Wednesday, June 27, 2012

ಅಂಕೇಗೌಡ್ರ ಅಂಗಳದಲಿ..


ಅಂಕೇಗೌಡ್ರ ಅಂಗಳದಲಿ..

--------------------------
"ಮಾನವ ನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ ಸಾಯೋತಂಕಾ ಸಂಸಾರದಲ್ಲಿ ಗಂಡಾಗುಂಡಿ.."
ಈಗ ಯಾರಾದರೂ ಮೇಲಿನಂತೆ ಕುಹಕ ಆಡಿದ್ರೆ ನಾ ಅಂಕೇಗೌಡ್ರನ್ನು ಕಂಡೆ ಅಂತ ಅಂದೇನು...!
ಕೆಲ ವ್ಯಕ್ತಿಗಳನ್ನು ಭೇಟಿಯಾದಾಗ , ಅವರ ಸಾಧನೆ ಕಣ್ಣಾರೆ ಕಂಡಾಗ ನಾವು ಬೆತ್ತಲಾದ ಅನುಭವ ವಾಗುತ್ತದೆ.
ನಮ್ಮ ಇಷ್ಟ ದೈವದ ಎದುರು ಕೈ ಮುಗಿದು ನಿಂತಾಗ ಉಂಟಾಗುವ ಭಾವ ಬೇರೆ.. ನಮ್ಮ ಹಾಗೆ ರಕ್ತಮಾಂಸ
ತುಂಬಿಕೊಂಡರೂ, ನಮಗಿಂತ ಒಂದು ಹಿಡಿ ತೂಕ ಛಲ, ಸಾಧಿಸುವ ಹಂಬಲ ಜಾಸ್ತಿ ತುಂಬಿಕೊಂಡವರನ್ನು
ಭೇಟಿಯಾದಾಗಲೂ ಈ ಭಾವ ಮೂಡುತ್ತದೆ... ಹೆಗಡೇಜಿ ಅಂಕೇಗೌಡ್ರ ಬಗ್ಗೆ ಪ್ರಸ್ತಾಪಿಸಿದಾಗ ಮೊದಲಿಗೆ
ಮನದಲ್ಲಿ ಮೂಡಿದ್ದು ಓರ್ವ ಸಾಧಾರಣ ಮನುಷ್ಯನ ಚಿತ್ರಣ, ಪುಸ್ತಕ ಸಂಗ್ರಹಕಾರ ಅನ್ನುವುದು. ಅಲ್ಪಸ್ವಲ್ಪ
ಉದಾಸೀನತೆಯಿಂದಲೇ ನಾ ಅವರನ್ನು ಭೇಟಿಯಾಗಲು ತಯಾರುಮಾಡಿಕೊಂಡೆ. ಅಂಕೇಗೌಡ್ರು ನೋಡಲು
ತೀರ ಸಾದಾ ವ್ಯಕ್ತಿ..ಇಷ್ಟೇಲ್ಲ ಸಾಧಿಸಿದರೂ ಸಮುದ್ರದ ಅಲೆ ಮುಂದೆ ನಿಂತ ವಿರಾಗಿಯ ಹಾಗೆ ಕಾಣುತ್ತಾರೆ..
ನಾ ಎಷ್ಟು ಕೊಟ್ಟೇನು..ನಿನ್ನ ಉಡಿಗೆ ಎಂಬ ವಿನೀತಭಾವ ಅವರಲ್ಲಿತ್ತು...ಅದು ನಿಜವೇ ನಾವೆಲ್ಲ ಸಮುದ್ರಕ್ಕೆ
ನಮ್ಮ ಬೊಗಸೆಯೊಳಗಿನ ನೀರು ಕೊಟ್ಟು ಏನೋ ದೊಡ್ಡ ದಾನಿಗಳಂತೆ ಪೋಸು ಕೊಟ್ಟವರು..!!
ಪುಸ್ತಕ ಸಂಗ್ರಹಣೆ ಈಗಿನ ಕಾಲದಲ್ಲಿ ಒಂಥರಾ ಹುಚ್ಚು ಹವ್ಯಾಸ.ಅದರಲ್ಲೂ ನವು ಕನ್ನಡದವ್ರು ಪುಸ್ತಕ ಕೊಂಡು
ಓದೋದು ಅಂದರೆ ಅದೊಂದು ದುಂದುವೆಚ್ಚ ಅಂತನೇ ತಿಳಿದವ್ರು..(ನಾನೂನು ಹಾಗೆಯೇ ಬಿಡ್ರಿ),ಇಂಥಾ ವಿಪರೀತ
ಸ್ಥಿತಿಯಲ್ಲಿ ಓರ್ವ ವ್ಯಕ್ತಿ ತನ್ನ ದುಡಿಮೆಯ ಬಹುಭಾಗ ಪುಸ್ತಕ ಸಂಗ್ರಹಣೆಗೆ ಮೀಸಲಿಟ್ಟುದುದು, ಆ ಹಂಬಲ ಪೂರೈಸಲು
ಆಸ್ತಿ ಮಾರಿದ್ದು,ಇವೆಲ್ಲ ವಿಚಿತ್ರ ಅನಿಸುತ್ತದೆ. ಆದ್ರೆ ಅಂಕೇಗೌಡ್ರು ಅಂತಹ ವಿಶಿಷ್ಟ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ.
ಅವರ ಪುಸ್ತಕ ಸಂಗ್ರಹಣೆಯಲ್ಲಿ ಏನುಂಟು ಏನಿಲ್ಲ..ಆಡು ಮುಟ್ಟದ ಸೊಪ್ಪಿಲ್ಲ ಅನ್ನುವುದಾದರೆ..ಅಂಕೇಗೌಡ್ರಬಳಿ
ಇರದ ಪುಸ್ತಕ ಇರಲಿಕ್ಕಿಲ್ಲ. ಬರೀ ಕನ್ನಡ ಮಾತ್ರವಲ್ಲ ಇಂಗ್ಲೀಷು, ಜರ್ಮನ್ ಭಾಷೇವು ಇದ್ವು. ಲೈಫ್ ಮ್ಯಾಗಜೀನು,
ಎನಸೈಕ್ಲೋಪಿಡಿಯ ಒಂದೇ ಎರಡೇ ..ನಾವು ಹುಟ್ಟುವ ಮೊದಲಿನ ಪುಸ್ತಕ/ಮ್ಯಾಗಜೀನ್ ಹಿಡಿದು ತೀರ ಇತ್ತೀಚೆಗಿನ
ಸಂಚಿಕೆ ಅಲ್ಲಿ ಕಂಡವು...


ಅವರ ಕೆಲಸ ಸುಲಭವಲ್ಲ. ಇನ್ನೂ ಪುಸ್ತಕಗಳ ಪಟ್ಟಿ ತಯಾರಿಸಿ ಒಪ್ಪವಾಗಿ ಜೋಡಿಸುವ ಕಾರ್ಯ ತುರ್ತಾಗಿ ಆಗಬೇಕಿದೆ
ಯಾವುದೋ ಸಂಸ್ಥೆ ಈ ಕೆಲಸ ಕೈಗೆತ್ತಿಕೊಂಡು ಸುರು ಮಾಡಿದೆ..ಆದರೆ ಕಾಲುಭಾಗದ ಪ್ರಗತಿನೂ ಇಲ್ಲ. ಮುಖ್ಯವಾಗಿ
ಈ ಕಾರ್ಯಕ್ಕೆ ಸಹಾಯಬೇಕು ಅಲ್ಲಿಯ ಲೋಕಲ್ ಧುರೀಣರು, ಎಂಎಲ್ಲೇಗಳು ಇಂಥಾ ಅಪರೂಪದ ಕೆಲಸಕ್ಕೆ ಮುಂದಾಗಬೆಕು
ಲೈಬ್ರರಿ ಸೈನ್ಸ ಓದುವ ವಿದ್ಯಾರ್ಥಿಗಳಿಗೆ ಇಲ್ಲಿಯ ಪುಸ್ತಕದ ಇಂಡೆಕ್ಸಿಂಗ್ ಕೆಲಸ ಪ್ರೊಜೆಕ್ಟ ಅಂತ ಕೊಡಬಹುದು.
ಬೆಂಗಳೂರು, ಮೈಸೂರಲ್ಲಿ ಅನೇಕ NGO ಇವೆ ಅವು ಈ ದೇಗುಲಕ್ಕೆ ಭೇಟಿಕೊಟ್ಟು ಇಲ್ಲಿಯ ಅಗತ್ಯ ಪೂರೈಸಬಹುದು.
ಅಂಕೇಗೌಡ್ರಿಗೆ ಬೆಂಬಲ ಬೇಕಾಗಿದೆ..ಅರಿತು ದುಡಿಯುವ ಕೈಗಳು ಬೇಕಾಗಿವೆ. ನಮ್ಮ ಕನ್ನಡ ವಿಶ್ವವಿದ್ಯಾಲಯದವರು,
ಸಾಹಿತ್ಯ ಪರಿಷತನವರು ಈ ಜಾಗೆಗೆ ಅವಶ್ಯವಾಗಿ ಭೇಟಿಕೊಡಬೇಕು. ಅಂಕೇಗೌಡ್ರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಇಂತಹ ಅಪರೂಪದ ವ್ಯಕ್ತಿ, ಅವರು ಸಂಗ್ರಹಿಸಿದ ಪುಸ್ತಕ ಭಂಡಾರ ನಮ್ಮ ನಡುವೆ ಇರುವುದೇ ಪುಣ್ಯ,










ಈ ರತ್ಣವನ್ನು ಪರಿಚಯಿಸಿದ ಬಾಲು ಸರ್ ಅವರಿಗೆ ಅನಂತ ಕೋಟಿ ವಂದನೆಗಳು.

10 comments:

  1. ಮೊದಲು ಟ್ರಿಪ್ಪಿಗೆ ಮಿಸ್ಸಾದ ನನ್ನನ್ನು ಕ್ಷಮಿಸಿಕೊಳ್ಳಿ.

    ಈ ಬರಹ ಹಲವರಿಗೆ ಮತ್ತು ನನಗೂ ಕಣ್ಣು ತೆರೆಸುವಂತದು. ಅಂಕೇಗೌಡರ ಪುಸ್ತಕ ಪ್ರೇಮ ನಮಗೆ ಮಾದರಿಯಾಗಲಿ.

    ಫೋಟೋಗ ಳುಅಮೋಘವಾಗಿವೆ.

    ReplyDelete
  2. ಇಂತಹ ಸಾಧಕರ ಬಗ್ಗೆ ಏನು ಹೇಳೋಣ!!?ಅವರ ಅಘಾದ ವ್ಯಕ್ತಿತ್ವ ನಮ್ಮ ನಿಲುಕಿಗೇ ಸಿಗುವುದಿಲ್ಲ.ಇಂತಹ ಪುಸ್ತಕ ರಾಶಿ,ಅದರ ಹಿಂದಿರುವ ಅವರ ಮತ್ತು ಅವರ ಮನೆಯವರ ಪರಿಶ್ರಮ,ಸಾಧನೆ,ಇವೆಲ್ಲವೂ ನಮ್ಮನ್ನು ಮೂಕ ವಿಸ್ಮಿತರಾಗಿಸುತ್ತದೆ.ನಮ್ಮ ಕರ್ನಾಟಕಕದಲ್ಲೇ ಇರುವ ಅದ್ಭುತಗಳಲ್ಲಿ ಅಂಕೇ ಗೌಡರೂ ಒಬ್ಬರು.ಅವರ ಪುಸ್ತಕ ಪ್ರೇಮ ಅಪರೂಪದ್ದು!೨೦೧೦ರಲ್ಲಿ ಬಾಲಣ್ಣನವರು ನಮ್ಮನ್ನು ಅಲ್ಲಿಗೆ ಕಳಿಸಿದಾಗ ದಂಗಾಗಿ ಹೋದೆ.ಅಂಕೆ ಗೌಡರು 'ಇದು ಯಾವುದೋ ಜನ್ಮದಲ್ಲಿ ಸರಸ್ವತಿ ನನಗೆ ನೀಡಿದ ಶಾಪ ಸರ್'ಎಂದಾಗ ನನ್ನ ಕಣ್ಣುಗಳು ತೇವವಾಗಿದ್ದವೂ.ಅವರು ಸಣ್ಣವರಿದ್ದಾಗ ಎರವಲು ಪಡೆದಿದ್ದ ಪುಸ್ತಕವೊಂದನ್ನು ಹಿಂದಿರುಗಿಸಲು ಸ್ವಲ್ಪ ತಡವಾದಾಗ ಹಿರಿಯರೊಬ್ಬರು 'ಪುಸ್ತಕವನ್ನು ಸರಿಯಾಗಿ ಹಿಂದಕ್ಕೆ ಕೊಡೋಕೆ ಆಗದಿದ್ದರೆ ಪುಸ್ತಕ ಯಾಕೆ ತೆಗೆದುಕೊಂಡುಹೋಗುತ್ತೀರಿ'ಎಂದಿದ್ದರಂತೆ.
    ಆ ಮಾತುಗಳು ಅವರನ್ನು ಪುಸ್ತಕ ಸಂಗ್ರಹಿಸಲು ಪ್ರೇರೇಪಿಸಿತಂತೆ!
    ಪ್ರತಿಯೊಬ್ಬರೂ ಜೀವನದಲ್ಲಿ ನೋಡಲೇ ಬೇಕಾದ ಸ್ಥಳ 'ಪುಸ್ತಕದ ಮನೆ'.ಇಂತಹ ಮಹತ್ ಕಾರ್ಯಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯನ್ನು ಸರ್ಕಾರ ಗೌರವಿಸಿ ಸೂಕ್ತ ಆರ್ಥಿಕ ಸಹಾಯ ನೀಡಲು ಮುಂದಾಗಿರುವುದು ಸಮಾಧಾನ ತಂದಿದೆ.ಆದಷ್ಟು ಬೇಗೆ ಅದು ಕಾರ್ಯ ರೂಪಕ್ಕೆ ಬರಲಿ.ಲೇಖನ ಮತ್ತು ಫೋಟೋಗಳು ತುಂಬಾ ಚೆನ್ನಾಗಿವೆ.ಧನ್ಯವಾದಗಳು.

    ReplyDelete
  3. ಉಮೇಶ್ ಸರ್,ಆಂಕೇಗೌಡರ ಪುಸ್ತಕಮನೆಗೆ ಬೇಟಿ ನೀಡಿದ ಅನುಭವವನ್ನು ನಿಮ್ಮದೇ ಶೈಲಿಯಲ್ಲಿ ಚೆನ್ನಾಗಿ ಬರೆದಿದ್ದೀರಿ...ಈ ಮೂಲಕ ಅನೇಕ ಬ್ಲಾಗರುಗಳನ್ನು ಬೇಟಿಯಾಗಿದ್ದು ನನಗಂತೂ ತುಂಬಾ ಖುಷಿ..ಬ್ಲಾಗಿಗರೆಲ್ಲಾ ಹೀಗೆ ಏನಾದರೂ ಒಂದು ಹೊಸತನ್ನು ಮಾಡುವತ್ತ...ಮುನ್ನುಗ್ಗೋಣ..

    ReplyDelete
  4. Thanks for giving such a good information :)

    ReplyDelete
  5. ಉಮೇಶ್ ಸರ್.. ಅಂಕೆಗೌಡ್ರ ಅಂಗಳದಲ್ಲಿ ಅವರ ಪುಸ್ತಕ ಕುಸುಮಗಳು ಚೆನ್ನಾಗಿಯೇ ಅರಳಿವೆ. ಬಹಳ ಖುಷಿ ಇಂತಹವರು ನಮ್ಮೊಂದಿಗಿರುವುದು

    ReplyDelete
  6. ಉಮೇಶ್ ಸರ್,

    ಎಲ್ಲರ ಲೇಖನಗಳನ್ನು ಓದಿ ನನಗೆ ಹೊಟ್ಟೆ ಉರಿ ಆಗ್ತಾ ಇದೆ....ಇಷ್ಟೊಂದು ಸುಂದರ ತಾಣವನ್ನು ಭೇಟಿಕೊಡುವ ಅವಕಾಶ ತಪ್ಪಿಸಿಕೊಂಡಿದ್ದಕ್ಕೆ ದುಃಖವಾಗ್ತಾ ಇದೆ...ಸುಂದರ ಚಿತ್ರಗಳನ್ನೊಳಗೊಂಡ ಉತ್ತಮ ಲೇಖನ...ಧನ್ಯವಾದಗಳು...

    ReplyDelete
  7. ಉಮೇಶ್ ಸರ್ ನಿಮ್ಮ ಅರ್ಥಪೂರ್ಣ ಲೇಖನ ಸುಂದರವಾಗಿ ಮೂಡಿಬಂದಿದೆ.ಭಾಗವಹಿಸಿದ ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಜೈ ಹೋ ಸರ್
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  8. ಇಂತಹ ಪುಸ್ತಕಪ್ರೇಮಿಗೆ, ಜ್ಞಾನದಾನಿಗೆ ಶತಕೋಟಿ ಪ್ರಣಾಮಗಳು. ನಿಮಗೆ ಧನ್ಯವಾದಗಳು.

    ReplyDelete
  9. ದೇಸಾಯಿ ಸರ್..ನಿಮ್ಮ ಲೇಖನ..ಎರಡು ಕಣ್ಣನ್ನು ಜೋರಾಗಿ ತೆರೆಸುತ್ತದೆ...ಇಂತಹ ಒಬ್ಬರ ಕಾಲದಲ್ಲಿ ನಾವು ಜನಿಸಿರುವು ನಮ್ಮ ಪುಣ್ಯವೇ ಸರಿ..
    ಇದು ಒಂದು ಪುಸ್ತಕದ ಲೋಕ, ದೇಗುಲ, ಪ್ರಪಂಚ, ಕಡಲು..ಏನಾದರು ಕರೆಯಬಹುದು...ತುಂಬಾ ಅಮೋಘ ಲೇಖನ, ಹಾಗು ನಿಮ್ಮ ಸಲಹೆಗಳನ್ನು ಸರಕಾರದ ಮುಂದೆ ಹಿಡಿದು ಕಾರ್ಯ ಸಾಧಿಸುವ ಮಂದಿ ಬೇಕಾಗಿದ್ದರೆ..
    ಧನ್ಯವಾದಗಳು

    ReplyDelete
  10. ಸಾಧಕರ ಬಗ್ಗೆ ಸುಂದರ ಮಾತುಗಳು ಸರ್

    ReplyDelete