
ಇದೇನು ನಾ ಯಯಾತಿತಾದೆನೆ ಅಂದುಕೊಬೇಡಿ ..ಹಾಗೆ ನೋಡಿದ್ರೆ ನಮ್ಮೆಲ್ಲರ ಮನದಲ್ಲಿ
ಆ ಹಂಬಲ ಇದ್ದೇ ಇದೆ ನನ್ನಂತಹ ಭಂಡರು ಅದನ್ನು ನಾಚಿಕೆಯಿಲ್ಲದೆ ಹೊರಹಾಕುತ್ತೇವೆ ಇನ್ನುಳಿದವರು ಆ ಚಪಲಗಳಿಗೆ ವೈರಾಗ್ಯದ
ಮುಸುಕು ಹಾಕಿರುತ್ತಾರೆ.ಸಾಹಿರ್ ಬರೆದ ಹಾಡಿನ ಸಾಲೊಂದಿದೆ " ಯೇ ಭೋಗ್ ಭಿ ಏಕ್ ತಪಸ್ಯಾ ಹೈ ತುಮ್ ತ್ಯಾಗ್ ಕೆ ಮಾರೆ
ಕ್ಯಾ ಜಾನೋ ..." ನಿಜ ಅಲ್ಲವೇ ಭೋಗವನ್ನೇ ಒಂದು ತಪಸ್ಸಾಗಿ ಸಿದ್ಧಿಸಿಕೊಂಡರೆ ಹೇಗೆ.... ಯಯಾತಿ ಮಾಡಿದ್ದು ಇದನ್ನೇ.
ಮೇಲಿನ ಪೀಠಿಕೆ ಯಾಕೆ ಅಂದ್ರೆ ನನ್ನ ಹಾಗೂ ಅಂಜಲಿಯ ದಾಂಪತ್ಯಕ್ಕೀಗ ಹದಿನಾರರ
ಹರೆಯ. ಹದಿನಾರು ಈ ವಯಸ್ಸು ಅನೇಕ ಆಸೆಗಳ ,ಬಣ್ಣಗಳ ಕನಸು ಕೊಡುವ ವಯಸ್ಸು ..ಆ ವಯಸ್ಸು ಮುಟ್ಟಿದವರಿಗೆ.....!
ಕಪ್ಪು ಕೂದಲ ನಡುವೆ ಅಲ್ಲಲ್ಲಿ ಇಣುಕೋ ಬಿಳಿಗೂದಲಿಗೆ ಡೈ ಹಚ್ಚುತ್ತ.., ಬಿಎಮ್ ಟಿಸಿಯಲ್ಲಿ ಜೋತಾಡುತ್ತಲೇ ಈ ಬೆಂಗಳೂರಿನಲ್ಲಿ ಸೈಟಿನ ಬಗ್ಗೆ ಕನಸಿಸುತ್ತ ಅಥವಾ ಮಗಳ ಅಭ್ಯಾಸದ ಬಗ್ಗೆ ತಲೆ ಚಚ್ಚಿಕೊಳ್ಳುತ್ತಲೋ, ಮತ್ತೆ ಎಲ್ಲೋ ನೋಡಿದ
ಬಳೆ ಪ್ಯಾಟರ್ನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ ದಿನ ಕಳೆಯೋ ನಮ್ಮಂಥವರಿಗೂ ಹದಿನಾರು ತುಂಬಿದೆ ... ಹೌದು ಈ ನಿಟ್ಟಿನಲ್ಲಿ
ಹೊಸ ಜಾಡು ಹಿಡಿಯಬೇಕಾಗಿದೆ..ಮತ್ತೆ ಬಾಳಿನ ಕ್ಯಾನವಾಸನಲ್ಲಿ ಬಣ್ಣ ತುಂಬಬೇಕಾಗಿದೆ.... ಈ ಹದಿನಾರರ ಹರೆಯಕ್ಕೆ
ಹೊಸಾ ಅರ್ಥ ಕೊಡಬೇಕಾಗಿದೆ. ಸಿಟ್ಟು ಸೆಡವು ಮೂಲೆಯ ಟ್ರಂಕಿನಲ್ಲಿ ಮುಚ್ಚಿಟ್ಟು ಮನೆ ಬಾಗಿಲಿಗೆ ಹೊಸ ಆಸೆಗಳ ತೋರಣ
ಕಟ್ಟುವುದಿದೆ. ಎಷ್ಟೊಂದು ಕೆಲಸಗಳಿವೆ.....
ಜಗಜಿತ್ ಸಿಂಗ್- ಚಿತ್ರಾ ಸಿಂಗ್ ಹಾಡಿದ ಗಜಲಿನ ಸಾಲು ಹೀಗಿದೆ....
उस मॊड से शुरू करॆ फिर से ए जिंदगि..
हर शय जहां हसीन थि हम तुम थे अजनबि...
ನಿಮ್ಮ ಹಾರೈಕೆ ಇದ್ದೇ ಇದೆ ಅಲ್ಲವೇ....
೧೫/೦೨/೨೦೧೦....