Thursday, June 25, 2015

ಮಳಿ ಬರದ ಚಿತ್ರಗಳು..


ಆಯೇ ಕುಛ್ ಅಬ್ರ ಕುಛ್ ಶರಾಬ್ ಆಯೆ
ಉಸ್ ಕೆ ಬಾದ್ ಬಸ್ ಅಜಾಬ್ ಆಯೆ..(ಪೈಜ್ ಅಹ್ಮದ್ ಫೈಜ್)
ಅಬ್ ಕೆ ನಾ ಸಾವನ್ ಬರಸೆ..
ಅಬ್ ಕೆ ಬರಸ ತೋ ಬರಸೆಂಗಿ ಅಖಿಯಾಂ...(ಗುಲ್ಜಾರ್)

ಮಳಿ ಸೂಕ್ಷ್ಮ ಮನಸ್ಸಿನವರಿಗೆ ಹೆಂಗೆಲ್ಲ ಮಾಡಬಹುದು ಅಲ್ಲ..?ಅದೂ ಈ ಕವಿಜಾತಿಯವರ ಪಾಡು ಕೇಳೂದ ಬ್ಯಾಡ.
ಕಿಟಕಿ ಹೊರಗ ಮುಚ್ಚಿದ ಗ್ಲಾಸಿನೊಳಗಿಂದ ಹೊರಗ ಸುರಿಯು ಮಳಿ ಅದೆಷ್ಟು ಛಂದ ಕಾಣಸತಿರತದ..
ಹಂಗ ಟಪ್ ಟಪ್ ಬೀಳೂ ಹನಿ ಸಪ್ಪಳ ಕೇಳಕೋತ ಇಡೀ ರಾತ್ರಿ ಚಾದರ ಹೊತಕೊಂಡು ಕೂಡಬೇಕು ಅನಸತದ
ಕರೆಂಟು ಹೋಗಿ ಹಳೆ ಟ್ರಾನ್ಸಿಸ್ಟರ್ ದಾಗ ವಿವಿಧಭಾರತಿಯೊಳಗ ಮುಕೇಶನ ದರ್ದಭರಿ ಆವಾಜಿನ್ಯಾಗಿನ ಹಾಡು...
"ಸಾವನ್ ಕೆ ದಿನ್ ಆಯೆ ಬೀತಿ ಯಾದೆಂ ಲಾಯೇ ಕೌನ್ ಬಿಛಾಕರ್ ಆಂಖೆ ಮುಜಕೊ ಪಾಸ್ ಬಿಠಾಯೆ?...."
ಹೌದು ಕವಿ ಕೇಳುವ ಪ್ರಶ್ನಿ ಸ್ವರೂಪ ಅನಂತ ಅದ ಅಪಾರ ಅದ. ಯಾಕ ಮಳಿ ಸಪ್ಪಳದ ಜೊತಿ ಜೊತಿ
ಅಕಿ ನೆನಪಿನ ಬಿಕ್ಕಳಿಕಿ ಬರತದ. ನೀರ ಬೊಗಸ್ಯಾಗ ಹಿಡದು ಕುಡದರೂ ಬಾಯಾರಿಕಿ ಹೋಗೂದಿಲ್ಲ
ಅಸಲು ಮಳಿ ಜೋಡಿ ಕಣ್ಣು ಅಳತಿರತಾವ..ಕಣ್ಣಾಗ ಮಳಿ ನಟ್ಟಂಗ..ರಕ್ತದ ಬದಲಿಗೆ ನೀರ ಸುರಿತಾವ ಅಷ್ಟ...!
ಯಾಕ ಮಳಿ ಬಂದಾಗ ಹಾಡು ಬರತಾವ..ಕವಿತಾ ಹುಟ್ಟತಾವ. ಮಾಡ ಆವಿಯಾಗತದ ಕರಗಿ ನೀರಾಗತದ ಇದು
ಸಹಜ ಪ್ರಕ್ರಿಯಾ ಅಂತ ಒಣ ಮನಸ್ಸಿನ ವಿಜ್ನಾನಿ ಅನಬಹುದು ಕವಿ ಎಂದೂ ಹಿಂಗ ನಿರ್ವಿಕಾರದಿಂದ ಮಳಿ
ವರ್ಣಿಸಲಾರ...ಸಹಜೀಕ ಕ್ರಿಯಾದಾಗೂ ಅವ ಒಂದು ಲಯ ಕಾಣತಾನ ಮಾಡ ಗುಡಗೋದು ಗಾಳಿ ಬೀಸೋದು
ಎಲ್ಲಾದರಾಗೂ ಒಂದು ಕವಿತಾದ ಸಾಲು ಅವಗ ಹೊಳೀತಿರತದ. ಭೂಮಿಗೇನೋ ಹಸಿವು ತಿಂದು ತೇಗಿ ಕುಡೀತಾಳ
ಮುಳಿನೀರು ಕವಿಗೆ ಮಾತ್ರ ಒಂದು ನಮೂನಿ ರೋಗ ತಂದಿರತದ ಹಂಗ ಔಷಧನೂ..!!

ಶಹರದ ಮಂದಿ ನಾವು ಹಳ್ಳಿಮಕ್ಕಳ ಮಳಿ ಸಂಭ್ರಮದ ಸವಿ ಗೊತ್ತಿಲ್ಲ. ಇಲ್ಲೆ ಮಳಿ ಬಂದ್ರ ಶಪಿಸೋ ಜನ ಅಲ್ಲಿ
ಮಳಿ ಸುರೀತಿದ್ದರೂ ಕಂಬಳಿ ಹೊದ್ದು ಹೊಲಬಿತ್ತೋ ಜನ. ಎಷ್ಟು ವಿರೋಧಾಭಾಸ ಅದ ನೋಡರಿ.. ಸಾಲು ಸಾಲು
ಅಂಗಡಿಗಳು..ಶುಂಠಿ ಜಜ್ಜಿಹಾಕಿದ ಚಹಾಗಳು, ಭಜಿ ಮಿರಚಿಗಳು ಮಳಿಯ ತಂಪು ಮರೆಸಿ ನೆನೆದವರಿಗೆ ಬಿಸಿಮಾಡಿ
ಹೊಸಾ ಉಮೇದಿ ಕೊಡೋ ಶಹರದ ಈ ಚೈತನ್ಯಶಾಲೆಗಳು..!! ಇಂತಹವುಗಳ ತುಂಬ ಮುಗಿಬಿದ್ದ ಜನ..ಸೊರ್ ಅಂತ
ಸಪ್ಪಳ ಮಾಡಿ ಚಹಾ ಹೀರಿ ಮಳಿಮಜಾ ದುಪ್ಪಟ್ ತಗೊಳ್ಳೊ ಖಯಾಲಿನವರು. ಮಳೆನಿಂತು ಹೋದ ಮೇಲೆ ಅಂತ
ಕಾಯ್ಕಿಣಿ ಹಾಡ ಬರದಾರ. ಹೌದು ಮಳಿನಿಂತು ಹೋದಮೇಲೆ ಟ್ರಾಫಿಕ್ ಜಾಮ್ ಆಗತದ..ಅಂತ ಶಹರವಾಸಿ ಅದಕ್ಕ
ಸಾಲು ಜೋಡಿಸಿಯಾನು..! ರಸ್ತೆ ಬಾಜೂಕ ಸಾಲುಗಟ್ಟಿ ನಿಂತ ವಾಹನ ಸಿಕ್ಕ ಅಲ್ಪ ನೆರಳಲ್ಲೆ ನಿಂತು ಚಶ್ಮಾದ ಮ್ಯಾಲಿನ
ಹನಿ ಒರಿಸಿಗೋತ ನಿಂತಾವ ಅಥವಾ ತಲಿ ಮ್ಯಾಲಿಂದ ಕೆಳಗ ಸುರದು ಬರುವ ನೀರನ್ನು ಒರೆಸುವ ಭಗೀರಥರನ್ನು ನೀವು
ಕಂಡಿರಬಹುದು .ನೆನೆಯುವುದು ಅನಿವಾರ್ಯ ಅಂತ ಯಾರೂ ನಡಕೋತ ಹೋಗುವ ಧೈರ್ಯ ಮಾಡುವ ಮಂದಿ ಕಮಿ
ಪಾಪ ಅವರದೇನೂ ತಪ್ಪಿಲ್ಲ ರಸ್ತೆಗಿಂತ ತೆಗ್ಗೇ ಹೆಚ್ಚು ಊರಾಗ ಮಳಿ ಬಂದಾಗ ನೆಲ ಯಾವುದು ತೆಗ್ಗು ಯಾವುದು ಯಾರಿಗೆ
ಕಾಣಸತದ. ಹಂಗ ಶಹರ ಹುಟ್ಟಿಸೋ ವಿಪರ್ಯಾಸದ ಪರಿ ವಿಪರೀತ..ಆ ಅದ ಭಜಿ ಅಂಗಡಿ ಗರ್ದಿ ಅದಕಿಂತ ಸ್ವಲ್ಪ
ದೂರ ನಿಂತಾವನ ಬಾಯಾಗ ನೀರು ಆದರೇನು ಕಿಸೆ ರಿಕಾಮಿ..ಸುರಿಯೋ ಮಳಿ ಜೋರಿನ್ಯಾಗ ಮಿರಚಿ ಖಾರಕ್ಕ
ಲುಸುಗುಡುವ ಶಹರಿಕರಿಗೆ ಅವನ ಆಳು ಕಾಣೂದ ಇಲ್ಲ..ಅಸಲು ಮಳಿ ಅವನೊಬ್ಬನ ಕಣ್ಣಾಗಿಂದ ಸುರೀತಿರೋದಿಲ್ಲ
ಶಹರದಾಗ ಇವನಂತಹವರೆಷ್ಟೋ..!!

ಕಾಗದದ ಬೋಟ ಮಾಡಿ ಅದರಾಗ ಒಂದು ಮಳಿಹುಳ ಇಟ್ಟು ಅದನ ತೇಲಿಬಿಟ್ಟು ಸಂಭ್ರಮಿಸಿದ ಬಾಲ್ಯ ಈಗಿಲ್ಲ.
ಹೈಸ್ಕೂಲು ಮುಗಸಿ ಮನಿಗೆ ಬರುವಾಗ ಕೊಪ್ಪೀಕರ್ ರಸ್ತೆ ತುಂಬ ಹರಿಯುವ ನೀರಿನ ರಭಸನೋಡಿ ಅದರಕೂಟ ನಾವೂ
ಎಲ್ಲಿ ತೇಲಿ ಹೋಗತೇವೋ ಅನ್ನುವ ಹೆದರಿಕಿನೂ ಈಗಿಲ್ಲ. ಅಂಗಳದಾಗ ಹರನಾಳಿಗಿಯಿಂದ ಕೆಳಗಿಳಿದ ನೀರು ಅಂಗಳದ
ಮಣ್ಣು ತರತಿದ್ದ ವಿಚಿತ್ರ ಸುಗಂಧದ ವಾಸನಿನೂ ಈಗ ಉಳದಿಲ್ಲ. ಜೋರುಮಳಿಗೆ ಕ್ಯಾಂವಿಕಲ್ಲಿನ ಗ್ವಾಡಿ ಎಲ್ಲಿ ಬೀಳತದೋ
ಅನ್ನುವ ಅಂಜಿಕಿಯೊಳಗ ಕವುಚಿ ಮಲಗಿದ ರಾತ್ರಿ ಈಗ ಬರೆ ನೆನಪು ಮಾತ್ರ.ಹಂಗ ಸೋರುವ ನಡಮನಿ ನೀರ ಹಿಡಿಲಿಕ್ಕೆ ಇಟ್ಟ ಬಕೀಟು ಹನಿ ಹನಿ ಬಿದ್ದು ಅಲ್ಲಿ ಏಳುತ್ತಿದ್ದ ನಾದತರಂಗನೂ ಇಲ್ಲ. ರಸ್ತೆ ತುಂಬ ಕೆಸರು ಒದ್ದಿ ಹುಬ್ಬಳ್ಳಿ ನೆಲ..ಹಂಗ ಅಂಥಾಮಳಿಯಾಗ ರುಚಿ ದೀಡಪಟ್ಟ ಅನಸೋ ಭಿಲ್ಲೆನ ಅಂಗಡಿ ಮಿರಚಿ..ಉಫ್ ಎಲ್ಲಾನೂ ಅಲ್ಲೆ ಬಿಟಗೊಟ್ಟು ಬಾಲ್ಯದ ಮೈಲಿಗಲ್ಲ ದಾಟಿ ಬಂದಾತು.ಇನ್ನ ಯಾಕ ಹಳಹಳಿ..ಆ ಊರಿಗೆ ಹೋಗುವದಕ್ಕ ರಸ್ತೆನೂ ಇಲ್ಲ ಹಳೀನೂ ಇಲ್ಲ.ಬರೇ ನೆನಪು ಚೀಲತುಂಬ ತಂದದ್ದು.."ವೊಹ್ ಕಾಗಜ್ ಕಿ ಕಶ್ತಿ ವೊ ಬಾರಿಶ್ ಕಾ ಪಾನಿ...." ಕೇಳಕೋತ ಮರಗಿಕೋತ ಕಳಿಯುವ ಈ ಮಳಿಯ ರಾತ್ರಿಗಳು..!


4 comments:

  1. ‘ಆ ಊರಿಗೆ ಹೋಗೋದಕ್ಕ ರಸ್ತೇನೂ ಇಲ್ಲ, ಹಳೀನೂ ಇಲ್ಲ...’ ; ಬರೇ ಹಳವಂಡ ಅಷ್ಟ ಉಳದದ. ಆದರೂ ನಿಮ್ಮ ಲೇಖನ ಓದಿ, ನಂದೂ ನೆನಪಿನ ಗಂಟು ಬಿಚ್ಚಿತು. ಅದಕ್ಕಾಗಿ ನಾ ನಿಮಗ thanks ಹೇಳಬೇಕು, ದೇಸಾಯರ!

    ReplyDelete
  2. ಅಸಲು ನಗರಿಗರ ಪಾಲಿಗೆ ಮಳೆ ಎಂದರೆ, ರೈನ್ ಕೋಟ್, ಸಂಚಾರ ದಟ್ಟಣೆ ಮತ್ತು ನಗರ ಪಾಲಿಕೆಗೊಂದಿಷ್ಟು ಹಿಡಿ ಶಾಪ ಎನ್ನುವುದೇ ಆಗಿದೆ.
    ತಮ್ಮದೇ ಶೈಲಿಯ ಈ ಬರಹ ನಮ್ಮನ್ನು ಯಾವ ಯಾವುದೋ ಮರೆತ ಸವಿ ನೆನಪುಗಳತ್ತ ಸೆಳೆದೊಯ್ದಿತು.

    ಅಂದಹಾಗೆ, ಮಳೆ ಬರುವ ಹಾಗಿದೆ, ಮನವೀಗ ಹಾಡಿದೆ ಎನ್ನುವಂತಾಗಿ ಬಾ ಮಳೆಯೇ ಬಾ... ಅಷ್ಟು ಬಿರುಸಾಗಿ ಬಾರದಿರು ಎಂಬ ಬೇಡಿಕೆ ಮೂಡಿದೆ.

    ರಿಮ್ ರಿಮ್ ಗಿರೆ ಸಾವನ್
    ಸುಲಗ್ ಸುಲಗ್ ಜಾಯೇ ಮನ್
    ಭೀಗೆ ಆಜ್ ಇಸ ಮೌಸಮ್ ಮೇ
    ಲಗಿ ಕೈಸಿ ಏ ಅಗನ್...
    ಹಾಯ್ರೇ ಮೂನ್ ಮೂನ್...


    ReplyDelete
  3. ಮಳೆಯೊಟ್ಟಿಗಿನ ನೆನಪುಗಳನ್ನು ಹಾಗೂ ಚಿತ್ರಣಗಳನ್ನು ಚೆಂದಹೆ ಕಟ್ಟಿಕೊಟ್ಟಿದ್ದೀರಿ. ನಿಮ್ಮ ಬರಹ ಮನಸ್ಸಿಗೆ ನಾಟಿತು ದೇಸಾಯಿ ಅವ್ರ.

    ReplyDelete
  4. Kannada news live tv on mobile
    tv9 Public Kannada News Live - Android Apps on Google Play (https://play.google.com/store/apps/details?id=com.quick.kannadanew)

    ReplyDelete