ತಿರುಗಿ ನೋಡಿದಾಗ...
----------------------
೨೦೧೧ ಮುಗಿದಿದೆ..ಕ್ಯಾಲೆಂಡರ್ ಬದಲಾಗಿದೆ..೨೦೧೨ರ ದಿನಚರಿ ಸುರುಆಗಿದೆ ಹೀಗಿರುವಾಗ
ಈ ಹಿಂದೆ ತಿರುಗಿ ನೋಡುವ ಚಾಳಿ ಯಾಕೆ ನನಗೆ ಈ ಪ್ರಶ್ನೆ ನಿಮಗೆ ಮೂಡಿರಲು ಸಾಕು.
ಏನು ಮಾಡುವುದು ೨೦೧೧ ಅನೇಕ ಸಂಗತಿಗಳ ವರ್ಷ ಅವುಗಳಲ್ಲಿ ಸುಖ ದುಃಖಗಳ ಸಮ್ಮಿಶ್ರ.
ಇವು ಕೇವಲ ವೈಯುಕ್ತಿಕ ಮಾತ್ರವಲ್ಲ ದೇಶಪಾತಳಿಯ ಮೇಲೂ...ಹೌದು ೨೦೧೧ ಅನೇಕ
ದ್ವಂದ್ವಗಳ , ಚರ್ಚೆಗಳ, ಹೋರಾಟಗಳ ಉಪವಾಸಗಳ ವರ್ಷ.
ಸುರುಮಾಡಲಿರುವೆ ಸಾವು ಮತ್ತು ಅದರ ಪ್ರಸ್ತಾಪದೊಂದಿಗೆ ----
ಸಾವಿನ ಜೊತೆ ಮುಖಾಮುಖಿಯಾಗಿದ್ದು ಗೆಳೆಯ ರಮೇಶನ ಸಾವಿನಿಂದ. ಅವನ ವಯಸ್ಸಾದ
ತಂದೆ ನನ್ನಮುಂದೆ ಗಳಗಳನೇ ಅತ್ತಾಗ ನಾನು ಅಸಹಾಯಕನಾಗಿದ್ದೆ.ಮೌನ ಆಶ್ರಯಿಸಿದೆ.
ಮಾರಿಷಸ್ ನಲ್ಲಿದ್ದಾಗ ಬMದಿದ್ದು ಶಮ್ಮಿಕಪೂರ್ ನ ಸಾವಿನ ಸುದ್ದಿ. ಶಮ್ಮಿ ಹಿರೋಗಿರಿಗೆ ಹೊಸ
ಆಯಾಮ ಕೊಟ್ಟಾವ. ಅವನದೇ ಒಂದು ಹೊಸ ಸ್ಟೈಲು ಹುಟ್ಟುಹಾಕಿದವ. ಕಾಲೇಜಿನದಿನಗಳಲ್ಲಿ
ಅವನ ಚಿತ್ರಗಳನ್ನು ನೋಡಿದ ಮೆಲುಕು(ಹುಬ್ಬಳ್ಳಿಯಲ್ಲಿ ಹಳೇ ಸಿನೇಮಾ ತೋರಿಸುವ ಕೆಲ ಕಾಯಂ
ಚಿತ್ರಮಂದಿರಗಳಿದ್ದವು). ಶಮ್ಮಿ ಕುಣಿತ, ರಫಿಯ ಮಾದಕ ಹಿನ್ನೆಲೆ ದನಿ ಒಂದು "ಸಮಾ" ಅಲ್ಲಿತ್ತು.
ಅಕ್ಟೋಬರ್ ಸುಮಾರು ಬಂತು ಜಗಜಿತ್ ಸಿಂಗ್ ಸಾವಿನ ಸುದ್ದಿ. ಗಜಲ್ ಕಡೆ ನನ್ನ ಸೆಳೆದಿದ್ದು ಅವನ
ಗಂಭೀರ ದನಿ. ವೈಯುಕ್ತಿಕವಾಗಿ ಅನೇಕ ನೋವುಂಡರೂ ಗಜಲುಗಳ ಮಾಧುರ್ಯದಲ್ಲಿ ಯಾವ
ಕುಂದೂ ತರದಿದ್ದವ.ಮಾರಿಷಸ್ ಟಿವಿಯವರು ಅಲ್ಲಿಯ ಪ್ರತಿಭೆಗಳಿಂದ ಜಗಜಿತ್ ಸಿಂಗ್ ನ ಹಾಡುಗಳ,
ಗಜಲುಗಳ ಸುಧೆ ಉಣ್ಣಿಸಿದರು.ಒಬ್ಬ ಗಾಯಕ " ಚಿಟ್ಟಿ ನ ಕೋಯಿ ಸಂದೇಶ್ ನ ಜಾನೆ ಕೌನ್ ಸಾ ದೇಶ
ತುಮ್ ಚಲೆ ಗಯೇ...." ಅಂದಾಗ ನನ್ನಲ್ಲೂ ಈ ಪ್ರಶ್ನೆ ಎದ್ದಿತ್ತು. ಸಾವಿನ ಸರಪಳಿ ಕೊನೆಯಾಗಿದ್ದು
ದೇವ್ ಆನಂದ್ ನ ಸಾವಿನಿಂದ. ನಮ್ಮೂರಿನ ಗಣೇಶ್ ಟಾಕೀಸು.."ತೀನ್ ದೇವಿಯಾಂ" ಚಿತ್ರ.
ಗೊಂಜಾಳದ ತೆನೆ ತಿನ್ನುತ್ತ ತನ್ನದೇ ಶೈಲಿಯಲ್ಲಿ ಓಲಾಡುತ್ತ ದೇವ್ ಆನಂದ್ ಸೆಳೆದ. ನೇರವಾಗಿ
ಮನದಲ್ಲಿ ಇಳಿದ.."ಅಗರ್ ಇಸೆ ಸಮಜ್ ಸಕೋ ಮುಝೆ ಭೀ ಸಮಜಾನಾ.."ಅಂತ ಆಹ್ವಾನಾನೂ ಕೊಟ್ಟ.
ಅಂದಿನಿಂದ ನನ್ನ ಹಿರೋ ಆದ. ಅವ.
ವೈಯುಕ್ತಿಕವಾಗಿ ಅನೇಕ ಏರಿಳಿತಗಳ ವರ್ಷ. ಹೊಸ ಕೆಲಸ ಸಿಕ್ಕಿತು ಅನಾಯಾಸವಾಗಿ ವಿಮಾನ ಏರಿ
ಮಾರಿಷಸ್ ನಲ್ಲಿ ಮೂರುತಿಂಗಳ ವಾಸ.ನನ್ನ ಪುಸ್ತಕ ಪ್ರಕಟಣೆನೂ ಮುಂದೆ ಹೋತು ಇದರಿಂದ.
ಒಂದು ಪಡೆಯಲು ಇನ್ನೊಂದನು ಕಳೆದುಕೊಳ್ಲುವುದು ಸಹಜ ತಾನೇ.ಅಲ್ಲಿ ಮೂರು ತಿಂಗಳು ಈಗ
ಮತ್ತೆ ಮೈಸೂರಿನಲ್ಲಿ ೩ ತಿಂಗಳು..ವರ್ಷದ ಆರುತಿಂಗಳ ಬಲವMತದ ಬ್ರಹ್ಮಚಾರಿ ವೇಷ.ಕಷ್ಟ ಸ್ವಾಮಿ
ಕಷ್ಟ. ಓದಿದ್ದು ಬರೆದಿದ್ದು ತೀರ ಕಮ್ಮಿ. ಮೊದಲಬಾರಿ ಸಾಹಿತ್ಯಸ್ಫರ್ಧೆಗಾಗಿ ನನ್ನದೊಂದು ಕತೆ ಕಳುಹಿಸಿದ್ದೆ
ನನಗೇ ಅಚ್ಚರಿಯಾಗುವಂತೆ ಸಮಾಧಾನಕರ ಬಹುಮಾನ ಬMದಾಗ ಖುಷಿನೂ ಪಟ್ಟೆ.ಬ್ಲಾಗ್ ಈಗ
ಮೊದಲಿನಹಾಗಿಲ್ಲ ಯಾರೂ ಓದೋಲ್ಲ ಓದಿದೋರು ಕಾಮೆಂಟ್ ಹಾಕೋಲ್ಲ. ಬಹುಷಃ ಇದು ಎಲ್ಲರ ಕತೆ
ಇರಲಾರದು.
ಅಣ್ಣಾಹಜಾರೆ ಈ ಹೆಸರು ದೇಶದತುಂಬ ಪ್ರಭಾವ ಬೀರಿದ ವ್ಯಕ್ತಿ.ಜನ್ ಲೋಕಪಾಲ್ ಈ ಬೀಜಮಂತ್ರ
ದೇಶದತುಂಬ ಹರಡಿದ ವರ್ಷ. ಸಂಸತ್ತು ಮುಖ್ಯವೋ ಅಥವಾ ಈ ಥರದ ಆಂದೋಲನ ಮುಖ್ಯವೋ
ಇದು ಚರ್ಚೆಯವಿಷಯ ಆಗಿತ್ತು.ಜನಾಂದೋಲನ ಒಂದು ಪ್ರಮುಖ ನಡೆ ಸಂಸತ್ತು ಇದರ ನಿರ್ಣಯಗಳಿಗೆ
ತಲೆಬಾಗಬೇಕು ಇದು ಅಣ್ಣಾ ತರ್ಕ. ಕೊನೆಕೊನೆಗೆ ರಾಜಕೀಯ ಪಕ್ಷದವರು ಅಣ್ಣಾ ಜೊತೆ ವೇದಿಕೆ ಹಂಚಿಕೊಂಡು
ಲಾಭ ಗಿಟ್ಟಿಸಿಕೊಂಡರು.ಈಗ ಮೊದಲು ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವೆ ಎಂದ ಅಣ್ಣಾ ಹಿಂದೆ ಸರಿದಿದ್ದಾರೆ.
ಅವರ ನಡೆಯಲ್ಲಿ ದ್ವಂದ್ವಗಳಿವೆ. ಕಾದುನೋಡದೆ ಬೇರೆ ದಾರಿ ಇಲ್ಲ.
ಹೊಸವರ್ಷ ಹೊಸ ಆಸೆ ಮೂಡಿಸಿದೆ. ಹೆಗಡೇಜಿ ಪ್ರಸ್ತಾಪ ಇಟ್ಟಿದ್ದಾರೆ ಅದು ಆದರೆ ಪುಸ್ತಕ ಮತ್ತೆ ಹೊರ
ಬರಲಿದೆ. ನಾ ಒಂದೇ ರೆಸಲೂಶನ್ ಮಾಡಿಕೊಂಡಿರುವೆ.."ದೇಸಾಯರ ಅಂಬೋಣ" ಮತ್ತು "ವರ್ತಮಾನ"
ಗಳನ್ನು ತಿಂಗಳಿಗೊಮ್ಮೆಯಾದರೂ ನವೀಕರಿಸುವುದು ಹಾಗೂ ಪ್ರತಿಕ್ರಿಯಿಸುವ ಎಲ್ಲರಿಗೂ ಮರು ಪ್ರತಿಕ್ರಯಿಸುವುದು.
ಹೊಸ ವರ್ಷ ನಿಮಗೆಲ್ಲ ತರಲಿ ಹರ್ಷ....!!