Sunday, April 25, 2010

ಮಧು....ಮಧು..ಮತ್ತೆ ಮಧು...


೧) ವಿಚಿತ್ರ ದೃಶ್ಯವಿತ್ತಲ್ಲಿ...
ಮಧು ಇರಲಿಲ್ಲ..ಗಿಲಾಸಿಲ್ಲ..
ಆದರೂ ನಾ ಕುಡಿಯುತ್ತಿದ್ದೆ....
ನನ್ನ ಮುಂದೆ ನೀನಿದ್ದೆಯಲ್ಲ......!

೨) ನೊಂದ ಹೃದಯಗಳಿಗೆ
ಮಧುವೊಂದೆ ಸಾಲದು..
ಮಧುಶಾಲೆಯಲಿ..
ನಿನ್ನ ನಗೆಯ ಬೆಳಕೂ ಬೇಕು ಸಖಿ...!

೩) ಗುಡಿ ಗುಂಡಾರಗಳಲಿ
ಮಸೀದಿ ಮಠಗಳಲಿ...
ಶಾಂತಿ ಸಿಗುವಂತಿದ್ದರೆ....ಈ
ಮಧುಶಾಲೆಗೇಕೆ ಜನ
ಬರುತಿದ್ದರು.....?

೪) ವಿಪ್ಲವವದು..ಮಧು
ಬಟ್ಟಲಲಿ ತುಳುಕಿತೇಕೆ..
ಮಧು ಶಾಲೆಯಲೂ ನಿನ್ನ
ನೆನಪು ಬೆಂಬಿಡದೇಕೆ....?

೫) ಜಗದರಿವ ಮರೆಸುವ ಮಧು
ಬೇಡೆನಗೆ ಸಖಿ...
ಉಣ್ಣಿಸು ಮಧುವೊಂದ...
ಮನದಾಳದಿ ಇಳಿದ ಅವಳ
ನೆನಪು ಕೆದುಕುವಂತಹುದ.....!

೬) ನಾನಿಲ್ಲವಾದಾಗ ನನ್ನ ಗೋರಿ ಬಳಿ
ಬಂದು ಕಣ್ಣೀರಿಡಬೇಡ...
ಬರುವಿಯಾದರೆ ಮಧು ಬಟ್ಟಲ ತಾ
ಜೊತೆಗೆ...
ನರಕದಲಿ ಅದು
ಸಿಗುವುದಿಲ್ಲ.....!

Wednesday, April 7, 2010

ಮೊದಲ ತೊದಲು.....

ನಾ ಇಲ್ಲಿ ಬರೆದಿರುವ ಕವಿತೆಗಗೆ ಒಂದು ಇತಿಹಾಸವಿದೆ. ಇದು ನನ್ನ
ಪ್ರಥಮ ಪ್ರಕಟಿತ ಕವಿತೆ. ಗದಗಿನ ಮಿತ್ರರೊಬ್ಬರಿದ್ರು ಎ. ಜಿ. ಮಹಾಲ್ದಾರ್ ಅಂತ. ೧೯೯೦ರಲ್ಲಿ " ಸ್ನೇಹ ತರಂಗ" ಅನ್ನೋ
ಕವಿತೆಯ ಸಂಕಲನ ತಂದಿದ್ರು. ನನ್ನ ಹಾಗೆ ಅನೇಕ ಮರಿಕವಿಗಳ ಕವಿತೆ ಅದರಲ್ಲಿದ್ದವು. ಹಾಂ ಈ ಸಂಕಲನಕ್ಕೆ ನಾವೇನೂ
ಧನ ಸಹಾಯ ಮಾಡಿರಲಿಲ್ಲ. ಮಹಾಲದಾರ ತಮ್ಮ ದುಡ್ಡು ಹಾಕಿ ತಂದರು. ನನಗೆ ಮೊದಲದಾರಿ ತೆರೆದ ಮಹಾಲದಾರರಿಗೆ
ದೇವರು ಆಯುರಾರೋಗ್ಯ ನೀಡಲಿ. ಈಗ ಅವರ ಸಂಪರ್ಕ ಇಲ್ಲ...ಅವರು ಎಲ್ಲಿದ್ದರೂ ಚೆನ್ನಾಗಿರಲಿ..

೧) ಸಾರಾಂಶ
-----------

ಉಷೆ ಹೊಂಬಣ್ಣದ ಓಕುಳಿ
ಭುವಿ ಮೇಲೆಲ್ಲ ಚೆಲ್ಲಾಡಿದಾಗ
ಬಂದ ಸೂರ್ಯ ನನ್ನ ಕಂಡು
ಮುಗುಳ್ನಕ್ಕ....
ಆತನ ಕೆಂಪುಮೊಗದಲ್ಲಿ ನನ್ನ
ಅನೇಕ ಕನಸುಗಳ ಪ್ರತಿಬಿಂಬ
ಕಂಡೆ.... ಮುಂಜಾವು ಹಲವು
ಕದ ತೆರೆದಿತ್ತು ಬಾಳಿಗೆ
ಸೂರ್ಯ ಆಶ್ವಾಸನೆಯ ನಗೆ
ಬೀರುತಿದ್ದ.....

ಯಾಮಿನಿ ಹೊಸಲ ಹಿಂದೆ
ಚಡಪಡಿಸುತ ನಿಂತಿದ್ದಳು....
ಬಂದ ಸೂರ್ಯ ಕುಂದಿದ್ದ...
ಸೊರಗಿದ್ದ...
ಆತನ ಮುಖದ ಕೆಂಪಲ್ಲಿ ನನ್ನ
ಅನೇಕ ಕನಸುಗಳ ಬೆಂದ ವಾಸನೆ
ನಗು ತೇಲಿತು ಮುಖದಲ್ಲಿ.....
ಜೀವನವಿದು ಮುಂಜಾನೆಯ
ಕೆಂಪಂತೆ ಸ್ಫಟಿಕವೂ ಹೌದು...
ಸಂಜೆಗೆಂಪಂತೆ ನೀರಸವೂ ಅಹುದುstyle="font-weight:bold;">