Sunday, April 26, 2009

ಸಹವಾಸ

ಇದು ಸುಮಾರು೧೯೯೯-೨೦೦೦ ರಲ್ಲಿ ನಡೆದದ್ದು..ಇರಬೇಕು.ಗದಗ ಸಾಹಿತ್ಯ ಪರಿಷತ್ ನವರು ನೀನಾಸಂ ಸಹಯೋಗದಲ್ಲಿ ಎರಡು
ದಿನಗಳ ಕಮ್ಮಟ ಏರ್ಪಡಿಸಿದ್ದರು. ನಾನೂ ಭಾಗಿಯಾಗಿದ್ದೆ... .ಟಿ.ಪಿ. ಅಶೋಕ್ , ಕೀರಂ , ಅಕ್ಷರ, ಕೀರ್ತಿನಾಥ ಕುರ್ತಕೋಟಿ, ಪ್ರಭುಸ್ವಾಮಿ ಹಿರೇಮಠ ಹೀಗೆ ದಿಗ್ಗಜರೆಲ್ಲ ಅಲ್ಲಿದ್ದರು. ಅವರ ಒಡನಾಟ ಆ ಎರಡು ದಿನ ಎಂದಿಗೂ ಮರೆಯುವ ಹಾಗಿಲ್ಲ ಉದ್ಘಾಟನೆಗೆ ಸನದಿ ಅವರು ಬಂದಿದ್ದರು...ಸಮಾರೋಪಕ್ಕೆ ಶಾಂತರಸ ಬಂದಿದ್ರು....ಇರಲಿ ನಾ ಹೇಳಹೊರಟಿರುವುದು ಬೇರೆ ವಿಷಯ ಹಾಂ ಮರೆತಿದ್ದೆ ಶಿಬಿರದಲ್ಲಿ ಪಾದರಸದಂತೆ ಓಡಾಡಿ ಆಯೋಜಿಸಿದವರು ಡಿವಿ ಬಡಿಗೇರ್ ಅವರು.

ಶಿಬಿರದಲ್ಲಿ ಸುಮಾರು ಮುವ್ವತ್ತು ಭಾಗಿದಾರರು ನಮ್ಮನ್ನು ೭-೮ ಜನರ ಗುಂಪು ಮಾಡಿ ಒಂದು ಕವಿತೆ ಕೊಟ್ಟು ಅದರ ಬಗ್ಗೆ ಚರ್ಚೆ,
ವಾದ , ಅಬಿಪ್ರಾಯ ಹಂಚಿಕೊಳ್ಳಲು ತಿಳಿಸಿದ್ದರು.ನಮ್ಮ ಗುಂಪಿಗೆ ಬಂದ ಮೊದಲ ಕವಿತೆ "ಕಪ್ಪು ಹುಡುಗ" ಮೈಸೂರು ಮಲ್ಲಿಗೆ ಕವಿ
ಬರೆದದ್ದು......ಈ ಸಾಲು ಗಮನಿಸಿ...’ಮಳೆ ಸೋಕಿನ ಸಂಜೆಯಲ್ಲಿ ಜನ ತುಂಬಿದ ಬೀದಿಯಲ್ಲಿ ಯಾರೋ ನನ್ನ ಹಿಂದೆ ನುಡಿದ ಹಾಗೆ ಆಯಿತು..ಕಿಟಕಿಯಲ್ಲಿ ಹರಡಿಕೊಂಡ ದಾಳಿಂಬೆಯ ಮುಳ್ಳಿನಿಂದ,ಅದರ ಬಿರಿದ ಹಣ್ಣಿನಿಂದ ಆ ಕೆಳಗಿನ ಕಣ್ಣಿನಿಂದ ಎದ್ದು ಬಂದ
ಕಪ್ಪು ಹುಡುಗ...’ ಮೇಲಿನ ಸಾಲು ಗಮನಿಸಿದಾಗ ನನಗೆ ಅನಿಸಿದ್ದು ಇದು ಓರ್ವ ಯುವತಿಯ ಪ್ರಲಾಪ ಅಂತ...ಆದರೆ ಕೀರಂ ತಿಳಿಸಿದರು ಕವಿ ಕಪ್ಪು ಮಣ್ಣಿನ ಬಗ್ಗೆ ಬರೆದಿದ್ದಾರೆ...ಅದು ಪ್ರತಿಮಾ ರೂಪದಲ್ಲಿ ಇದೆ... ಆ ಥರಾ ವಿಚಾರ ಮಾಡಿದರೆ ಹೌದು ಅನಿಸಿತು....

ಇನ್ನೊಂದು ಕವನ ಪುತಿನ ಅವರದು "ನೆರಳು" ಶಿರ್ಷಿಕೆ. ಗಾಂಧಿ ಕುರಿತಾಗಿ ಬರೆದದ್ದು . ಈ ಸಾಲು ಗಮನಿಸಿ"ಇದ ನೋಡಿ ನಾನು ನೆನೆವೆನಿಂದು ಇಂಥ ನೆಳಲೇನು ಗಾಂಧಿಯೆಂದು ಹರಿದತ್ತ ಹರಿಯ ಚಿತ್ತ ಈ ಧೀರ ನಡೆವನತ್ತ" ಕೊನೆಯ ಸಾಲು ನನಗೆ ಅಪಥ್ಯ ಎನ್ನಿಸಿತು... ಹರಿ ಅಥವಾ ವಿಧಿ ಹೇಳಿದಂತೆ ನಡೆದರೆ ಅದೇಗೆ ಅವರು ದೊಡ್ಡ ಮನುಷ್ಯ ಆಗಬಹುದು ದೊಡ್ಡ
ವ್ಯಕ್ತಿ ತನ್ನ ನಸೀಬು ತಾನೇ ಬರೆದುಕೊಳ್ಳುತ್ತಾನೆ ಇದು ನನ್ನ ವಾದ...ಸ್ವಲ್ಪ ಗಲಿಬಿಲಿ ಸಹ ಉಂಟುಮಾಡಿತು ಪ್ರಭುಸ್ವಾಮಿ ಅವರಂತೂ ದೊಡ್ಡವರ ರಚನೆ ಪ್ರಶ್ನಿಸುವ ಹಕ್ಕು ನಿಮಗಿದೆಯೇ ಅಂತ ಕೇಳಿದರು....

ಮರುದಿನ ಬೇಂದ್ರೆ ಚರಮ ಗೀತೆ "ನೀ ಹಿಂಗ್ ನೋಡಬ್ಯಾಡ ನನ್ನ" ಈ ಸಾಲು ಗಮನಿಸಿ..." ಮಲಗಿರುವ ಕೂಸು ಮಲಗಿರಲಿ
ಅಲ್ಲಿ ಮುಂದಿನದು ದೇವರ ಚಿತ್ತ ನಾ ತಡೀಲಾರೆ ಅದು ಯಾಕ ನೋಡತೀ ಮತ್ತ ಮತ್ತ ನೀ ಇತ್ತ". ಮುಂದಿನದು ದೇವರ ಚಿತ್ತ
ಅಂತ ಹೇಳಿದ್ದು ತೀರ ಅಸಹಾಯಕತೆ ಇದು ನನ್ನ ವಾದ...ಪ್ರಯತ್ನ ಮಾಡದೇ ಕೈ ಯಾಕೆ ಚೆಲ್ಲಿ ಕೂಡಬೇಕು ಇದು ನನ್ನ
ವಾದ. ಯಾಕೋ ಏನೋ ನನ್ನ ವಾದ ಅಡ್ಡ ಅಂತ ನನಗೆ ಅನಿಸಲೇ ಇಲ್ಲ...! ಉಳಿದ ಶಿಬಿರಾರ್ಥಿಗಳು ವಾದ ಮಾಡಿದ್ರು ನನ್ನ
ಜೊತೆ ..ಅಶೋಕ ಸಂಭಾಳಿಸಿದ್ರು. ಮುಂದೊಂದು ದಿನ ಬೇಂದ್ರೆ ಅವರ ಆ ಕವಿತಾ ವಿರಾಮವಾಗಿ ಓದಿದೆ ಆ ಕವಿತಾದಲ್ಲಡಗಿದ ಅಪಾರ ಆಳ ಅರಿವಿಗೆ ಬಂತು... ಏನೂ ಮಾಡಲಾರದ ಹತಾಶೆ ಆ ಗೊಂದಲದಲ್ಲಿ ಮೂಡಿದ ಅದ್ಭುತ ಕವಿತಾ ಅದು.

ಆ ಶಿಬಿರ ನನಗೆ ಅನೇಕ ಸಾಧ್ಯತೆ ತೆರೆಯಿತು ಹೆಚ್ಚೆಚ್ಚು ಓದತೊಡಗಿದೆ...ಓದಿದಂತೆಲ್ಲ ಬೆಳೆಯತೊಡಗಿದೆ. ಆ ಎರಡು ದಿನ ನಾ ಎಂದಿಗೂ ಮರೆಯುವುದಿಲ್ಲ...!

3 comments:

  1. ದೇಸಾಯಿಯವರೇ,
    ಹೀಗೆ ಅನುಭವಿಗಳ ನಡುವೆ ಒಡನಾಡಿದಾಗಲೇ ಹೆಚ್ಚು ಜ್ಞಾನ ಸ೦ಪಾದನೆಯಾಗುವುದು. ನಿಮಗೆ ಅ೦ತಹ ಅವಕಾಶ ಸಿಕ್ಕಿತ್ತು, ನೀವು ಧನ್ಯರು. ಕವಿತೆಗಳ ಬಗ್ಗೆ ವಿಭಿನ್ನ ದೃಷ್ಟಿಕೊನದ ವಿಮರ್ಶೆಗಳನ್ನು ಇನ್ನಷ್ಟು ಬರೆಯಿರಿ.

    ReplyDelete
  2. ಧನ್ಯವಾದ ಇಬ್ಬರಿಗೂ....

    ReplyDelete