರ್ಯತೆ ಬಂತು. ಸರಿ ಬೀಗರು ಜೋರಿದ್ದರು..ಅದು ಇದು ಅಂತ ಅಪ್ಪಗ ಕಾಡಿದರು. ಅವ್ವ ಹೇಳತಿದ್ಲು ಅದು ಎಷ್ಠಸಲಾ ಅತ್ಯಾನ ಅತ್ತಿ ಮಾವನ ಕಾಲು ಹಿಡಿಬೇಕಾಗಿ ಬಂತು..ಅಂತ. ಅಪ್ಪ ಅವ್ವ ಅತ್ಯಾನ ಕಣ್ಣೀರಿಗೆ ಬೇಡಿಕೆಗೆ ಅಲ್ಲಿ ಬೆಲೆನ ಇರಲಿಲ್ಲ.ಸರಿ ಎಲ್ಲಾ ಮುಗೀತು ಇನ್ನು ಪ್ರಸ್ತದ ತಯಾರಿ..ರೂಮು ಸಿಂಗರಿಸಿ ಅತ್ಯಾಗ ಒಳಗ ಕಳಿಸಿದರಂತ ಅಳಿಯ ರೂಮಿಗೆ ಹೋಗದ ಹಟಾಹಿಡದಿದ್ದ..ಅದಕ ಅವನ ಅವ್ವನ ಹಿಕಮತ್ತು ಬ್ಯಾರೆ. ಹುಡುಗಗ ಹಾಕಬೇಕಾದ ಬಂಗಾರದ ಚೈನು ಇನ್ನೂ ಬಂದಿಲ್ಲ ಅದು ಬರದ ಹೊರತು ರೂಮಿಗೆ ಹೋಗೂದಿಲ್ಲ ಅಂತ. ಅಪ್ಪನ ಕೈ ಖಾಲಿಯಾಗಿ ಅಲ್ಲಿ ಇಲ್ಲಿ ಸಾಲಾನೂ ಆಗಿತ್ತು. ಹಿಂಗ ರಾತ್ರಿ ಬಂಗಾರದ ಚೈನು ತರೂದು ಕಠಿಣ ಆಗತದ ಅಂತ ಅಪ್ಪ ಚಾಲವರದು ಬೇಡಿಕೊಂಡರೂ ಅವರ ಮನಸ್ಸು ಕರಗಲಿಲ್ಲ. ಚೈನು ತಗೋಂಡು ಸೊಸಿ ಬರಲಿ ಮುಂದಿದೆಲ್ಲ ಆಮ್ಯಾಲ ಅಂತ ಅವರು ಹೊರಟ ಹೋದರು. ಮುಂದ ನಾಕದಿನಕ್ಕ ಕೆಟ್ಟ ಸುದ್ದಿ ಬಂತು. ಬಸ್ ಹಾದು ಅತ್ಯಾನ ಗಂಡ ತೀರಿಕೊಂಡಿದ್ದ. ಅತ್ಯಾನ ಮ್ಯಾಲೆ ಗಂಡನ್ನ ನುಂಗಿ ನೀರ ಕುಡದಾಕಿ ಅನ್ನೋ ಅಪವಾದಾನೂ ಬಂತು. ಹೋದ ಅಪ್ಪ ಅವ್ವ ಅನಿಸಿಕೊಂಡು ಮನಿಗೆ ಬಂದರು. ಅತ್ಯಾ ಕಾಯಂಆಗಿ ತವರುಮನಿ ಸೇರಿಕೊಂಡಳು.

ಬಂದು ಕೂತಾಕಿ ಮೆತ್ತಗಿನ ದನಿಯೊಳಗ ಮಾತು ತಗದಳು.
"ಅಕಿಗೆ ಗೊತ್ತಾತೇನು ಏನರೆ ಅಂದಳೇನು.." ಇಕೀಗೆ ಸ್ಪಷ್ಟ ಉತ್ರ ಕೊಡಲೇಬೇಕು ಖಾರ ಆದರೂ ಮಾತು ಹೇಳಲೇಬೇಕು ಅನಕೊಂಡೆ.
"ನಂಗ ಗೊತ್ತು ನೀನೂ ನನ್ನ ಬಗ್ಗೆ ಹಂಗ ವಿಚಾರ ಮಾಡತಿಅಂತ..ನನ್ನ ನೋವು ಯಾರಿಗೆ ಹೇಳ್ಕೋಳುದು ಅದ..ನಿಮ್ಮವ್ವಾ ಇದ್ದಾಗೊಂಥರಾ ಈಗ ಇಕೀ ಕ್ಯೆಯ್ಯಾಗ ಇನ್ನೊಂಥರಾ..ನಂದು ನಶೀಬ ಆ ದೇವರು ಹೆಂಗ ಬರದಾನೋ..ಸುಡ್ಲಿ.." ಅಳುತ್ತಲೇ ಮತಾಡಿದಳು.
"ಅತ್ಯಾ ನೀ ನಿನ್ನೆ ಮಾಡಿದ್ದು ನಿನಗ ಸರಿ ಅನಸತದೇನು...?"
"ಇದು ಸರಿ ತಪ್ಪಿನ ಪ್ರಶ್ನಿ ಅಲ್ಲ.ಒಂದು ಮಾತು ಹೇಳತೇನಿ ನಾ ಏನ ಕಲತಾಕಿ ಅಲ್ಲ ನದಿಯೊಳಗ ಇಳದಾವರಿಗೆ ಮಾತ್ರ ಅದರ ಸೆಳವು ಸುಳಿಯ ಜೋರು ಗೊತ್ತಾಗತದ ದಂಡಿಮ್ಯಾಲ ನಿಂತಾವರಿಗಲ್ಲ..ನಂದೇನು ತಪ್ಪಿತ್ತು ಹೇಳು. ಗೊತ್ತಿತ್ತು ಗೆಳತ್ಯಾರು ಹೇಳಿದ್ದರು ಸಿನೆಮದಾಗ ನೋಡಿದ್ದೆ..ಕಲ್ಪನಾ ಮಾಡಕೊಂಡಿದ್ದೆ..ಇನ್ನೇನು ಹಾಲಿನಬಟ್ಟಲ ತುಟಿಗೆ ಮುಟ್ಟಸಬೆಕು ಅದನ್ನ ಕಸಗೊಂಡ ಆ ದೇವರು..ಹಾಲು ಚೆಲ್ಲಿತು..ನನ ಬಾಳು ಹಿಂಗಾತು..ಹೇಳು ನಂದೇನು ತಪ್ಪಿತ್ತು.." ಅಳುವಿನ ನಡುವೆಯೇ ತೂರಿಬಂದ ಪ್ರಶ್ನೆ ನಂಗ ಭರ್ಚಿಯಿಂದ ತಿವಿದಂಗಾತು.ಹೌದು ಹಸದಾವರ ಮುಂದ ತುಂಬಿದ ತಾಟು ಇಟ್ಟು ಹಂಗ ಕಸಗೊಂಡಂಗ ಆಗಿತ್ತು. ಇದರಾಗ ಅಕಿದು ತಪ್ಪುಇರಲಿಲ್ಲ..ಆದರ ನಿನ್ನಿ ಅಕಿ ಮಾಡಿದ್ದಕ್ಕ ಇದು ಹೆಂಗ ಸಮರ್ಥನಾ ಆಗತದ..ನನ್ನ ಪ್ರಶ್ನೆಗೆ ಅಕಿ ಉತ್ತರ ತಯಾರಿತ್ತು.
"ಎಲ್ಲಾರಂಗ ಕೀರ್ತನಾ ಕೇಳಕೋತ ಬತ್ತಿ ಹೊಸಕೋತ ಉಪವಾಸ ಮಾಡಕೋತ ನಾ ಇರಬೇಕಾಗಿತ್ತು..ಖರೆ. ಆದರ ಯಾವ ಉಪವಾಸಕ್ಕೂ ಕೀರ್ತನಾಕ್ಕೂ ನನ್ನ ವ್ಯಾಪ ಹೊಗಸೂ ಶಕ್ತಿ ಇರಲಿಲ್ಲ. ಎಷ್ಟ ದೇವರಿಗೆ ಕೈ ಮುಗದು ಮಲಗಿದರೂ ರಾತ್ರಿ ಆದ ಮ್ಯಾಲ ಅದ ಚಿತ್ರ ಆ ಹೂವಿನ ಹಾಸಿಗಿ ಊದಿನ ಕಡ್ಡಿ ವಾಸನಿ ಎಲ್ಲಾ ಸಮರ್ಪಣಾಕ್ಕ ತಯಾರಾಗಿ ಕೂತ ನಾನು ಈ ಚಿತ್ರ ರಾತ್ರಿಯಿಡೀ ಕಾಡತಿತ್ತು.ಏನೇನೋ ಬಯಕಿ ಹುಚ್ಚಕುದುರಿ ಹತ್ತಿ ದೂರ ಹೋಗೂ ಹಂಬಲ.ಬ್ಯಾರೆದವರ ಛಲೋ ಸುದ್ದಿ ಅಪಥ್ಯ ಆಗತಿತ್ತು.ಬ್ಯಾರೆಯವರ ಬಸಿರು ಬಾಣಂತನ ಸುದ್ದಿಕೇಳಿ ಉರದಂಗಾಗೋದು. ಮ್ಯಾಲ ನಿಮ್ಮವ್ವಂದು ಕಿಟಿಕಿಟಿ..ಅದನ ಮುಟ್ಟಬ್ಯಾಡ ಅದನ ನೋಡಬ್ಯಾಡ ಹಿಂಗ..ಒಳಗೊಳಗ ನಾ ಸತಕೋತ ಹೋದಂಗ....ಯಾರೋ ಬಂದಂಗ ಹತ್ರ ನಿಂತಂಗ..ಉಸಿರು ತಾಕದಂಗ..ನಾ ಹೆಂಗ ಹೇಳಲಿ.."

ಅತ್ಯಾ ಉದ್ವಿಗ್ನಗೊಂಡಿದ್ದಳು. ಏನು ಉತ್ತರ ಕೊಡೋದು ಎಂಬ ಗೊಂದಲದಲ್ಲಿದ್ದೆ...ನನ್ನ ಯಾವ ಉತ್ತರವೂ ಅವಳಿಗೆ ಸಮಾಧಾನ ತರಲಾರದು ಎಂಬುದು ಗೊತ್ತಿತ್ತು.ಅದೇ ಸಮಯಕ್ಕೆ ಸರಿಯಾಗಿ ಬಾಗಿಲ ದೂಡಿಕೊಂಡು ಅಪ್ಪ ಒಳಬಂದ. ನಾ ನಿರಾಳವಾದೆ
----------------
ಅಪ್ಪ ರಂಜಿತಾಳ ಜೊತೆ ಛಲೋ ಹೊಂದಿಕೊಂಡಿದ್ದ.ಅವಳ ಜೊತೆ ಚೌಕಾಬಾರಾ ಕೇರಮ್ ಹೀಗೆ ಆಟಗಳಲ್ಲಿ ರಮಿಸಿದ್ದ. ಒಮ್ಮೊಮ್ಮೆ ನಾನು ಅತ್ಯಾ ಇಲ್ಲವೇ ಶುಭದ ಹೀಗೆ ಜೋಡಿಯಾಗುತ್ತಿದ್ದೆವು. ನೆರೆಮನೆಯ ಹುಡಗಿ ಕೂಡ ರಂಜಿತಾಳ ಗೆಳತಿಯಾಗಿದ್ದಳು. ಇವರ ಟ್ರೇನಿಂಗ್ ಮುಗಿಯಲು ಬಂದಿತ್ತು. ಮುಂದಿನವಾರ ಬೆಂಗಳೂರಿಗೆ ಹೊರಡುವ ಸಲುವಾಗಿ ಟಿಕೇಟ ಬುಕ್ ಮಾಡಲು ಗಿರೀಶನಿಗೆ ಹೇಳಿದ್ದೆ.ಹಂಗ ನೋಡಿದರ ಬೆಂಗಳೂರಿನಲ್ಲಿ ಸಿಗದ ವಸ್ತು ಯಾವುದೂ ಇಲ್ಲ..ಆದರೂ ತವರಮನಿಯಿಂದ ತಗೊಂಡು ಹೋಗುವ ಖುಶಿ ಬ್ಯಾರೆನ ಇರತದ. ಅತ್ಯಾ ಮಸಾಲಿ ಪುಡಿ, ಚಟ್ನಿಪುಡಿ ತಯಾರಿ ನಡಸಿದ್ದಳು. ರಂಜಿತಾ ಅಕಿ ಅಜ್ಜಗ ಕಾಡಿಬೇಡಿ ನೃಪತುಂಗ ಬೆಟ್ಟದ ಕಾರ್ಯಕ್ರಮ ಹಾಕಿದ್ದಳು. ಅವಳ ಗೆಳತಿ ನಾನು ಅಪ್ಪ ಎಲ್ಲಾರೂ ಸಂಜಿನ್ಯಾಗ ಗುಡ್ಡದ ಪ್ರಶಾಂತತೆಯಲ್ಲಿ ಕಳೆದುಹೋದೆವು. ಹುಡುಗಿಯರು ಆಟದಲ್ಲಿ ಲೀನರಾಗಿದ್ದರು. ಸೇಂಗಾ ಪುಡಿಕಿ ತಗೊಂಡು ಬಂದು ನಂಗೊಂದು ಕೊಟ್ಟು ಬಾಜು ಕೂತ ಅಪ್ಪ ಮಾತಿಗೆ ಸುರು ಮಾಡದ.

"ತುಳಸಾ ಮನ್ಯಾಗ ಏನೋ ಆದಂಗ ಅದ..ಸೊಸಿ ಮಾರಿ ಗಂಟಗಂಟ ಅದ.." ಅವನ ದನಿಯಲ್ಲಿ ಕಾಳಜಿ ಇತ್ತು.ಮುಚ್ಚಿಡುವಲ್ಲಲÀರಲ್ಲಿ ಯಾವ ಅರ್ಥವೂ ಕಾಣಲಿಲ್ಲ.ಎಲ್ಲಾ ಹೇಳಬೇಕು ಅತ್ಯಾಳ ಹುಚ್ಚಾಟಕ್ಕ ಒಂದು ಗತಿ ಕಾಣಸಬೇಕು ಅನಿಸಿತು. ಎಲ್ಲ ವಿವರವಾಗಿ ಹೇಳಿದೆ.ದನಿ ನಡಗುತ್ತಿತ್ತು. ಅಪ್ಪ ಎಂದಿನಂತೆ ಶಾಂತವಾಗಿದ್ದ.ಎಲ್ಲಾ ಕೇಳಿಸಿಕೊಂಡು ನಿಡಿದಾಗಿ ಕಾಲು ಚಾಚಿ ಕೂತ. ಅವನೊಳಗ ಉದ್ವೇಗದ ಯಾವ ಚಿಹ್ನಾನೂ ಇರಲಿಲ್ಲ.

"ಅತ್ಯಾ ಹಿಂಗ ಮಾಡೂದು ಸರಿ ಅನಸತದೇನು.." ನನ್ನ ಉದ್ವಿಗ್ನತೆ ಇನ್ನೂ ಶಾಂತವಾಗಿರಲಿಲ್ಲ.

"ಅದನ್ನ ನಿರ್ಧರಿಸೋದು ಹೆಂಗ ಇದು ಪ್ರಶ್ನಿ..ಅಕಿ ಮಾಡಿದ್ದು ನಿನಗ ಶುಭದಾಗ ಸರಿ ಅನಸೂದಿಲ್ಲ.ಖರೆ ಆದರ ಒಂದ ಸಲಾ ಅಕಿ ಜಾಗಾದಾಗ ನೀವನಿಂತು ನೋಡರಿ.ಅಕಿಗೆ ಏನೂ ತಪ್ಪಿಲ್ಲದನ ಶಿಕ್ಷಾ ಆಗೇದ.ನಿಮ್ಮವ್ವ ಅಂತೂ ಅಕಿ ತಲಿಬೋಳಸಲಿಕ್ಕೆ ನಿಂತಿದ್ದಳು. ಓಣಿಯ ಹಿರಿಯರು ಸಕೇಶಿನ್ನ ಹೆಂಗ ಮನಿಯೋಳಗ ಇಟಗೊಂಡಿರಿ ಅಂತ ಜಗಳಾ ಆಡಿದರು. ನನ್ನ ಅನೇಕ ಕಾರ್ಯಕ್ರಮಕ್ಕ ಕೂಡ ಕರೀಲಿಲ್ಲ ಪುರೋಹಿತಕಿಗೆ.ಆದರೂ ನಾ ಅಡ್ಡನಿಂತೆ.ಎಲ್ಲಾನೂ ಎದುರಿಸಿದೆ. ನಿಮ್ಮವ್ವ ಹ್ಯಾವಾ ಸಾಧಿಸಿದಳು.ಬೆನ್ನಿಗೆ ಬಿದ್ದ ತಂಗಿ ಕರುಳು ಕೊರೀತಿತ್ತು.ನಾ ಎಷ್ಟಸಲಾ ನಿಮ್ಮವ್ವನ ಜೋಡಿ ಜಗಳ ಆಡೇನಿ...." ಅವನ ದನಿಯಲ್ಲಿ ನೋವಿತ್ತು.
"ಬರೇ ಒಂದು ಬಂಗಾರದ ಸರಾ ..ತೂಕಾಮಾಡಿದರ ನನ ತಂಗಿ ಅದರ ನೂರಪಟ್ಟು ಮೂಲ್ಯವಾನ ಇದ್ದಳು. ಅವರು ಕುರುಡರು..ದುರಾಶಾಕ್ಕ ಬಿದ್ದರು.ಹೂವಿನ ಹಾಸಿಗಿ ಮ್ಯಾಲಕೂತಾಕಿ ಬಾಳತುಂಬ ಮುಳ್ಳ ಮುತಗೊಂಡವು.ನನ್ನ ಕಡೆ ರೊಕ್ಕ ಇರಲಿಲ್ಲ.. ಆ ರಾತ್ರಿ ನೆನಪಾದರ ಇನ್ನೂ ಎದಿ ನೋಯ್ತದ.." ಅಪ್ಪನ ದನಿ ಭಾರವಾಗಿತ್ತು.

"ಅಪ್ಪ ಆದ್ರ ಹಳೇಸಂಗತಿನ ನೆನೆಸಿಕೋತ ಕೂಡೂದು ಯಾವ ನ್ಯಾಯ..ಈಗ ಹಳಹಳಿ ಮಾಡಿಕೊಳ್ಳುವುದರಾಗ ಏನೂ ಉಪಯೋಗ ಇಲ್ಲ.ಪ್ರಶ್ನಿ ಇರೂದು ಅತ್ಯಾನ ಈಗಿನ ವರ್ತನಾದ ಬಗ್ಗೆ.ನೀವ ಹೇಳಿ ಶುಭದಾ ತನ್ನ ತವರುಮನಿಯವರಿಗೆ ಹೇಳಿದರ ಮರ್ಯಾದಿ ಹೋಗೋದು ಯಾರದು..? ಅತ್ಯಾಗ ನಿಂದು ಕಾಳಜಿ ಇಲ್ಲ.."

"ಮಂದಿ ಆಡಕೋತಾರ ಅಂತ ಅಂಜಿ ನಾವ ಏನೆಲ್ಲಾ ಮಾಡತೇವಿ..ಇದ ಮಂದಿ ಅಕಿ ಹಿಂದ ಹಂಗಸಿ ಮಾತಾಡಿದ್ರು ಗಂಡನ್ನ ನುಂಗಿದಾಕಿ ಅಂತ ಕರದರು.ಸಕೇಶಿಗೆ ಮನಿಯೊಳಗ ಇಟಗೊಂಡಾವ ಇವಾ ಎಂಥಹಾ ವೈದಿಕ ಬ್ರಾಹ್ಮಣ ಅಂತ ಜರದರು.ಯಾವ ವೇದದಾಗೂ ಪುರಾಣದಾಗೂ ವಿಧವಾ ಹಿಂಗಿರಬೇಕು ಅಂತ ಹೇಳಿಲ್ಲ..ನಾ ವಾದಾ ಹಾಕಿದೆ. ಸ್ವಲ್ಪದಿನ ನನ್ನ ಪುರೋಹಿತಕಿಗೆ ತ್ರಾಸು ಬಂತು. ಎಲ್ಲಾ ಬದಲಾತು ಎಲ್ಲದಕ್ಕೂ ವ್ಯಾಳ್ಯಾ ಬೇಕು.ನಿಮ್ಮವ್ವ ಸಾಯುಮುಂದ ಇಕಿ ಕೈಹಿಡದು ಅತ್ತಿದ್ದು ನೋಡಿದೆ. ತಪ್ಪು ಮಾಡಿದೆ ಅಂತ
ಹಲಬತಿದ್ದಳು...." ಅವನ ಮಾತಿನಲ್ಲಿ ಸತ್ಯ ಇತ್ತು. ಈ ಸಂಪ್ರದಾಯ ಎಲ್ಲಾ ನಾವು ಮಾಡಕೊಂಡು ಬಂದಿದ್ದು.ಇವು ಎಂದೂ ಸಮಾಜಮುಖಿ ಆಗಲಿಲ್ಲ. ರಂಜನಾ ಮತ್ತು ಅಕಿ ಗೆಳತಿಗೆ ಹಸಿವಾಗಿತ್ತು. ಅವರನ್ನ ಕರಕೊಂಡು ಭೇಲಪುರಿ ತಿನಿಸಿ ಬಂದೆ. ಅಪ್ಪ ಯಾರದೋ ಜೋಡಿ ಮಾತಾಡತಿದ್ದ. ಬಾಜು ಕೂತೆ. ಅವ ಮತ್ತ ಹೇಳಿದ.

" ಹಂಗ ಅಕಿ ಈಗ ಮಾಡಿದ್ದೆಲ್ಲ ಸರಿ ಅಂತ ನಾ ಅನ್ನೂದಿಲ್ಲ..ಆದರ ತುಳಸಾ ನೋಡು ಕೆಲವರಿಗೆ ಹಂಬಲ ಇರತಾವ ಕುತೂಹಲ ಇರತಾವ.ಹಸದವರಿಗೆ ಯಾವಾಗಲೂ ಮೃಷ್ಟಾನ್ನದ ಕನಸ ಬೀಳತಾವಂತ.ಹಂಗ ಇದು..ನಿಂಗ ಹೇಳತೇನಿ ಅಕಿ ಹಂಗ ಅವರ ರೂಮಿನ ಮುಂದೆ ಕತ್ತಲಿಯೊಳಗ ಹಣಿಕಿ ಹಾಕೂದನ್ನ ನಾನೂ ನೋಡೇನಿ..ನಾ ಚಕಾರ ಎತ್ತಲಿಲ್ಲ.ಇನ್ನೂತನ ಅಕಿ ಬ್ಯಾರೆ ಜಗತ್ತು ನೋಡಿಲ್ಲ..ಯಾರೂ ಅಕಿಗೆ ಬಾ ಅನ್ನುದಿಲ್ಲ ಹೋಗು ಅನ್ನೂದಿಲ್ಲ. ನಿಂಗ ಅಕಿ ಹೇಳಿದಂಗ ರಾತ್ರಿ ಆದರ ಸಾಕು ಪ್ರಲೋಭನಾ ತಡಕೊಳ್ಳಿಕ್ಕೆ ಆಗೂದಿಲ್ಲ ಅನ್ನೋದು ನನಗ ಸಹಜೀಕ ಅನಸತದ.." ಅಪ್ಪನ ದನಿಯಲ್ಲಿ ನಿರ್ಧಾರ ಇತ್ತು. ನಾ ಇನ್ನೂ ಗೊಂದಲದಲ್ಲಿದ್ದೆ.

"ನಾ ಅವಾಗ ಅಂದೆ ಅಕಿ ಜಾಗಾದಾಗ ನಿನ್ನ ಕಲ್ಪಿಸಿಕೊಂಡು ನೋಡು ಅಂತ.ನಾ ತಪ್ಪು ಮಾಡತೇನಿ ಅನ್ನೂದು ಅಕಿಗೆ ಗೊತ್ತದ..ಆದರ ಅಕಿ ವಾಂಛಾ ಅದಕ್ಕ ಅಡ್ಡಬರತದ.ಹಿಂಗಾಗಿ ಅಕಿಗೆ ಪ್ರಲೋಭನಾ ಗೆಲ್ಲೂದು ಆಗವಲ್ತು. ಅಕಿಗೆ ಈಗ ಅಂತಃಕರಣ ಬೇಕಾಗೇದ..ನಾಕು ಮಾತು ಒಳ್ಳೇದು ಕೇಳಬೇಕಾಗೇದ.ಒಂದು ಸಮಾಧಾನ ಅದ ಅಕಿ ಯಾವ ಅಡ್ಡ ಹಾದಿ ಹಿಡಿಲಿಲ್ಲ ಅಂತೇಳಿ.ಈ ಹುಚ್ಚಿನ ಮ್ಯಾಲ ಅಕಿ ಲಗೂ ಗೆಲುವು ಸಾಧಿಸಲಿ.ಇದ ದೇವರಿಗೆ ಬೇಡತೇನಿ..."

ಅಪ್ಪ ಭಾವುಕನಾಗಿದ್ದ. ಎಂದೂ ಹಿಂಗ ನೋಡಿರಲಿಲ್ಲ. ಶಲ್ಯದ ಚುಂಗಿಗೆ ಕಣ್ಣ ಒರೆಸಿಕೊಂಡ. ನಂಗೂ ನೀರಾಡಿತ್ತು.
---------------------------------------------------------
ನನಗ ಏನಾದರೂ ದ್ವಂದ್ವ ಕಾಡಿದಾಗ ಇವರಹತ್ತರ ಹೇಳಕೋತೇನಿ. ಇವರು ಸಮಾಧಾನದಿಂದ ಕೇಳಿ ಉತ್ತರ ಕೊಡತಾರ. ಇವತ್ತು ಹಂಗ ಆತು. ಅತ್ಯಾನ ಬಗ್ಗೆ, ಮನೆಯಲ್ಲಿ ನಡೆದ ರಗಳೆಯ ಬಗ್ಗೆ ಅಪ್ಪನ ಜೊತೆ ಆದ ಮಾತುಕತೆ ಬಗ್ಗೆ ಎಲ್ಲಾನೂ ಹೇಳಿದೆ. ಎಲ್ಲಾ ಕೇಳಿಸಿಕೊಂಡ ಇವರು ಒಂದು ಮಾತು ಅಂದರು.ಅತ್ಯಾಗ ಜೋಡಿ ಕರಕೊಂಡು ಬಾ ಅಂತ. ಬದಲಾವಣೆಯ ಮೊದಲ ಹೆಜ್ಜಿಗೆ ನಾವು ನೆರವಾಗೋಣು ಅಂತ. ಅಪ್ಪನ ಮುಂದ ಹೇಳಿದೆ.ಕೇಳಿ ಖುಷಿಪಟ್ಟ. ಅತ್ಯಾಗ ಅವನ ಕರದು ಹೇಳಿದ. ಅಕಿಮಾರಿ ಮ್ಯಾಲ ಇನ್ನೂ ಚಿಂತಿಗೆರಿ ಇದ್ದವು.ಅಕಿ ಹೆಗಲ ಮೇಲೆ ಕೈ ಹಾಕಿದೆ. ಅಕಿ ಕಣ್ಣತುಂಬಿ ಬಂದವು.ಸೆಳವಿನ ವಿರುಧ್ದ ಈಸಲು ಹಂಬಲಿಸುವ ಅವಳ ಜೋಡಿ ನಾನೂ ಕೈ ಜೋಡಿಸಿದ್ದೆ.
---------------
ಉಮೇಶ ದೇಸಾಯಿ

ಜನೇವರಿ-೨೦೧೫

2 comments:

  1. ನಿಮ್ಮ ಅನೇಕ ಕಥೆಗಳಲ್ಲಿ ತ್ರಸ್ತ ವ್ಯಕ್ತಿಯ ಮನಸ್ಸನ್ನು ತಿಳಿದುಕೊಳ್ಳುವ ಪ್ರಯತ್ನ ಇರುತ್ತದೆ. ಕಥೆಗಳ ನಿರೂಪಣೆ ಆತ್ಮೀಯವಾಗಿರುತ್ತದೆ. ಮನ ಕಲಕುವ ಪಂಚ್‍ಲೈನ್ ಇರುತ್ತದೆ. ಉದಾ:‘ಹೂವಿನ ಹಾಸಿಗಿ ಮ್ಯಾಲಕೂತಾಕಿ ಬಾಳತುಂಬ ಮುಳ್ಳ ಮುತಗೊಂಡವು.’
    ಇಂತಹ ಉತ್ತಮ ಕಥೆಯನ್ನು ಪ್ರಕಟಿಸದ ತುಷಾರದವರು ಹುಚ್ಚರೇ ಸರಿ!
    ಕಥೆಗಾಗಿ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

    ReplyDelete
  2. ಮಂಗಳ ಪರಿಕೆಗೆ ಅಭಿನಂದನೆಗಳು.
    ತಮ್ಮ ಕಥೆಗಳ ವೈಶಿಷ್ಟ್ಯವೆಮದರೆ ಅವು ನಿಜ ಜೀವನಕ್ಕೆ ಅತ್ಯಂತ ಸಮೀಪವೂ ಹಾಗೂ ಸಮಕಾಲೀನವೂ ಆಗಿರುತ್ತವೆ.
    ತಮ್ಮ ಭಾಷಾ ಬಳಕೆಯಿಮದ ನಮಗೂ ಆ ಕಡೆಯ ಪದಗಳ ಪರಿಕಯವೂ ಆಗುವಂತಿರುತ್ತದೆ.

    ಅತ್ಯಾನ ಬದುಕು ಹಾಸನಾದದ್ದು ನೆಮ್ಮದಿ ಕೊಟ್ಟಿತು.

    ReplyDelete