Thursday, July 21, 2011

ಹ್ಯಂಗ ಹೇಳಲಿ ಹೆಂಗ ಹೇಳಲಾರದ ಇರಲಿ...

ಕಂಬಾರರು ಬರೆದ ಹಾಡಿನ ಸಾಲು ಇದು.ಇದನ್ನು ಇಲ್ಲಿ ಉದಾಹರಿಸುವ
ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ಹಾಡು ಇದೆ..ನಿದಾಫಾಜಲಿ ಬರೆದಿದ್ದು
"ಕಭಿ ಕಿಸಿ ಕೊ ಮುಕಮ್ಮಿಲ್ ಜಹಾಂ ನಹೀ ಮಿಲತಾ
ಕಹೀ ಜಮೀನ್ ತೊ ಕಹಿ ಆಸಮಾ ನಹೀ ಮಿಲತಾ.." ತಾತ್ಪರ್ಯ ಇಷ್ಟೇ
ಯಾರಿಗೂ ಪರಿಪೂರ್ಣ ಅನ್ನುವ ವಸ್ತು ಸಿಗುವುದೇ ಇಲ್ಲ ಒಂದು ಹಂಬಲ
ಪೂರೈಸುವಾಗ ಇನ್ನೊಂದರ ತ್ಯಾಗ ನಾವು ಮಾಡಲೇಬೇಕಾಗುತ್ತದೆ....!!
ಪೀಠಿಕೆ ಕಿರಿಕಿರಿ ಅನಿಸಿತೇ ನನ್ನ ಸ್ಥಿತಿ ಹಾಗಿದೆ. ನಾ ಕನಸೊಂದು ಕಂಡಿದ್ದೆ
ಮಿತ್ರ ಶಿವು , ಹೆಗಡೇಜಿ. ಆಜಾದ್ ನೀರೆರೆದರು. ಅದು ಚಿಗಿಯಿತು. ನಮ್ಮೆಲ್ಲರ
ಸುನಾಥಕಾಕಾ ಮುನ್ನುಡಿ ಬರೆದು ಹರಸಿದರು ಹಿರಿಯ ಕವಿ ಈರಣ್ಣ ಇಟಗಿ
ಬೆನ್ನುಡಿ ಬರೆದು ಬೆನ್ನು ತಟ್ಟಿದರು. ಎಲ್ಲ ಮುಗೀತು ಅನ್ನುವಾಗ ಜುಲೈ೧೯ ರ
ನಾಟಕೀಯ ಘಟನೆಗಳು ದಿಕ್ಕು ಬದಲಿಸಿದವು. ವೃತ್ತಿ ಜೀವನ ತಿರುವು ಪಡೆದಿದೆ
ನನಗೆ ಬೇರೆ ಕಂಪನಿಯಲ್ಲಿ ಆಫರ್ ಬಂದಿದೆ .ಅದರ ನಿಮಿತ್ತ ಟ್ರೇನಿಂಗ್ ಗಾಗಿ
ಎರಡು ತಿಂಗಳ ವರೆಗೆ ಮಾರಿಷಸ್ ಗೆ ಹೋಗಬೇಕಾಗಿದೆ. ಹಾಗೂ ಆಗಸ್ಟ ೧ ಕ್ಕೆ
ಹೋಗಬೇಕಾಗಿದೆ. ನಾನೇ ಇಲ್ಲದೆ ನನ್ನ ಬುಕ್ಕು ಬಿಡುಗಡೆಯಾಗಬಹುದಿತ್ತು..
ಆದಕೆ ಕನಸೊಂದ ಪೋಷಿಸಿಕೊಂಡು ಬಂದು ಸಾಕಾರವಾಗುವ ಗಳಿಗೆಯಲಿ ನಾನಿಲ್ಲ
ಇದು ಯಾಕೋ ಸರಿ ಅನಿಸಲಿಲ್ಲ. ಹೀಗಾಗಿ ಶಿವು ಅವರ ಜೊತೆ ಮಾತಾಡಿದೆ
ಅವರು ಸಮ್ಮತಿಸಿದ್ದಾರೆ. ನನ್ನ "ಕನವರಿಕೆಗಳು" ಸದ್ಯ ವಿರಮಿಸಿವೆ. ಮುಂದೆ ಮತ್ತೆ
ಅವು ನಿಮ್ಮ ಕೈಯಲ್ಲಿ ನಲಿದಾಡಬಹುದು. ಆ ಕಾಲ ಬೇಗನೆ ಬರಲಿ ಎಂಬ ನನ್ನ
ಹಾರೈಕೆಯಲ್ಲಿ ನಿಮ್ಮ ದನಿಯೂ ಸೇರಲಿ.

ಗೆಳೆಯ ಮಂಜು ಹಾಗೂ ಸುಧೇಶ್ ಶೆಟ್ಟಿ ಅವರಿಗೆ ಅಭಿನಂದನೆ ಹೇಳುತ್ತಿರುವೆ.
ಹಾಗೆಯೇ ಶಿವು ಅವರಲ್ಲಿ ಕ್ಷಮೆ ಕೇಳುತ್ತಿರುವೆ..

Saturday, July 9, 2011

ಅವಳು..

ಅವಳು..
-------
ಅವಳು ದೂರಾದ ಸಂಜೆ
ಮಿಂಚಿನ ತಾಳಕ್ಕೆ ಹೆದರಿದ ಮೋಡ
ಅಳುತ್ತಿತ್ತು..

ಅವನಿಯ ಮೈ ತುಂಬ ಶಿಶಿರ ಹೊದಿಸಿದ್ದ
ತರಗೆಲೆಗಳ ಚಾದರ..
ಅವಳು ನಡೆದು ಹೋದಾಗ ಎಲೆಗಳ ಸಂಗ್
ನನ್ನ ಮನವೂ ಚೀತ್ಕರಿಸಿತ್ತು
ಎಲೆಗಳ ನರಳುವಿಕೆಯಲ್ಲಿ ನನ್ನ
ಆರ್ತನಾದ ಅವಳಿಗೆ ಕೇಳಲೇ ಇಲ್ಲ


ಹಗಲು ಅಂಗಳಕ್ಕಿಳಿದು ಸುಡುತ್ತಿತ್ತು
ಮಲಗಿದ್ದಳವಳು ನಿಶ್ಚಲವಾಗಿ..
ಸುಟ್ಟಾಗ ಅವಳ ಉಳಿದಿದ್ದು ಹಿಡಿ ಬೂದಿ..
ತುಂಗೆಯಲಿ ತೇಲಿಬಿಟ್ಟು
ಆಪೋಷನ ತಗೊಂಡೆ ನೀರು ಉಪ್ಪಾಗಿತ್ತು
ಬೆರೆತಿದ್ದ ಕಣ್ಣೀರು ನನ್ನದೋ ಅವಳದೋ
ತಿಳಿಯಲೇ ಇಲ್ಲ..

ವಾಡೆಯ ತೊಲೆಗೆ ತೂಗುಬಿಟ್ಟ
ಕಂದೀಲ ವದು
ನಿರರ್ಥಕ ಭಾವಗೀತೆ ಹೇಳಿತು..

೧೦/೦೭---- ೧೫ ಮಳೆಗಾಲ ಕಳೆದಿವೆ ನನ್ನ ಅವ್ವ ತೀರಿಹೋಗಿ.ಅವಳಿಗಾಗಿ ಬರೆದ ಸಾಲುಗಳಿವು..