

" ಯಾ ದಿಲ್ ಕಿ ಸುನೊ ದುನಿಯಾವಾಲೊಂ....."
ಈ ಹಾಡು ನನ್ನನ್ನು ಯಾವಾಗಲೂ ಕಾಡುತ್ತದೆ ಕಾರಣ ಇದೇ ಅಂತ ಹೇಳೋ ಹಾಗಿಲ್ಲ ಹಲವುಸಂಗತಿಗಳಿವೆ ಒಂದು ಉತ್ತಮ ಚಿತ್ರ---ಅನುಪಮಾ----ಹೆಸರಿಗೆ ತಕ್ಕಂತೆ ಉಪಮೆ ಮೀರಿದ್ದು. ಮನ ಕಲಕುವ
ಸಾಹಿತ್ಯ---ಕೈಫಿ ಅಜ್ಮಿ ದು----ಆಳ ಆದರೆ ಅಷ್ಟೇ ನಿರ್ವಿಕಾರವಾದ ದನಿಯ ಒಡೆಯ ಹೇಮಂತಕುಮಾರ್ ಗಾಯನ---
ಕುಂದಣವಿಟ್ಟಂತೆ ಹೇಮಂತದಾ ನದೇ ಸಂಗೀತ.
ಹೃಷಿಕೇಶ್ ಮುಖರ್ಜಿ ಹಿಂದಿಚಿತ್ರರಂಗದ ಸಂವೇದನಾಶೀಲ ನಿರ್ದೇಶಕ. ಹೆಣ್ಣು ಹಾಗೂ ಅವಳ ಭಾವ
ಲೋಕ ಅವರು ಚಿತ್ರಿಸಿದ ರೀತಿ ಅನನ್ಯ. ಅದು ಅನಾಡಿ ಚಿತ್ರದ ಮಿಸೆಸ್ ಡೀಸಾ ಆಗಿರಬಹುದು, ಅಥವಾ ಅನುಪಮ ಚಿತ್ರದ ಅನುಪಮಾಳ ಪಾತ್ರ ಆಗಿರಬಹುದು ಹೃಶಿದಾನ ಕುಸುರಿತನ ಹೊಳೆಯುತ್ತದೆ. ಸಂವೇದನೆ ಅವನ ಚಿತ್ರದ ಜೀವಾಳ ಆಗಿದ್ವು
೭೦ ರ ದಶಕದಲ್ಲಿ ಕಾಮೆಡಿ ಚಿತ್ರದತ್ತ ಅದ್ಯಾಕೆ ಹೊರಳಿದರೋ ಗೊತ್ತಿಲ್ಲ. ಅನುಪಮ ಒಂದು ನಿಷ್ಪಾಪ ಹುಡುಗಿಯ ಕತೆ ಅವಳನ್ನು
ಹೆತ್ತು ಅವಳ ತಾಯಿ ಪ್ರಾಣಬಿಡುತ್ತಾಳೆ. ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪನಿಗೆ ಮಗಳನ್ನು ಕಂಡರೆ ಆಗೊಲ್ಲ...ಒಂಥರಾ
ಮುರುಟಿಕೊಂಡೇ ಬೆಳೆಯುತ್ತಾಳೆ ಅವಳ ಬಾಳಲ್ಲಿ ಯುವಕನ ಪ್ರವೇಶ ಅವಳ ನೋವಿಗೆ ಅವ ಸ್ಪಂದಿಸುತ್ತಾನೆ. ಕಪ್ಪು ಬಿಳುಪು ಚಿತ್ರ
ಆದರೂ ಮನದ ತುಂಬ ಅನೇಕ ಬಣ್ಣಗಳ ಚಿತ್ತಾರ ಬಿಡಿಸುತ್ತದೆ ಈ ಚಿತ್ರ. ಮುಖ್ಯಪಾತ್ರಗಳಲ್ಲಿ ಶರ್ಮಿಲಾ ಹಾಗೂ ಧರ್ಮೇಂದ್ರ
ಇದ್ದರು . ಧರಮ್ ಮಾಡಿದ ಚಿತ್ರಗಳಲ್ಲಿ ಅನುಪಮಾ ಪಾತ್ರದ ಬಗ್ಗೆ ಅವನಿಗೆ ಸ್ವತಃ ಅಭಿಮಾನವಿದೆ ಅವ ನೀಡಿದ ಸಂದರ್ಶನಗಳಲ್ಲಿ ಈ ಬಗ್ಗೆ ಅವನೇ ಹೇಳಿಕೊಂಡಿದ್ದಾನೆ...
ಇನ್ನು ಹಾಡಿನ ಬಗ್ಗೆ...ಈ ಹಾಡಿನ ತುಂಬ ಪ್ರಶ್ನೆಗಳಿವೆ ಉತ್ತರ ಬಯಸುತ್ತವೆ ಆದರೆ ಅವು ಒಂಥರಾ ನಿರುತ್ತರ ಪ್ರಶ್ನೆಗಳು. ಇಲ್ಲಿ
ಪ್ರತಿಭಟನೆ ಇದೆ ಸುತ್ತಲಿನ ಅನ್ಯಾಯದ ಬಗ್ಗೆ ಜಿಗುಪ್ಸೆ ಇದೆ ಆದರೆ ಹಾಡಿನಲ್ಲಿ ಆಕ್ರೋಶದ ಸುಳಿವಿಲ್ಲ ಬದಲು ತಣ್ಣಗೆಕೊರೆಯುವ
ಮಂಜುಗಡ್ಡೆ ಇದೆ ಇದು ನಮ್ಮ ಅಂತರಾಳವನ್ನು ಕೆದಕುತ್ತದೆ ...ಸಂಗೀತ ಸಂಯೋಜನೆಯೂ ಹಾಗೆ.. ಅದನ್ನು ಮೀರಿದ ನಿರಾಕಾರ ಹಾಗೂ ನಿರ್ವಿಕಾರದ ಧ್ವನಿ ಹೇಮಂತ್ ದಾನದು.ಈ ಹಾಡು ಅವನೊಬ್ಬನೇ ಹಾಡಬಹುದಾಗಿತ್ತು ಇದರಲ್ಲಡಗಿದ ನೋವಿಗೆ ಅವನ ಶೀತಲದನಿಯೇ ನ್ಯಾಯ ಕೊಟ್ಟಿತ್ತು ಅಂದರೆ ತಪ್ಪಲ್ಲ.
या दिल कि सुनॊ दुनियावालॊं
या मुझ्को अभी चुप रेहने दो
मै गम को खुशि कैसे केहदुं
जो केहते है उनको केहने दो...
ಸುತ್ತಲಿನ ಬಣ್ಣದ ಭ್ರಮೆಯ ಬದುಕಿನ ಬಗೆ ನೋಡಿ ನಾವೆಲ್ಲ ಖುಷಿಯಾಗಿದ್ದೇವೆ ಅಂತ ಅಂದುಕೊಂಡು ಜೀವನ ಸಾಗಿಸುತ್ತೇವೆ
ಮುಖವಾಡ ಹಾಕಿ ನಲಿಯುತ್ತೇವೆ..ಈ ಬದುಕಿನ ನಾಟಕದಲ್ಲಿ ಪಾತ್ರ ವಹಿಸುತ್ತೇವೆ...ಆದರೆ ನಿಜಕ್ಕೂ ನಾವು ಖುಷಿಯಾಗಿದ್ದೇವೆಯೇ ನಾವು ವಾಸ್ತವವನ್ನು ಕವಿ ಒಪ್ಪಿಕೊಂಡ ರೀತಿ ಒಪ್ಪಿಕೊಂಡಿಲ್ಲವೇಕೆ...?
ये फूल चमन मे कैसा खिला
मालि की नजर मे प्यार नही
हसते हुये क्याक्या देखलिया
अब बेहते है आंसु..बेहने दो....
ಹೂ ಮತ್ತು ಮಾಲಿ ನಡುವೆ ಪ್ರೀತಿ ಇರಬೇಕು ಹೂ ಅರಳಿ ನಗುವುದರ ಹಿಂದೆ ಮಾಲಿಯ ಪರಿಶ್ರಮಇದೆ ಆದರೆಕೆಲವು ಹೂ ಗಳು
ಆ ಪ್ರೀತಿಯಿಂದ ವಂಚಿತರಾಗಿಯೂ ಇವೆ.ಸುತ್ತಲಿನ ಜಗತ್ತನ್ನು ನಕ್ಕು ನೋಡಿ ಸಾಕಾಗಿ ಕವಿಯಕಣ್ಣಲ್ಲಿ ನೀರಿದೆ ಅದರಬಗ್ಗೆ ಅವನಿಗೆ
ನಿರ್ಲಿಪ್ತತೆಯೂ ಇದೆ....
एक खाब खुशि का दॆ खा नहि
देखा जॊ वो भूल गये..
मांगा हुवा तुम दे न सके..
जो तुमने दिया वो सेहने दो...
ಮೇಲಿನ ಸಾಲಿನಲ್ಲಿ ಅಡಗಿರುವ ನೋವು ಗಮನಿಸಿ. ಖುಷಿಯ ಕನಸು ಇಲ್ಲ ಹಾಗೆಯೇ ಆ ದೇವರ ಬಗ್ಗೆ ದೂರು ಇದೆ ಕೇಳಿದ್ದನ್ನು
ಕೊಡಲಾರದವ ಕೊಟ್ಟಿದ್ದನ್ನು ಸೈರಿಸುವ ಸಹನೆ ಕೊಡಲಿ.... ಈ ಸಾಲು ಎಲ್ಲಾ ಕಾಲಕ್ಕೂ ಪ್ರಸ್ತುತ ಅಲ್ಲವೆ....
क्या दर्द किसि का लॆगा कोइ...
इतना तो किसिमे दर्द नहि...
बेहते है आंसु और बहे..
अब झूठि तसल्लि रेहने दो..
ಇದಕ್ಕಿಂತ ನಿಷ್ಟುರಮಾತು ಇರಲಿಕ್ಕಿಲ್ಲ. ಮಂದಿಯ ದುಃಖವನ್ನು ಹಂಚಿಕೊಳ್ಳುವವರಿಲ್ಲ ಕಣ್ಣೀರು ಹರೆದರೆ ಒಣ ಸಮಾಧಾನದಿಂದ
ಏನೂ ಸಾಧ್ಯ ಇಲ್ಲ.
ಕ್ಕೈಫಿ ಆಜ್ಮಿ ಎಡಪಂಥೀಯ ನಿಲುವು ಹೊಂದಿದ್ದ. ಸಮಾಜ ಅದರ ಧೋರಣೆಯಬಗ್ಗೆಯೂ ಅವನಲ್ಲಿ ದ್ವೇಷ ಇತ್ತು.ಹಿಂದಿ ಚಿತ್ರರಂಗದಲ್ಲಿ ಸಿಕ್ಕ ಅಲ್ಪ ಅವಕಾಶದಲ್ಲಿಯೇ ಅವ ಮಿಂಚಿದ್ದ, ನೆನಪಿನಲ್ಲಿ ಉಳಿಯುವ ಹಾಡು ಕೊಟ್ಟಿದ್ದ. ಇದೇ ಅನುಪಮಾ ಚಿತ್ರದ
ಲತಾ ಹಾಡಿದ" ಕುಛ್ ದಿಲ್ ನೆ ಕಹಾ" ದ ಈ ಸಾಲು ಗಮನಿಸಿ.."कलियों से भी कोइ पूछता रॊति है या हसति है..."
ಹೇಮಂತಕುಮಾರ್ ಅಪರೂಪದ ಹಾಡು ನೀಡಿದ್ದಾನೆ. ದಾದಾ ಬರ್ಮನ್ ಇವನ ನಿರ್ಲಿಪ್ತ ದನಿಯ ಉಪಯೋಗ ಚೆನ್ನಾಗಿ ಮಾಡಿಕೊಂಡಿದ್ದ. ಹೇಮಂತ್ ದಾನದು ಅಪರೂಪದ ಧ್ವನಿ.